ಬೈಂದೂರು, ಜು 07 (DaijiworldNews/MS): ಎಡೆಬಿಡದೇ ಕಳೆದ ಐದಾರು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಗೆ ನೆರೆ ಕಾಣಿಸಿಕೊಂಡಿದ್ದು ಬೈಂದೂರು ತಾಲೂಕಿನ ನಾವುಂದ ಗ್ರಾಮದ ಸಾಲ್ಬುಡ, ಕುದ್ರು ಪ್ರದೇಶ ಮುಳುಗಡೆಯಾಗಿದೆ.
ಸಾಲ್ಬುಡದ ಕುದ್ರು ಗ್ರಾಮದ ಸಂತ್ರಸ್ತರನ್ನು ಸುರಕ್ಷಿತ ಪ್ರದೇಶಕ್ಕೆ ಸ್ಥಳಾಂತರಿಸಲಾಗಿದೆ. ನಾವುಂದ ಕುದ್ರುವಿನಲ್ಲಿ ಯೋಗೀಶ ಕಾರಂತರ ಮನೆ ಕುಸಿದು ಬಿದ್ದಿದೆ. ಮರವಂತೆ, ಬಡಾಕೆರೆ ಮೊದಲಾದ ಪ್ರದೇಶಗಳಲ್ಲಿಯೂ ನೆರೆ ಕಾಣಿಸಿಕೊಂಡಿದೆ.
ಪಂಚಗಂಗಾವಳಿ ನದಿಗಳು ತುಂಬಿ ಹರಿಯುತ್ತಿದ್ದು ಹಲವೆಡೆ ನೆರೆ ಕಾಣಿಸಿಕೊಂಡಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿವೆ. ಹವಾಮಾನ ಇಲಾಖೆ ಈಗಾಗಲೇ ಎಚ್ಚರಿಕೆ ಮುನ್ಸೂಚನೆ ನೀಡಿದೆ.