ಮಂಗಳೂರು, ಜು 07 (DaijiworldNews/DB): ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಗುರುವಾರವೂ ಧಾರಾಕಾರ ಮಳೆ ಮುಂದುವರಿದಿದ್ದು, ಜಿಲ್ಲೆಯ ವಿವಿಧೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಜನಜೀವನಕ್ಕೆ ಸಮಸ್ಯೆ ತಂದೊಡ್ಡಿದೆ. ಕೃಷಿ ತೋಟಗಳಿಗೆ ನೀರು ನುಗ್ಗಿದ ಪರಿಣಾಮ ಕೃಷಿಗೆ ಹಾನಿಯಾಗಿದೆ.
ಮಂಗಳೂರು ನಗರದಲ್ಲಿ ಬೆಳಗ್ಗೆ ಸ್ವಲ್ಪ ಬಿಡುವು ಪಡೆದಿದ್ದ ಮಳೆ ಬಳಿಕ ಬಿರುಸು ಪಡೆದಿದೆ. ಕಳೆದ ನಾಲ್ಕೈದು ದಿನಗಳಿಂದ ಸುರಿಯುತ್ತಿರುವ ನಿರಂತರ ಮಳೆಗೆ ಜನ ಹೈರಾಣಾಗಿದ್ದು, ಮಳೆಯಲ್ಲಿ ನೆನೆದುಕೊಂಡೇ ಕಚೇರಿ, ದೈನಂದಿನ ಕೆಲಸಗಳಿಗೆ ತೆರಳುವಂತಾಗಿದೆ. ಕೆಲವೆಡೆ ರಸ್ತೆಯಲ್ಲಿ ನೀರು ನಿಂತು ನಗರದ ವಿವಿಧೆಡೆ ತಗ್ಗು ಪ್ರದೇಶಗಳಲ್ಲಿ ನೀರು ನಿಂತು ಸಮಸ್ಯೆ ತಂದೊಡ್ಡಿದೆ. ಕೆಲವು ಮನೆ ಅಂಗಳಕ್ಕೂ ನೀರು ನುಗ್ಗಿದೆ. ಬಿರುಸಿನ ಮಳೆಗೆ ಸಂಚಾರವೂ ಅಸ್ತವ್ಯಸ್ಥಗೊಂಡಿದ್ದು, ನಗರದ ಪಿವಿಎಸ್, ಹಂಪನಕಟ್ಟೆ, ಲಾಲ್ಬಾಗ್ ಮುಂತಾದೆಡೆ ಸಂಚಾರದಟ್ಟಣೆ ಉಂಟಾಗಿದೆ.
ಜಿಲ್ಲೆಯಲ್ಲಿ ಧಾರಾಕಾರ ಮಳೆ ಹಿನ್ನೆಲೆಯಲ್ಲಿ ಇಂದು ರೆಡ್ ಎಲರ್ಟ್ ಘೋಷಿಸಲಾಗಿದೆ. ತಗ್ಗು ಪ್ರದೇಶ, ಸಮುದ್ರ, ನದಿ ಬದಿಗಳಲ್ಲಿ ವಾಸಿಸುವವರು ಎಚ್ಚರಿಕೆ ವಹಿಸಲು ಈಗಾಗಲೇ ಜಿಲ್ಲಾಡಳಿತ ಸೂಚನೆ ನೀಡಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿದೆ.