ಕಾರ್ಕಳ, ಜು 07 (DaijiworldNews/MS): ಶರಾಬು ಕುಡಿಯಲು ಹಣ ನೀಡದಕ್ಕೆ ವ್ಯಕ್ತಿಯೊಬ್ಬರಿಗೆ ಚೂರಿಯಿಂದ ಇರಿದು ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನ ಮುಂಡ್ಕೂರು ಗ್ರಾಮದ ಸಚ್ಚೇರಿಪೇಟೆಯಲ್ಲಿ ನಡೆದಿದೆ.
ಸತೀಶ್ ಪೂಜಾರಿ ಅಲಿಯಾಸ್ ಮುನ್ನ ಎಂಬಾತನೇ ಹಲ್ಲೆಗೈದ ಆರೋಪಿಯಾಗಿದ್ದು, ಸುನೀಲ್ ಟಿ. ಕುಲಾಲ್ (46) ಎಂಬುವವರು ಹಲ್ಲೆಗೊಳಗಾದವರು ಎಂದು ಗುರುತಿಸಲಾಗಿದೆ.
ಸುನೀಲ್ ಅವರಲ್ಲಿ ಸತೀಶನು ಶರಾಬು ಕುಡಿಯಲು ಆಗ್ಗಾಗ್ಗೆ ಹಣವನ್ನು ಕೇಳಿ ಪಡೆಯುತ್ತಿದ್ದು, ಇದೇ ವಿಚಾರವಾಗಿ ಜು. 5ರಂದು ಇಬ್ಬರು ಪರಸ್ಪರ ಮಾತಿಗೆ ಮಾತು ಬೆಳೆದು ಹಲ್ಲೆ ಕೂಡ ನಡೆಸಿಕೊಂಡಿದ್ದರು ಎನ್ನಲಾಗಿದೆ.
ಜು. 06 ರಂದು ಸುನೀಲ್ ಉಡುಪಿಗೆ ಹೋಗಲು ಸಚ್ಚೇರಿಪೇಟೆ ಬಸ್ಸು ನಿಲ್ದಾಣದ ಬಳಿ ನಿಂತುಕೊಂಡಿದ್ದಾಗ ಅಲ್ಲಿಗೆ ಬಂದ ಸತೀಶ್, ಸುನೀಲ್ರವರಲ್ಲಿ ಕುಡಿಯಲು ಹಣ ಕೇಳಿದ್ದು, ಸುನೀಲ್ ತನ್ನಲ್ಲಿ ಹಣವಿಲ್ಲ ಎಂದು ಹೇಳಿ ಉಡುಪಿಗೆ ಹೋಗಿದ್ದರು. ರಾತ್ರಿ ಸುನೀಲ್ ಉಡುಪಿಯಿಂದ ವಾಪಾಸು ಸಚ್ಚೇರಿಪೇಟೆ ಬಸ್ಸು ನಿಲ್ದಾಣದಲ್ಲಿ ಬಂದು ಇಳಿದಾಗ ಅಲ್ಲಿಗೆ ಬಂದ ಸತೀಶ್ ಮತ್ತೆ ಹಣಕೊಡುವಂತೆ ಕೇಳಿದ್ದು, ತನ್ನಲ್ಲಿ ಹಣ ಇಲ್ಲವೆಂದು ಹೇಳಿದ್ದರಿಂದ ಕೋಪಗೊಂಡ ಸತೀಶ್ ಸಚ್ಚೇರಿಪೇಟೆಯ ಗುರುದೇವ್ ಬಾರ್ ಅಂಡ್ ರೆಸ್ಟೋರೆಂಟ್ ಸಮೀಪದ ಶ್ರೀ ಸಾಯಿಕಮಲ್ ಕ್ಯಾಂಟೀನ್ ಮುಂದುಗಡೆ ಕೊಲೆ ಮಾಡುವ ಉದ್ದೇಶದಿಂದ ಕೈಯ್ಯಲ್ಲಿದ್ದ ಚೂರಿಯಿಂದ ಸುನೀಲ್ ಬೆನ್ನಿಗೆ, ಎದೆಗೆ, ಎಡಕಿವಿಯ ಬಳಿ ಹಾಗೂ ಹಣೆಗೆ ಇರಿದು ಮಾರಣಾಂತಿಕ ಹಲ್ಲೆಗೈದು, ಅವಾಚ್ಯ ಶಬ್ದಗಳಿಂದ ಬೈಯ್ದು, ಜೀವ ಬೆದರಿಕೆ ಹಾಕಿದ್ದಾನೆ ಎಂದು ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.