ಉಳ್ಳಾಲ, ಜು 06(DaijiworldNews/SM): ಗ್ರಾಮಸ್ಥರ ಸಮಸ್ಯೆಗಳಿಗೆ ಪರಿಹಾರ ಸಿಗದೇ, ಕೇಳಿದ ಪ್ರಶ್ನೆಗಳಿಗೆ ಸೂಕ್ತ ಉತ್ತರ ದೊರೆಯದೆ ಇಡೀ ಗ್ರಾಮಸಭೆ ಗದ್ದಲಗಳಿಂದಲೇ ಮುಗಿದ ಪ್ರಸಂಗ ಮಂಜನಾಡಿಯ ಗ್ರಾ.ಪಂ ಸಭಾಂಗಣದಲ್ಲಿ ಜರಗಿದ ಮಂಜನಾಡಿ ಗ್ರಾಮಸಭೆಯಲ್ಲಿ ನಡೆಯಿತು.
ಉರುಮಣೆ ಕ್ರಾಸ್ ಬಳಿ ಬೃಹತ್ ಬಂಗಲೆಯೊಂದು ವಾಣಿಜ್ಯ ಉಪಯೋಗಕ್ಕಾಗಿ ನಿರ್ಮಾಣವಾಗುತ್ತಿದೆ. ಬಂಗಲೆ ನಿರ್ಮಾಣದಿಂದ ಸಮೀಪದ ರಸ್ತೆ ಸಂಪೂರ್ಣ ಮಣ್ಣಿನಿಂದ ಆವರಿಸಿತ್ತು. ಇಲ್ಲಿ ಮೋರಿಯನ್ನು ಅಳವಡಿಸಲು ಗ್ರಾ.ಪಂ ಆಡಳಿತ ರೂ.5 ಲಕ್ಷ ನೀಡಿದೆ. ಆದರೆ ಒಂದು ವರ್ಷದಿಂದ ಅಸೈ ಸಮೀಪ ಬಡ ಕುಟುಂಬದ ಮನೆಗೆ ತಡೆಗೋಡೆಯ ಅಗತ್ಯವಿದ್ದು, ಅದಕ್ಕಾಗಿ ಒಂದು ವರ್ಷದಿಂದ ಮನವಿ ನೀಡಿದ್ದರೂ ಅನುದಾನದ ಕೊರತೆಯ ಉತ್ತರವನ್ನು ಗ್ರಾ.ಪಂ ಆಡಳಿತ ಹಾಗೂ ಅಧಿಕಾರಿಗಳು ನೀಡಿದ್ದಾರೆ. ಅಲ್ಲದೆ ಪದೋಳಿಕಟ್ಟೆ ಅಸಹಾಯಕ ಕುಟುಂಬದ ಮನೆಯ ಹಿಂಬದಿಯಲ್ಲೇ, ಗ್ರಾ.ಪಂ ಸದಸ್ಯರೊಬ್ಬರೇ ವಾಣಿಜ್ಯ ಉದ್ದೇಶಕ್ಕಾಗಿ ಬೃಹತ್ ಗಾತ್ರದಲ್ಲಿ ಮಣ್ಣನ್ನು ಅಗೆದು ಕಟ್ಟಡ ನಿರ್ಮಿಸುತ್ತಿದ್ದಾರೆ. ಈ ಮನೆಗೆ ತಡೆಗೋಡೆಯ ಅವಶ್ಯಕತೆ ಕುರಿತು ವರ್ಷಗಳ ಹಿಂದೆ ಮನವಿ ಮಾಡಲಾಗಿತ್ತು. ಅದಕ್ಕೂ ಅನುದಾನದ ಕೊರತೆಯ ಉತ್ತರ ನೀಡಲಾಗಿತ್ತು. ಆದರೆ ಐದು ತಿಂಗಳ ಬೆಳವಣಿಗೆಯಲ್ಲಿ ಉದ್ಯಮಿಯ ಹಿತಾಸಕ್ತಿಯಂತೆ ರೂ. 5 ಲಕ್ಷ ಅನುದಾನದಲ್ಲಿ ಮೋರಿಯನ್ನು ನಿರ್ಮಿಸಲಾಗಿರುವುದು ಬಡ ಕುಟುಂಬಗಳಿಗೆ ಮಾಡಿರುವ ಅನ್ಯಾಯ ಎಂದು ಆರೋಪಿಸಿದರು.
ನಿವೇಶನ ರಹಿತರ ಐದು ವರ್ಷ ಮುಂಚಿನ ಅರ್ಜಿಯ ಸರ್ವೇ ನಡೆಸಿ ಪುನರ್ ಪರಿಶೀಲನೆ ಅಧಿಕಾರಿಗಳಿಂದ ನಡೆಯಬೇಕು. ಓರ್ವ ಸದಸ್ಯನ ಕೈಯಲ್ಲಿ ಒಂಭತ್ತು ಮನೆಗಳಿವೆ. ಆತನಿಗೆ ಬೇಕಾದ ರೀತಿಯಲ್ಲಿ ಹಂಚಿಕೆ ಮಾಡಲಾಗುತ್ತಿದೆ. ಇದರಲ್ಲಿ ಲೀಸ್ ಗೆ ಮನೆ ಕೊಟ್ಟವರ ಹೆಸರು ನಿವೇಶನರಹಿತರಿಗೆ ನೀಡುವ ನಿವೇಶನದಲ್ಲಿ ಹಂಚಿಕೆಯಾಗುತ್ತಿದೆ. ಜಿಲ್ಲಾಧಿಕಾರಿಗಳು, ಜಿ.ಪಂ , ತಾ.ಪಂ, ಪುನರ್ ಸರ್ವೇ ನಡೆಸಲು ಆದೇಶ ನೀಡಿದ್ದರೂ ಗ್ರಾ.ಪಂ ಆಡಳಿತ ಮಾತ್ರ ಈವರೆಗೆ ನಡೆಸದೇ ಇರುವುದು ಅನುಮಾನಗಳಿಗೆ ಕಾರಣವಾಗಿದೆ. ಬಂಡಸಾಲೆಯ ಮಹಿಳೆಯೊಬ್ಬರು ಗ್ರಾ.ಪಂ ಗೆ ಸಮಸ್ಯೆ ಕುರಿತು ದೂರು ನೀಡಲು ಬಂದಾಗ ಪಂ.ಸದಸ್ಯರೊಬ್ಬರು ದುರ್ನಡತೆ ತೋರಿದ್ದಾರೆ.
ಮೊಂಟೆಪದವು ನಿವಾಸಿ ಕಾಂಗ್ರೆಸ್ ನಾಯಕರೊಬ್ಬರು ಮಂಗಳನಗರ ಮೊದಲ ಮಸೀದಿ ಬಳಿಯಿರುವ ಖಾಲಿ ಜಾಗವನ್ನು ಖರೀದಿಸಿ ಸಮತಟ್ಟುಗೊಳಿಸಿರುವುದರಿಂದ ಹಲವು ಮನೆಯವರು ಮನೆಗಳನ್ನು ತೊರೆಯುವಂತೆ ಆಗಿದೆ. ಈಗಾಗಲೇ ಒಂದು ಮನೆಯವರು ಖಾಲಿ ಮಾಡಿದ್ದಾರೆ. ಆದರೆ ಮಾಲೀಕರಿಗೆ ಎಚ್ಚರಿಕೆ, ನೋಟೀಸು ನೀಡುವ ಕೆಲಸ ಈವರೆಗೆ ಗ್ರಾ.ಪಂ ನಿಂದ ಆಗಿಲ್ಲ. ಒಂದು ವರ್ಷದಿಂದ ಸಮಸ್ಯೆಯಿದ್ದರೂ ಗ್ರಾಮಸಭೆಗೆ ಕರೆಸಿ ಎಚ್ಚರಿಕೆ ನೀಡಬೇಕೆನ್ನುವ ಒತ್ತಾಯವಿದ್ದರೂ ಕರೆಸಲಾಗಿಲ್ಲ. ಮಂಗಳನಗರ 3ನೇ ವಾರ್ಡಿನಲ್ಲಿರುವ ಬೀದಿಬದಿ ವ್ಯಾಪಾರಿಯೊಬ್ಬರ ಮನೆ ಅಂಗಳದಲ್ಲಿಯೇ ಗುತ್ತಿಗೆದಾರರೊಬ್ಬರು ತನಗೆ ಅನೂಕಲವಾಗುವ ರೀತಿಯಲ್ಲಿ ಮೋರಿ ಹಾಕಿರುವದರಿಂದ ಮನೆಯಂಗಳದಲ್ಲಿ ತ್ಯಾಜ್ಯರಾಶಿ, ನೀರು ಸೇರುವುದರಿಂದ ವಾಸಿಸಲು ಅಸಾಧ್ಯವಾಗಿದೆ. ಈ ಬಗ್ಗೆ ಗುತ್ತಿಗೆದಾರರ ಹಣ ತಡೆಹಿಡಿಯುವುದಾಗಿ ಹೇಳಿರುವ ಅಧಿಕಾರಿಗಳು, ಮನೆಯವರ ಸಂಕಷ್ಟವನ್ನು ಇತ್ಯರ್ಥಗೊಳಿಸಲು ಮುಂದಾಗುತ್ತಿಲ್ಲ ಅನ್ನುವ ಆರೋಪವನ್ನು ಗ್ರಾಮಸ್ಥ ಮೊಹಮ್ಮದ್ ಆಸೀಫ್ ಬಾವಾ ಮಾಡಿದರು.
ಮಾಜಿ ಅಧ್ಯಕ್ಷ ಇಸ್ಮಾಯಿಲ್ ದೊಡ್ಡಮನೆ ಮಾತನಾಡಿ, ಶಾಸಕರ ರೂ.40 ಲಕ್ಷ ಖರ್ಚು ಮಾಡಿ ನಿರ್ಮಿಸಿದ ಆರಂಗಡಿ ರಸ್ತೆ ಪೂರ್ಣಗೊಳ್ಳಲು ರೂ.1 ಲಕ್ಷ ಅನುದಾನವನ್ನು ಗ್ರಾ.ಪಂ ನಿಂದ ನೀಡಲು ಅಸಾಧ್ಯವಾಗಿದೆ. ವಾರ್ಡಿನ ಸದಸ್ಯರೂ ಮುಂಗಡವಾಗಿ ಅನುದಾನವಿಲ್ಲದಿದ್ದರೂ ಹೊಸ ಕಾಮಗಾರಿಗಳನ್ನು ನಡೆಸುತ್ತಾ ಬಂದಿದ್ದಾರೆ. ಶಾಸಕರ ಕೆಲಸಗಳನ್ನು ಅಪಮಾನ ಮಾಡುವ ಕೆಲಸವಾಗುತ್ತಿದೆ. ಗ್ರಾಮದ ಅಭಿವೃದ್ಧಿ ಅಧಿಕಾರಿ ಕಚೇರಿಯಲ್ಲಿ ಇರದೆ ಸಾರ್ವಜನಿಕರ ಕೈಗೇ ಸಿಗುತ್ತಿಲ್ಲ. ಸಮಗ್ರ ಗ್ರಾಮದ ಆಡಳಿತವನ್ನು ನಿರ್ವಹಿಸಬೇಕಾದ ಅಭಿವೃದ್ಧಿ ಅಧಿಕಾರಿಯೇ ಸರಿಯಾಗಿಲ್ಲ ಎಂಬ ಆರೋಪ ಮಾಡಿದರು. ತ್ಯಾಜ್ಯ ನಿರ್ವಹಣೆಗೆ ಒಂದು ಲೋಡ್ ಬಕೆಟ್ ಗಳನ್ನು ತರಿಸಲಾಗಿತ್ತು. ಅದು ಎಲ್ಲಿ ಹೋಗಿದೆ ಅನ್ನುವುದೇ ಗೊತ್ತಿಲ್ಲ ಎಂಬ ಆರೋಪವನ್ನು ಮಾಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಭಿವೃದ್ಧಿ ಅಧಿಕಾರಿ ` ಪ್ರತಿದಿನವೂ ಗ್ರಾಮದಲ್ಲಿರುತ್ತೇನೆ. ಕಚೇರಿ ಸಮಯದಲ್ಲಿ ಸಭೆಗಳಿದ್ದರೆ ನೋಟೀಸು ಬೋರ್ಡಿನಲ್ಲಿ ಹಾಕಿಯೇ ಹಾಗೂ ಸಿಬ್ಬಂದಿಯಲ್ಲಿ ತಿಳಿಸಿಯೇ ಹೋಗಿರುತ್ತೇನೆ. ಕಾರಣವಿಲ್ಲದೆ ಎಂದೂ ತೆರಳುವುದಿಲ್ಲ. ಗುಣಮಟ್ಟದ ಬಕೆಟ್ ಗಳನ್ನು ತಂದಿಲ್ಲ ಎಂದು ಬಂದಿರುವ ಲೋಡನ್ನು ವಾಪಸ್ಸು ಕಳುಹಿಸಲಾಗಿದೆ. ಆ ಬಳಿಕ ಯಾವುದೇ ಸಭೆಗಳಲ್ಲಿ ಬಕೆಟ್ ಕುರಿತು ಚರ್ಚೆಗಳಾಗದೆ ಯೋಜನೆ ಹಾಗೆ ನಿಂತಿದೆ ಎಂದರು.
ಸಭೆಯುದ್ದಕ್ಕೂ ನಡೆದ ಚರ್ಚೆಗಳು ಗೊಂದಲಕ್ಕೆ ಕಾರಣವಾಗಿ ಹಲವರು ವೇದಿಕೆಯಿಂದ ಎದ್ದು ಹೊರನಡೆದರೆ, ಗ್ರಾಮಸ್ಥರು ಕೇಳಿರುವ ಪ್ರಶ್ನೆಗೆ ಸಮಗ್ರ ಉತ್ತರ ಸಿಗದೇ ಗದ್ದಲವನ್ನು ನಿಲ್ಲಿಸಲು ಪೊಲೀಸ್ ಸಿಬ್ಬಂದಿ ಮಧ್ಯಪ್ರವೇಶಿಸಬೇಕಾಯಿತು. ಸಭೆಯಿಡೀ ಅಶಿಸ್ತಿನಿಂದಲೇ ನಡೆಯುತ್ತಿರುವುದನ್ನು ನೋಡೆಲ್ ಅಧಿಕಾರಿ ವಿರೋಧಿಸಿದರೂ ಗ್ರಾಮಸ್ಥರು ಪಟ್ಟುಬಿಡದೆ ಪ್ರಶ್ನೆಗಳನ್ನು ಕೇಳುತ್ತಲೇ ಇದ್ದರು.
ನೋಡೆಲ್ ಅಧಿಕಾರಿಯಾಗಿ ತೋಟಗಾರಿಕಾ ಸಹಾಯಕ ನಿರ್ದೇಶಕ ಪ್ರವೀಣ್ ಭಾಗವಹಿಸಿದ್ದರು. ಮಂಜನಾಡಿ ಗ್ರಾ.ಪಂ ಅಧ್ಯಕ್ಷೆ ನಸ್ರೀನಾ ಇಕ್ಬಾಲ್, ಉಪಾಧ್ಯಕ್ಷ ವಿನ್ಸೆಂಟ್, ಅಭಿವೃದ್ಧಿ ಅಧಿಕಾರಿ ರಮ್ಯಾ ಕೆ.ಎಸ್, ಅಂಗನವಾಡಿ ಮೇಲ್ವಿಚಾರಕಿ ಕಲ್ಪನಾ, ವೈದ್ಯಾಧಿಕಾರಿ ಹರ್ಷಿತಾ, ಆಹಾರ ನಿರೀಕ್ಷಕ ಪ್ರಕಾಶ್, ಗ್ರಾಮಕರಣಿಕ ಸಂತೋಷ್ ಮೊದಲಾದವರು ಉಪಸ್ಥಿತರಿದ್ದರು.