ಸುಳ್ಯ, ಜೂ 30 (DaijiworldNews/SM): ಇಲ್ಲಿನ ದೇವಚಳ್ಳ ಗ್ರಾಮದ ತಳೂರು ಎಂಬಲ್ಲಿ ತಾಯಿಯೂ ನಾಲ್ಕು ವರ್ಷ ಪ್ರಾಯದ ಮಗಳ ಜೊತೆ ಬಾವಿಗೆ ಹಾರಿದ ಪ್ರಕರಣ ತಿರುವು ಪಡೆದುಕೊಂಡಿದೆ. ಮೃತಳ ಅತ್ತೆ, ಮೈದುನ ಹಾಗೂ ಮೈದುನನ ಹೆಂಡತಿಯ ವಿರುದ್ದ ಆತ್ಮಹತ್ಯೆಗೆ ಪ್ರಚೋದನೆ ಪ್ರಕರಣ ದಾಖಲಾಗಿದೆ. ಘಟನೆಯಲ್ಲಿ ತಾಯಿ ಮೃತಪಟ್ಟರೆ, ಮಗಳು ಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದಾಳೆ.
ಅಗ್ನಿಶಾಮಕ ದಳದ ಸಿಬ್ಬಂದಿ ಸ್ಮಾರಕ ದಯಾನಂದ ಎಂಬವರ ಪತ್ನಿ ಸುಳ್ಯದ ನೆಹರೂಮೆಮೊರಿಯಲ್ ಕಾಲೇಜಿನಲ್ಲಿ ಕ್ಲರ್ಕ್ ಆಗಿರುವ ಗೀತಾ (25) ಮೃತಪಟ್ಟವರು. ದಂಪತಿಗಳ ನಾಲ್ಕು ವರ್ಷದ ಮಗಳು ಪೂರ್ವಿಕಾ ಪವಾಡ ಸದೃಶ್ಯ ಎಂಬಂತೆ ಬದುಕಿದ್ದಾಳೆ. ಗೀತಾರವರು ಸುಳ್ಯ ತಾಲೂಕಿನ ಮಂಡೆಕೋಲು ಗ್ರಾಮದ ಮುರೂರು ಮನೆಯ ಪುಟ್ಟಣ್ಣ ಗೌಡ ಹಾಗೂ ಪುಷ್ಪಾವತಿ ದಂಪತಿಯ ದ್ವಿತೀಯ ಪುತ್ರಿ . ಈಕೆಯನ್ನು ಸುಳ್ಯದ ದೇವಚಳ್ಳ ಗ್ರಾಮದ ತಳೂರು ನಿವಾಸಿ ದಯಾನಂದ ಅವರಿಗೆ 5 ವರ್ಷದ ಹಿಂದೆ ವಿವಾಹ ಮಾಡಿಕೊಡಲಾಗಿತ್ತು
ಗೀತಾರವರು ಜೂ .29 ರಂದು ಬೆಳಿಗ್ಗೆ ಮಗಳನ್ನು ಸೊಂಟಕ್ಕೆ ಕಟ್ಟಿಕೊಂಡು ತನ್ನ ಗಂಡನ ಮನೆಯ ಬಾವಿಗೆ ಹಾರಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಬುಧವಾರ ಮುಂಜಾನೆ ದಯಾನಂದ ಹಾಗೂ ಮನೆಯವರು ಎದ್ದು ನೋಡಿದಾಗ ಗೀತಾ ಮತ್ತು ಮಗು ಮನೆಯಲ್ಲಿ ಇಲ್ಲದಿರುವುದನ್ನು ಕಂಡು ಹುಡುಕಾಡಿದಾಗ ಬಾವಿಯಲ್ಲಿ ಮಗಳು ಮತ್ತು ಪತ್ನಿ ಬಿದ್ದಿರುವುದು ಕಂಡುಬಂತು.
ಮಗಳು ಬಾವಿಯೊಳಗೆ ಇದ್ದ ಕಲ್ಲನ್ನು ಹಿಡಿದುಕೊಂಡು ಬದುಕುಳಿದಿದ್ದು, ಸುಳ್ಯ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿಗೆ ಆಸ್ಪತ್ರೆಗೆ ದಾಖಲಿಸಿ ಬಿಡುಗಡೆಗೊಳಿಸಲಾಗಿದೆ. ಘಟನೆಯ ಬಗ್ಗೆ ಸುಬ್ರಹ್ಮಣ್ಯ ಪೊಲೀಸ್ ಠಾಣೆಯಲ್ಲಿ ಗೀತಾ ಅವರ ತಾಯಿ ಪುಷ್ಪಾವತಿಯವರು ದೂರು ನೀಡಿದ್ದಾರೆ. ಗೀತಾಳ ಪತಿಯ ತಾಯಿ ಸೀತಾಮ್ಮ, ಮೈದುನ ಜಯಪ್ರಕಾಶ ಹಾಗೂ ಮೈದುನನ ಪತ್ನಿ ನಿಶ್ಮಿತಾ ಕಳೆದ ಎರಡು ವರ್ಷದಿಂದ ಆಕೆಗೆ ಕಿರುಕುಳ ನೀಡುತ್ತಿದ್ದಾರೆ. ಸಣ್ಣಪುಟ್ಟ ವಿಷಯಕ್ಕೆ ಜಗಳವಾಡುತ್ತಾರೆ. ಒಂದೇ ಮನೆಯಲ್ಲಿದ್ದರೂ ಈ ಮೂರು ಜನ ಮಗಳ ಜತೆ ಮಾತುಕತೆ ನಿಲ್ಲಿಸಿದ್ದಾರೆ. ಅವರು ಮೂವರು ಪ್ರತ್ಯೇಕವಾಗಿದ್ದು, ಇವಳನ್ನು ಪ್ರತ್ಯೇಕಿಸುತ್ತಿದ್ದಾರೆ. ಈ ಬಗ್ಗೆ ಅವಳು ನನ್ನಲ್ಲಿ ದೂರವಾಣಿಯಲ್ಲಿ ದೂರಿದ್ದಳು ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಹೀಗಾಗಿ ಗೀತಾ ಅತ್ತೆ, ಮೈದುನ ಹಾಗೂ ಮೈದುನನ ಹೆಂಡತಿಯ ಮಾನಸಿಕ ಕಿರುಕುಳ ಅಥಾವ ವರದಕ್ಷಿಣೆ ಕಿರುಕುಳದಿಂದ ಬೇಸೆತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದು, ಅದರಂತೆ ಮೂವರ ವಿರುದ್ದ ಐಪಿಸಿ ಸೆಕ್ಷನ್ 1860,304ಬಿ ,306 ರಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ.