ಕುಂದಾಪುರ, ಜು 08 (DaijiworldNews/HR): ಇಕೋ ಕಾರಿನಲ್ಲಿ ಕಳ್ಳತನ ಮಾಡಿ ಅಕ್ರಮವಾಗಿ ಸಾಗಿಸುತ್ತಿದ್ದ ಗೋವನ್ನು ಕುಂದಾಪುರ ಪೋಲಿಸರು ಕೋಡಿ ಬಳಿ ರಕ್ಷಿಸಿದ್ದು, ಮೂವರು ಆರೋಪಿಗಳು ಪರಾರಿಯಾಗಿದ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಅಕ್ರಮವಾಗಿ ಗೋವನ್ನು ಕಳವು ಗೈದು ಸಾಗಿಸುತ್ತಿದ್ದವರಲ್ಲಿ ಓರ್ವನನ್ನು ಅಬ್ದುಲ್ ಮುನಾಫ್ ಎಂದು ಗುರುತಿಸಲಾಗಿದ್ದು, ಆತನು ಈ ಹಿಂದೆ ಅಕ್ರಮ ಗೋ ಸಾಗಾಟ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ ಎಂದು ಪೋಲಿಸರು ತಿಳಿಸಿದ್ದಾರೆ.
ಅಕ್ರಮವಾಗಿ ಗೋವನ್ನು ಸಾಗಿಸುತ್ತಿದ್ದ ಇಕೋ ಕಾರಿನೊಳಗೆ ಮರದ ಹಿಡಿ ಇರುವ ಉದ್ದದ ತಲವಾರನ್ನು ಪೋಲಿಸರು ವಶಪಡಿಸಿಕೊಂಡಿದ್ದಾರೆ. ಜೊತೆಗೆ ಕಪ್ಪು ಬಣ್ಣದ ಟರ್ಪಾಲು ಮತ್ತು ನೈಲಾನ್ ಹಗ್ಗಗಳನ್ನು ಸ್ವಾಧೀನ ಪಡಿಸಿಕೊಂಡಿದ್ದಾರೆ.
ಶುಕ್ರವಾರ ಬೆಳಗ್ಗಿನ ಜಾವ ಕುಂದಾಪುರ ಠಾಣಾಧಿಕಾರಿ ಸದಾಶಿವ ಆರ್ ಗವರೋಜಿ, ಅವರಿಗೆ ಬಂದ ಖಚಿತ ಮಾಹಿತಿ ಆಧರಿಸಿ ಹಂಗಳೂರು ಕಡೆಯಿಂದ ಕೋಡಿ ಕಡೆಗೆ ವಾಹನಗಳನ್ನು ತಪಾಸಣೆ ಮಾಡುತ್ತಿದ್ದಾಗ ಕುಂದಾಪುರ ಕಸಬಾ ಗ್ರಾಮದ ಎಂ ಕೋಡಿಯ ಎನ್.ಎಂ.ಎ. ಕ್ಲಿನಿಕ್ ಬಳಿ ಹಂಗಳೂರು ಕಡೆಯಿಂದ ಕೋಡಿ ಕಡೆಗೆ ಬರುತ್ತಿದ್ದ ಇಕೋ ಕಾರನ್ನು ನಿಲ್ಲಿಸಲು ಸೂಚಿಸಿದಾಗ ಕಾರನ್ನು ನಿಲ್ಲಿಸದೇ, ಅಲ್ಲಿಂದ ರಸ್ತೆಯ ದಕ್ಷಿಣಕ್ಕೆ ಮಣ್ಣು ರಸ್ತೆಗೆ ತಿರುಗಿಸಿಕೊಂಡು ಸ್ವಲ್ಪ ಮುಂದಕ್ಕೆ ಹೋಗಿ ಒಂದು ಮನೆಯ ಎದುರಿನ ತೋಟದಲ್ಲಿ ನಿಲ್ಲಿಸಿ, ಅದರಲ್ಲಿದ್ದ ಚಾಲಕನು ಸೇರಿ ಮೂವರು ವ್ಯಕ್ತಿಗಳು ಪರಾರಿಯಾಗಿದ್ದಾರೆ.
ಇನ್ನು ಇಕೋ ಕಾರನ್ನು ಪರಿಶೀಲಿಸಿದಾಗ ಒಂದು ದೊಡ್ಡ ಗಂಡು ಕರುವನ್ನು ನೈಲಾನ್ ಹಗ್ಗದಿಂದ ಕುತ್ತಿಗೆ, ಕಾಲುಗಳನ್ನು ಬಿಗಿದು ಹಿಂಸಾತ್ಮಕವಾಗಿ ಕಟ್ಟಿ ಹಾಕಿರುವುದು ಪತ್ತೆಯಾಗಿದೆ. ಎಲ್ಲಿಂದಲೋ ದನವನ್ನು ಕಳವು ಮಾಡಿ ಅಕ್ರಮವಾಗಿ ವಧೆ ಮಾಡುವ ಉದ್ದೇಶದಿಂದ ಕಸಾಯಿಖಾನೆಗೆ ಸಾಗಾಟ ಮಾಡುತ್ತಿರುವುದಾಗಿ ಕುಂದಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.