ಮಂಗಳೂರು, ಜು 07 (DaijiworldNews/DB): ಕಡಲ್ಕೊರೆತಕ್ಕೆ ಒಳಗಾಗಿರುವ ಉಳ್ಳಾಲದ ಬಟ್ಪಪಾಡೆ ಸ್ಥಳಕ್ಕೆ ವಿವಿಧ ಇಲಾಖೆಗಳ ಸಚಿವರು ಗುರುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕಂದಾಯ ಸಚಿವ ಆರ್. ಅಶೋಕ್, ಇಂಧನ, ಕನ್ನಡ ಮತ್ತು ಸಂಸ್ಕೃತಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನಿಲ್ ಕುಮಾರ್, ಬಂದರು, ಮೀನುಗಾರಿಕೆ ಹಾಗೂ ಒಳನಾಡು ಜಲಸಾರಿಗೆ ಸಚಿವ ಎಸ್. ಅಂಗಾರ, ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ., ಹಾಗೂ ಕಂದಾಯ ಅಧಿಕಾರಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ಮಾಡಿದರು.
ಸ್ಥಳೀಯರೊಂದಿಗೆ ಸಮಸ್ಯೆಗಳ ಕುರಿತು ಮಾಹಿತಿ ಪಡೆದರು. ಬಳಿಕ ಉಳ್ಳಾಲಕ್ಕೆ ತೆರಳಿ ಕಡಲ್ಕೊರೆತಕ್ಕೆ ಒಳಗಾದ ಪ್ರದೇಶಗಳನ್ನು ಪರಿಶೀಲಿಸಿದರು.
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಆರ್. ಅಶೋಕ್, ಕಡಲ್ಕೊರೆತದಿಂದಾಗಿ ಹಲವು ಮೀನುಗಾರರ ಮನೆಗಳು ಬಿದ್ದು ಹೋಗಿವೆ. ಇಲ್ಲೊಂದು ಅಕ್ರಮ ಕಟ್ಟಡವೂ ನಿರ್ಮಾಣವಾಗಿರುವುದನ್ನು ಗಮನಿಸಿದ್ದೇವೆ. ಕಡಲ್ಕೊರೆತ ತಡೆಗೆ ತಡೆಗೋಡೆ ನಿರ್ಮಾಣಕ್ಕೆ ಸಾರ್ವಜನಿಕರ ಬೇಡಿಕೆಯಿದೆ. ಈ ಬಗ್ಗೆ ಸಿಎಂ ಜೊತೆ ಮಾತನಾಡುತ್ತೇನೆ. ತಡೆಗೋಡೆ ನಿರ್ಮಿಸಿದರೆ ಶಾಶ್ವತ ಪರಿಹಾರ ದೊರಕಬಹುದೇ ಎಂಬ ಬಗ್ಗೆ ತಿಳಿದುಕೊಳ್ಳಲು ತಜ್ಞರ ತಂಡದಿಂದ ಸಮೀಕ್ಷೆ ಮಾಡಿಸಲಾಗುವುದು ಎಂದರು.
ರಾಜ್ಯದ ಏಳು ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಬಂದಿದೆ. ಮಳೆಯಿಂದಾಗಿ ಸಾಕಷ್ಟು ಹಾನಿಯಾಗಿದೆ. ಕೆಲವರ ಮನೆಗಳು ಸಂಪೂರ್ಣ ನಾಶವಾಗಿದ್ದು, ಅಂತಹವರಿಗೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಮನೆಗೆ ನೀರು ನುಗ್ಗಿ ಸಮಸ್ಯೆಯಾದವರಿಗೆ 10 ಸಾವಿರ ರೂ. ಪರಿಹಾರ ನೀಡಲಾಗುವುದು. ಎನ್ಡಿಆರ್ಎಫ್ ನಿಯಮ ಪ್ರಕಾರ ಮನೆ ಸಂಪೂರ್ಣ ನಾಶವಾದಲ್ಲಿ 95 ಸಾವಿರ ರೂ. ಮತ್ತು ಮನೆಗೆ ನೀರು ನುಗ್ಗಿ ಸಮಸ್ಯೆಯಾದರೆ 3 ಸಾವಿರ ರೂ. ಪರಿಹಾರ ನೀಡುವುದಾಗಿದೆ. ಆದರೆ ಇಂದು ಬೆಳಗ್ಗೆ ಸಿಎಂ ಜೊತೆ ಮಾತನಾಡಿ ಈ ಮೊತ್ತವನ್ನು ಕ್ರಮವಾಗಿ 5 ಲಕ್ಷ ರೂ. ಮತ್ತು 10 ಸಾವಿರ ರೂ.ಗಳಿಗೆ ಹೆಚ್ಚಳ ಮಾಡಲಾಗಿದೆ. ನಾಳೆ ಆದೇಶ ಬರಬಹುದು. ಶೀಘ್ರ ಈ ಪರಿಹಾರದ ಮೊತ್ತ ನೀಡಲಾಗುವುದು. ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದರು.
