ಮಂಗಳೂರು, ಜು 07 (DaijiworldNews/MS): ಸರಕಾರಿ ಲೇಡಿಗೋಶನ್ ಆಸ್ಪತ್ರೆ ಯಲ್ಲಿ ವಿವಿಧ ಪ್ರಾಯೋಜಕರಿಂದ ಪ್ರಾಯೋಜಿಸಲ್ಪಟ್ಟ ಸುಮಾರು 20 ಲಕ್ಷ ವೆಚ್ಚದ ಕಾಮಗಾರಿಗಳನ್ನು ಮಂಗಳೂರು ವಿಧಾನಸಭಾ ದಕ್ಷಿಣ ಕ್ಷೇತ್ರದ ಶಾಸಕರಾದ ವೇದವ್ಯಾಸ ಕಾಮತ್ ಲೋಕಾರ್ಪಣೆಗೊಳಿಸಿದರು.
ಲಯನ್ಸ್ ಕ್ಲಬ್ ಇಂಟರ್ ನ್ಯಾಷನಲ್ ಇದರಿಂದ ಪ್ರಾಯೋಜಿತವಾದ ವಿಡಿಯೋ ಕಾನ್ಫರೆನ್ಸ್ ಹಾಲ್, ಡಾ. ಕುಸುಮಾಕರ್ ಸೂಡ USA ಇವರಿಂದ ಅನುದಾನಿತಗೊಂಡ ಡಾ.ಸೂಡ ವೈದ್ಯಕೀಯ ಶಿಕ್ಷಣ ಹಾಲ್ ಹಾಗೂ ಅತಿಗಣ್ಯರ ಸಮಾಲೋಚನಾ ಕೊಠಡಿ ಪ್ರಮುಖವಾದವುಗಳು.
ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಮಾತನಾಡಿದ ಶಾಸಕ ವೇದವ್ಯಾಸ ಕಾಮತ್ ಅವರು ಸರಕಾರಿ ಲೇಡಿಗೋಶನ್ ಆಸ್ಪತ್ರೆ ರಾಜ್ಯ ಹಾಗೂ ರಾಷ್ಟ್ರ ಮಟ್ಟದಲ್ಲಿ ಪ್ರಸಿದ್ಧಿಯನ್ನು ಪಡೆದಿದ್ದು ತಾಯಿ ಮಕ್ಕಳ ಆರೋಗ್ಯ ಸೇವೆಯಲ್ಲಿ ಗಮನಾರ್ಹ ಸೇವೆಯನ್ನು ನೀಡುತ್ತಾ ಬಂದಿದ್ದು, ಲಯನ್ಸ್ ನಂತಹ ಸೇವಾ ಸಂಸ್ಥೆಗಳು ತಮ್ಮ ಅನುದಾನದಿಂದ ಇಂತಹ ವಿಶಿಷ್ಟ ಸೇವಾ ಕಾರ್ಯವಾದಂತಹ ವಿಡಿಯೋ ಕಾನ್ಫರೆನ್ಸ್ ಹಾಲ್ ನ್ನು ಪ್ರಾಯೋಜಿಸಿರುವುದು ಶ್ಲಾಘನೀಯ ಎಂದರು.
ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ/ದುರ್ಗಾಪ್ರಸಾದ್. ಎಂ. ಆರ್ ಇವರು ಪ್ರಾಸ್ತಾವಿಕ ನೆಲೆಯಲ್ಲಿ ಮಾತನಾಡುತ್ತಾ ಸರಕಾರಿ ಲೇಡಿಗೋಶನ್ ಆಸ್ಪತ್ರೆ ಯಲ್ಲಿ ಕರ್ತವ್ಯನಿರ್ವಹಿಸುತ್ತಿರುವ ನೊಂದ ಮಹಿಳೆಯರ ಆಶಾಕಿರಣ 'ಸಖಿ' ಒನ್ ಸ್ಟಾಪ್ ಸೆಂಟರ್ ಇದರ ಫಲಾನುಭವಿಗಳಿಗೆ ಕೋರ್ಟ್ ಕಲಾಪಗಳಿಗೆ ಸರ್ಕಾರಿ ಲೇಡಿಗೋಶನ್ ಆಸ್ಪತ್ರೆಯ ಸಖಿ ಕೇಂದ್ರದಲ್ಲಿದ್ದುಕೊಂಡೇ ಹಾಜರಾಗುವಂತಾಗಲು ಈ ವಿಡಿಯೋಕಾನ್ಫರೆನ್ಸ್ ಹಾಲ್ ಬಹುದೊಡ್ಡ ವರ ಎಂದರು. ವಿಡಿಯೋ ಕಾನ್ಫರೆನ್ಸ್ ಹಾಲ್ ನ ಪ್ರಾಯೋಜಕರಾದ 2021-22ನೇ ಸಾಲಿನ ಲಯನ್ಸ್ ಜಿಲ್ಲೆ 317 D ಇದರ ರಾಜ್ಯಪಾಲರು ಹಾಗೂ ಪ್ರಸಕ್ತ ಮಲ್ಟಿಪಲ್ ಕೌನ್ಸಿಲ್ ಚೆಯರ್ ಪರ್ಸನ್ ಲಯನ್ ವಸಂತ್ ಕುಮಾರ್ ಶೆಟ್ಟಿ ಇವರು ಸಂತ್ರಸ್ತ ಹೆಣ್ಣು ಮಕ್ಕಳಿಗೆ ಅನುಕೂಲಕರವಾಗಿ ಪರಿಣಮಿಸಿದ ವಿಡಿಯೋ ಕಾನ್ಫರೆನ್ಸ್ ಹಾಲನ್ನು ಸರಕಾರಿ ಲೇಡಿಗೋಶನ್ ಗೆ ಒದಗಿಸಿಕೊಟ್ಟ ಸಂತೃಪ್ತತೆ ತನಗಿದೆ ಎಂದು ಹೇಳುತ್ತಾ ಇನ್ನೂ ಹೆಚ್ಚಿನ ಸೇವಾಕಾರ್ಯಗಳನ್ನು ಲಯನ್ಸ್ ಸೇವಾ ಸಂಸ್ಥೆ ಈ ಆರೋಗ್ಯ ಸಂಸ್ಥೆಗೆ ಮಾಡಲು ಉದ್ಯುಕ್ತವಾಗಿದೆ ಎಂದರು.
'ಸಖಿ'' ಒನ್ ಸ್ಟಾಪ್ ಸೆಂಟರ್ ಇದರ ಘಟಕ ಆಡಳಿತಾಧಿಕಾರಿ ಶ್ರೀಮತಿ ಪ್ರಿಯಾ ಕೆ. ಸಿ. ಇವರು ಸಖಿ ಒನ್ ಸ್ಟಾಪ್ ಸೆಂಟರ್ ನ ಕಾರ್ಯವೈಖರಿ ಬಗೆಗೆ ಸಂಕ್ಷಿಪ್ತ ಮಾಹಿತಿಯನ್ನು ಸಭೆಗೆ ನೀಡಿದರು. 'ಸಖಿ' ಒನ್ ಸ್ಟಾಪ್ ಸೆಂಟರ್ ಬಗ್ಗೆ ಸಖಿ ಸೆಂಟರ್ ಹಾಗೂ ಸರಕಾರಿ ಲೇಡಿಗೋಶನ್ ಆಸ್ಪತ್ರೆಯ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡಿದ ಸಾಕ್ಷ್ಯ ಚಿತ್ರವನ್ನು ಮಾನ್ಯ ಶಾಸಕರು ಬಿಡುಗಡೆಗೊಳಿಸಿದರು. ಪ್ರಾಯೋಜಕರುಗಳನ್ನು ಗೌರವಿಸಿ ಸನ್ಮಾನಿಸಲಾಯಿತು. ಗವರ್ನರ್ ಲಯನ್ ಸಂಜೀತ್ ಶೆಟ್ಟಿ, ನಿವಾಸಿ ವೈದ್ಯಾಧಿಕಾರಿ ಡಾ/ಬಾಲಕೃಷ್ಣ ರಾವ್ ಎನ್. ಎಸ್, ಅಭಿಯಂತರರಾದ ಶ್ರೀ. ರಾಜೇಶ್ ರೈ.,ಕಂಟ್ರಾಕ್ಟ್ ದಾರರಾದ ಹೇಮಂತ್, ಗುರುಪ್ರಸಾದ್, ಯೋಗೀಶ್ ಮುಂತಾದವರು ಉಪಸ್ಥಿತರಿದ್ದರು. ಸುಮಂಗಲಾ ಕಾರ್ಯಕ್ರಮ ನಿರೂಪಿಸಿದರು. ಅಂಬಿಕಾ ಸ್ವಾಗತಿಸಿ, ಶ್ರೀಮತಿ ಹರಿಣಾಕ್ಷಿ ವಂದಿಸಿದರು