ಕಾಪು, ಜೂ 30 (DaijiworldNews/SM): ತಾಲೂಕಿನ ಮಡಂಬು ಎಂಬಲ್ಲಿ ಯುವತಿಯೊಬ್ಬಳು ಕೆರೆಗೆ ಬಿದ್ದು ಸಾವನ್ನಪ್ಪಿರುವ ಘಟನೆ ನಡೆದಿದ್ದು, ಇದು ಆಕಸ್ಮಿಕ ಸಾವಲ್ಲ ಬದಲಾಗಿ ಆತ್ಮಹತ್ಯೆ ಎಂಬುವುದಾಗಿ ಕಾಪು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಡುಂಬು ಗೋಪಾಲ್ ಶೆಟ್ಟಿ ಅವರ ಪುತ್ರಿ ಶರ್ಮಿಳಾ (22) ಮೃತ ಯುವತಿ. ಗುರುವಾರ ಬೆಳಗ್ಗೆ ಬೆಂಗಳೂರಿನಿಂದ ಊರಿಗೆ ಬಂದ್ದ ಶರ್ಮಿಳಾ ಮನೆ ಸಮೀಪದ ಕೆರೆಯಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.
ಪ್ರಕರಣ ವಿವರ:
ಮಡುಂಬು ಕೊಲ್ಲಂಗಾಲ್ ಹೌಸ್ ನಿವಾಸಿ ಗೋಪಾಲ ಶೆಟ್ಟಿಯವರ ಪುತ್ರಿ ಹಾಗೂ ಪಿರ್ಯಾದಿದಾರರಾದ ವಿಕೇಶ್ ಶೆಟ್ಟಿಯವರ ತಂಗಿ ಶರ್ಮಿಳಾ(22)ರವರು ಕಳೆದ ಸುಮಾರು 8 ತಿಂಗಳಿನಿಂದ ಬೆಂಗಳೂರಿನಲ್ಲಿ ಸಾಫ್ಟ್ ವೇರ್ಕಂಪೆನಿಯಲ್ಲಿ ಕೆಲಸ ಮಾಡಿಕೊಂಡಿದ್ದು, ಆಕೆ ಸುಮಾರು ಒಂದು ವಾರದಿಂದ ಮಾನಸಿಕ ಖಿನ್ನತೆಗೆ ಒಳಗಾಗಿರುವ ವಿಚಾರ ಆಕೆಯ ಸಹದ್ಯೋಗಿಗಳಿಂದ ವಿಕೇಶ್ ಶೆಟ್ಟಿ ರವರಿಗೆ ತಿಳಿದು ಬಂದಿತ್ತು. ಸುಮಾರು 3 ದಿನಗಳಿಂದ ಆಕೆ ತಾನು ವಾಸವಿದ್ದ ಪಿಜಿಯಿಂದ ಯಾರಿಗೂ ಹೇಳದೇ ಕುಣಿಗಲ್ಗೆ ಹೋಗಿದ್ದಳು. ಈ ವಿಚಾರವನ್ನು ವಿಕೇಶ್ ಗೆ ಆಕೆಯ ಸ್ನೇಹಿತರು ತಿಳಿಸಿದ್ದು ಈ ಬಗ್ಗೆ ವಿಕೇಶ್ ಶೆಟ್ಟಿ ರವರು ವಾಪಾಸು ಬೆಂಗಳೂರಿಗೆ ಹೊಗುವಂತೆ ಶರ್ಮಿಳಾಗೆ ಪೋನ್ ಕರೆ ಮಾಡಿ ತಿಳಿಸಿದ್ದಾರೆ.
ಜೂನ್ ೨೮ರಂದು ಶರ್ಮಿಳಾಳು ವಿಕೇಶ್ ಶೆಟ್ಟಿ ರವರಿಗೆ ಕರೆಮಾಡಿ ತಾನು ಒಂದು ತಿಂಗಳ ಅವಧಿಗೆ ಮನೆಗೆ ಬಂದು ಹೋಗುತ್ತೇನೆಂದು ತಿಳಿಸಿದ್ದು ಅದರಂತೆ ದಿನಾಂಕ 30ರಂದು ಬೆಳಿಗ್ಗೆ 7:45ಕ್ಕೆ ಮನೆಗೆ ಬಂದಿದ್ದು ತನ್ನ ಲಗೇಜನ್ನು ಮನೆಯ ಒಳಗೆ ಇಟ್ಟು ಶೌಚಾಲಯಕ್ಕೆ ಹೋಗುತ್ತೇನೆಂದು ಹೇಳಿ ಹೋದವಳು ತುಂಬಾ ಹೊತ್ತಾದರೂ ವಾಪಾಸು ಬಾರದೇ ಇದ್ದ ಕಾರಣ ವಿಕೇಶ್ ಶೆಟ್ಟಿ ರವರು ನೆರೆಕರೆಯ ನಿವಾಸಿಗಳೊಂದಿಗೆ ಸುತ್ತಮುತ್ತಲಿನ ಪರಿಸರದಲ್ಲಿ ಹುಡುಕಾಡಿದ್ದಾರೆ. ಎಲ್ಲಿಯೂ ಪತ್ತೆಯಾಗದ ಕಾರಣ ಮನೆಯ ಪಕ್ಕದ ಬಾವಿಯಲ್ಲಿ ಬಿದ್ದಿರಬಹುದು ಎಂದು ಅನುಮಾನಗೊಂಡು ಸುರೇಶ ಎಂಬವರ ಮುಖಾಂತರ ಪಾತಾಳ ಗರುಡವನ್ನು ಬಾವಿಗೆ ಹಾಕಿ ಹುಡುಕಿದಾಗ ಶರ್ಮಿಳಾ ದೇಹವು ಮೇಲೆ ಬಂದಿದ್ದು ಆಕೆಯು ಮೃತಪಟ್ಟಿರುವುದಾಗಿ ಕಂಡು ಬಂತು.
ಶರ್ಮಿಳಾಳು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದು ಇದೇ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯ ಪಕ್ಕದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.