ಕಾಂಗ್ರೆಸ್ ಅವಧಿಯಲ್ಲಿ ಕಡಲು, ಕೊರೆತ ಇತ್ತು
ಕಡಲ್ಕೊರೆತ ಸಂಬಂಧಿಸಿ ರಾಜ್ಯ ಸರ್ಕಾರದ ಕಡೆಯಿಂದ ಯಾವುದೇ ಸಹಕಾರ ದೊರೆಯುತ್ತಿಲ್ಲ ಎಂಬ ಶಾಸಕ ಯು. ಟಿ. ಖಾದರ್ ಹೇಳಿಕೆ ವಿಚಾರವಾಗಿ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ವಿರೋಧ ಪಕ್ಷದ ವ್ಯಕ್ತಿಯಾಗಿ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಅವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಬಿಜೆಪಿ ಸರ್ಕಾರ ಬಂದು ಹೆಚ್ಚೆಂದರೆ ಹತ್ತು ವರ್ಷ ಆಗಿರಬಹುದು. ಆದರೆ ಅವರ ಸರ್ಕಾರ ಅರುವತ್ತು ವರ್ಷ ಅಧಿಕಾರದಲ್ಲಿತ್ತು. ಆಗ ಕಡಲೂ ಇತ್ತು, ಕೊರೆತವೂ ಇತ್ತು. ಅವರು ಏನು ಕ್ರಮ ಕೈಗೊಂಡಿದ್ದಾರೆ ಎಂದು ಪ್ರಶ್ನಿಸಿದರು.
ರಜೆ ಹಾಕದೆ ಕೆಲಸ ಮಾಡಿ
ಬಂಟ್ವಾಳದ ಪಂಜಿಕಲ್ಲುವಿನಲ್ಲಿ ಶೆಡ್ ಮೇಲೆ ಗುಡ್ಡ ಕುಸಿದು ಬಿದ್ದು ಮೃತಪಟ್ಟ ಮೂವರು ಕಾರ್ಮಿಕರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಲಾಗುವುದು. ಬಿರುಕು ಬಿಟ್ಟಿರುವ ಪ್ರದೇಶಗಳಲ್ಲಿ ನೀರು ನುಗ್ಗಿ ಭೂಕುಸಿತ ಸಂಭವಿಸುತ್ತಿದೆ. ಅಂತಹ ಅಪಾಯದಲ್ಲಿರುವ ಊರಿನ ಜನರನ್ನು ಮನವೊಲಿಸಿ ಸ್ಥಳಾಂತರ ಮಾಡುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅಧಿಕಾರಿಗಲು ರಜೆ ಹಾಕದೆ ಕೆಲಸ ಮಾಡಬೇಕು. ಯಾವುದೇ ಘಟನೆ ಎದುರಾದಲ್ಲಿ ತತ್ಕ್ಷಣ ಸ್ಥಳಕ್ಕೆ ತೆರಳಿ ಪರಿಹಾರ ಕಾರ್ಯ ಕೈಗೊಳ್ಳಬೇಕು ಎಂದವರು ಇದೇ ವೇಳೆ ಸೂಚಿಸಿದರು.