ಬಂಟ್ವಾಳ, ಜು 07 (DaijiworldNews/MS): ಬಂಟ್ವಾಳದ ಪಂಜಿಕಲ್ಲಿನಲ್ಲಿ ಗುಡ್ಡ ಕುಸಿದು ಕಾರ್ಮಿಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮುನ್ನೆಚ್ಚರಿಕೆ ನೀಡಿದರೂ ಕಾರ್ಮಿಕರನ್ನು ತೆರವು ಮಾಡುವುದಕ್ಕೆ ನಿರ್ಲಕ್ಷ್ಯ ತೋರಿದ್ದಾರೆಂದು ಮನೆ ಮಾಲಕಿಯ ವಿರುದ್ದ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಾಗಿದೆ.
ಮನೆ ಮಾಲಕಿ ಬೆನಡಿಕ್ಟ್ ಕಾರ್ಲೋ ಅವರ ವಿರುದ್ದ ಪಂಜಿಕಲ್ಲು ಗ್ರಾಮ ಪಂಚಾಯತ್ನ ಗ್ರಾಮ ಕರಣಿಕ ಕುಮಾರ್ ಟಿ.ಸಿ. ಅವರು ದೂರು ನೀಡಿದ್ದಾರೆ.
ಜುಲೈ 5ರಂದು ಮನೆ ಮಾಲಕಿ ದೂರುದಾರರಿಗೆ ಕರೆ ಮಾಡಿ ಮನೆಯ ಅಂಗಳದ ಬದಿಯಲ್ಲಿರುವ ಸುಮಾರು 50-60 ಅಡಿ ಎತ್ತರದ ಧರೆ ಮಳೆಯಿಂದ ಕುಸಿತಗೊಂಡು ಅಂಗಳಕ್ಕೆ ಮಣ್ಣು ಜಾರಿರುವುದಾಗಿ ಹೇಳಿದ್ದು, ತಕ್ಷಣ ತೆರಳಿ ಪರಿಶೀಲನೆ ನಡೆಸಲಾಗಿದೆ. ಎತ್ತರದ ಧರೆಯು ಕುಸಿದು ಮನೆಯ ಅಂಗಳಕ್ಕೆ ಬಿದ್ದು ಅಡಿಕೆ ಒಣಗಿಸಲು ಮಾಡಿದ್ದ ಟರ್ಪಾಲಿನಿಂದ ರಚಿಸಿದ ಶೆಡ್ ಜಖಂಗೊಂಡಿತ್ತು. ಅಂಗಳದ ಬದಿಯಲ್ಲಿ ಬೆನಡಿಕ್ಟ್ ಕಾರ್ಲೋ ರವರ ಹಂಚು ಛಾವಣಿಯ ಹಳೆಯ ಮನೆಯು ಇದ್ದು ಅದರಲ್ಲಿ ರಬ್ಬರ್ ಟ್ಯಾಪಿಂಗ್ ಮಾಡುವ ಕೆಲಸದವರು ವಾಸ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಸಂಭಾವ್ಯ ಅಪಾಯ ತಪ್ಪಿಸುವ ಸಲುವಾಗಿ ಅವರನ್ನು ಅಲ್ಲಿಂದ ಕೂಡಲೇ ತೆರವು ಮಾಡುವಂತೆ ತಿಳಿಸಲಾಗಿದೆ. ಅಲ್ಲದೆ, ಬುಧವಾರ ವಿಪರೀತ ಮಳೆ ಹಿನ್ನೆಲೆಯಲ್ಲಿ ಮತ್ತೆ ಸಂಜೆ 5 ಗಂಟೆಗೆ ಮಾಲಕಿಗೆ ಕರೆ ಮಾಡಿ ಕಾರ್ಮಿಕರ ತೆರವಿಗೆ ಮೌಖಿಕ ಸೂಚನೆ ನೀಡಲಾಗಿದೆ. ಆದರೆ ಅವರು ತೆರವು ಮಾಡುವಲ್ಲಿ ನಿರ್ಲಕ್ಷ್ಯ ತೋರಿದ್ದಾರೆ. ಇದೇ ದಿನ ಸಂಜೆ ಸುಮಾರು 6.45ರ ವೇಳೆಗೆ ಗುಡ್ಡ ಪುನಃ ಕುಸಿತಕ್ಕೊಳಗಾಗಿ 60 ಮೀಟರ್ ತನಕ ಜಾರಿ ಹಳೆಯ ಹಂಚಿನ ಮನೆಯಲ್ಲಿ ವಾಸವಿದ್ದ 5 ಜನ ಕಾರ್ಮಿಕರು ಕಟ್ಟಡದ ಒಳಗೆ ಸಿಲುಕಿಕೊಂಡಿದ್ದರು. ನಾಲ್ವರ ಪೈಕಿ ಓರ್ವ ಶಬ್ದ ಕೇಳಿ ಹೊರ ಬಂದಿರುವುದರಿಂದ ಅಪಾಯದಿಂದ ಪಾರಾಗಿದ್ದಾರೆ. ಉಳಿದ ಮೂವರು ಜೀವ ಕಳೆದುಕೊಳ್ಳಬೇಕಾಗಿ ಬಂದಿದೆ. ಮೌಖಿಕ ಆದೇಶವನ್ನು ಮಾಲಕರು ನಿರ್ಲಕ್ಷಿಸಿರುವುದೇ ದುರಂತಕ್ಕೆ ಕಾರಣವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.