ಉಡುಪಿ, ಜು 08(DaijiworldNews/SM): ಸಾರ್ವಜನಿಕರಿಗೆ ಸಂಚಾರಕ್ಕೆ ತೀವ್ರ ತೊಂದರೆ ಉಂಟು ಮಾಡುತಿದ್ದ ರಸ್ತೆ ಗುಂಡಿಯೊಂದನ್ನು ಸಾರ್ವಜನಿಕರೇ ಸೇರಿಕೊಂಡು ತಾತ್ಕಾಲಿಕ ತಡೆ ರಚಿಸಿ ಆಡಳಿತದ ಗಮನ ಸೆಳೆಯುವ ಪ್ರಯತ್ನ ಉಡುಪಿಯಲ್ಲಿ ನಡೆದಿದೆ. ಇಲ್ಲಿನ ಕರಾವಳಿ ಮಲ್ಪೆ ಮುಖ್ಯ ರಸ್ತೆಯ ಪಂದುಬೆಟ್ಟು ಎಂಬಲ್ಲಿ ರಸ್ತೆ ಮಧ್ಯೆ ಬೃಹತ್ ಗಾತ್ರದ ಹೊಂಡವೊಂದು ರಚಿತವಾಗಿದ್ದು ವಾಹನ ಸವಾರರಿಗೆ ತೀವ್ರ ಸಂಚಾಕಾರ ಒಡ್ಡಿತ್ತು.
ಕಳೆದ ನಾಲ್ಕು ದಿನಗಳಲ್ಲಿ 12ಕ್ಕೂ ಮಿಕ್ಕಿ ಅಪಘಾತಗಳು ಈ ಭಾಗದಲ್ಲಿ ಸಂಭವಿಸಿದ್ದು ದ್ವಿಚಕ್ರ ಸವಾರರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯ ಅಂಗಡಿ ಮಾಲಿಕರು ಮತ್ತು ಸಾರ್ವಜನಿಕರು ತಕ್ಷಣವೇ ಸ್ಪಂದಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸುವ ಕೆಲಸವನ್ನು ಮಾಡುತ್ತಲೇ ಬಂದಿದ್ದಾರೆ. ಇಲ್ಲಿನ ಗ್ರಾಮ ಪಂಚಾಯತ್, ನಗರಸಭೆ ಆಡಳಿತದ ಗಮನಕ್ಕೆ ತಂದರೂ ಕೂಡಾ ಇನ್ನೂ ಕೂಡಾ ಸಮಸ್ಯೆ ಬಗೆ ಹರಿದಿಲ್ಲ. ಮಳೆಯ ಕಾರಣ ನೀರು ಕೂಡಾ ರಸ್ತೆಯಲ್ಲಿ ಹರಿಯುವುದರಿಂದ ವಾಹನ ಸವಾರರು ಪ್ರಾಣ ಭಯವನ್ನು ಎದುರಿಸುತಿದ್ದಾರೆ. ಈ ಪರಿಸರದಲ್ಲಿ ಸೂಕ್ತ ದಾರಿದೀಪದ ವ್ಯವಸ್ಥೆ ಕೂಡಾ ಇಲ್ಲದಿರರುವುದು ಸಮಸ್ಯೆಯನ್ನು ಮತ್ತಷ್ಟು ಬಿಗಡಾಯಿಸಿದೆ ಎಂದು ಸಾರ್ವಜನಿಕರು ದೂರಿದ್ದಾರೆ.
ಈ ಎಲ್ಲಾ ಸಮಸ್ಯೆಗಳಿಂದ ಬೇಸತ್ತ ಇಲ್ಲಿನ ಸಾರ್ವಜನಿಕರು ರಸ್ತೆ ಗುಂಡಿಗೆ ತೆಂಗಿನ ಮರದ ಸೋಗೆ, ಮರದ ತುಂಡುಗಳನ್ನು ಅಡ್ಡವಾಗಿಟ್ಟು ಪ್ರತಿಭಟಿಸಿದರು.