ಬಂಟ್ವಾಳ, ಜೂ 30 (DaijiworldNews/DB): ಕಳೆದ ಎರಡು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಗಾಳಿ ಸಹಿತ ಮಳೆಗೆ ಮಣ್ಣು ಸಡಿಲಗೊಂಡು ತಾಲೂಕಿನ ವಿವಿಧೆಡೆ ಹಾನಿ ಸಂಭವಿಸಿದೆ. ಇದರಿಂದಾಗಿ ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಕೃಷಿ ಚಟುವಟಿಗಳೂ ಬಿರುಸಿನ ಮಳೆಯ ಪರಿಣಾಮ ಹಾನಿಗೊಂಡಿವೆ.
ಪುರಸಭಾ ವ್ಯಾಪ್ತಿಯ ಬಿ.ಮೂಡ ಗ್ರಾಮದ ಕಾಮಾಜೆ ಎಂಬಲ್ಲಿ ತಡೆಗೋಡೆ ಜರಿದು ಬಿದ್ದು ಹಾನಿ ಉಂಟಾಗಿದೆ. ಕಾಮಾಜೆ ನಿವಾಸಿ ಸರೋಜಿನಿ ಕುಲಾಲ್ ಎಂಬವರ ಮನೆಯ ಸಮೀಪದಲ್ಲಿ ಕೆಂಪು ಕಲ್ಲಿನ ತಡೆಗೋಡೆ ಜರಿದು ಬಿದ್ದು ಮನೆಗೆ ಹಾನಿಯಾಗಿದೆ. ಅಲ್ಲದೆ ಮನೆಯಂಗಳದಲ್ಲಿ ನಿಲ್ಲಿಸಲಾಗಿದ್ದ ದ್ವಿಚಕ್ರ ವಾಹನ ಸಂಪೂರ್ಣ ಜಖಂಗೊಂಡಿದೆ. ಸ್ಥಳಕ್ಕೆ ಪುರಸಭಾ ಮುಖ್ಯಾಧಿಕಾರಿ ಸ್ವಾಮಿ, ಬಿ.ಮೂಡ ಕಂದಾಯ ನಿರೀಕ್ಷಕ ವಿಜಯ, ಸ್ಥಳೀಯ ಬಿಜೆಪಿ ಪ್ರಮುಖರಾದ ಕೇಶವ ದೈಪಲ, ಭಾಸ್ಕರ ಟೈಲರ್ ಭೇಟಿ ನೀಡಿದ್ದಾರೆ.
ಮಿತ್ತಕಟ್ಟೆ ಚೋಮ ಮೂಲ್ಯರ ಮನೆ ಹಿಂಭಾಗದ ಗುಡ್ಡ ಕುಸಿದು ಮನೆ ಶೀಟುಗಳಿಗೆ ಹಾನಿಯಾಗಿದೆ. ಸಜೀಪ ಮೂಡ ಕಂಚಿಲ ನಿವಾಸಿ ಶಮೀಮ ಅವರ ಮನೆ ಹಿಂಭಾಗದ ಗೋಡೆ ಕುಸಿದು ಭಾಗಶಃ ಹಾನಿ ಸಂಭವಿಸಿದೆ. ಬಂಟ್ವಾಳ ತಾಲೂಕು ಗೋಳ್ತಮಜಲು ಗ್ರಾಮದ ವಸಂತ ಅವರ ಮನೆ ಹತ್ತಿರದ ತಡೆಗೋಡೆ ಜರಿದು ಹಾನಿಯಾಗಿದೆ. ನರಿಕೊಂಬು ಗ್ರಾಮದ ಊಜೊಟ್ಟು ಎಂಬಲ್ಲಿ ರಸ್ತೆಗೆ ಮಣ್ಣು ಕುಸಿದಿದೆ. ಸಾಲೆತ್ತೂರು ಗ್ರಾಮದ ಕೊಡಂಗಾಯಿ ಎಂಬಲ್ಲಿ ರಸ್ತೆಗೆ ಗುಡ್ಡ ಕುಸಿದು ರಸ್ತೆ ಬಂದ್ ಆಗಿದೆ.
ಮಂಚಿ ಗ್ರಾಮದ ಪತ್ತುಮುಡಿ ರಹೀನಾ ಅವರ ಮನೆಯ ಹಿಂಬದಿ ಗುಡ್ಡ ಕುಸಿದು ಮನೆಯ ಗೋಡೆ ಕುಸಿಯುವ ಹಂತದಲ್ಲಿದೆ. ಪತ್ತುಮುಡಿ ಗ್ರಾಮದ ಮಹಮ್ಮದ್, ಪತ್ತುಮುಡಿ ವಿಠಲ ಪ್ರಭು ಹಾಗೂ ಪತ್ತುಮುಡಿ ಅವ್ವಮ್ಮ ಅವರ ಮನೆ ಹಿಂಬದಿ ಗೋಡೆ ಕುಸಿದು ಮನೆಗೆ ಹಾನಿಯಾಗಿದೆ. ಪತ್ತುಮುಡಿ ಅಯಿಶಮ್ಮ ಎಂಬವರ ಮನೆಗೆ ತಿರುಗುವ ತಡೆಗೋಡೆ ಕುಸಿದು ಮನೆಗೆ ಹಾನಿಯಾಗಿದೆ.
ಮಂಚಿ ಗ್ರಾಮದ ನೀರ್ ಬೈಲು ಎಂಬಲ್ಲಿ ಹಮೀದ್ ಅವರ ತೋಟಕ್ಕೆ ಕೃತಕ ನೀರು ನುಗ್ಗಿ ಕೃಷಿಗೆ ಹಾನಿಯಾಗಿದೆ. ಮಂಚಿ ಗ್ರಾಮದ ಪುರುಷೋತ್ತಮ ಎಂಬವರ ಮನೆಯ ಅವರಣ ಗೋಡೆ ಜರಿದು ಬಿದ್ದು ಕೃಷಿಗೆ ಹಾನಿಯಾಗಿದೆ. ಮಾಣಿ ಗ್ರಾಮದ ಉಷಾ ಶೆಟ್ಟಿ ಅವರ ಮನೆಯ ಪೂರ್ತಿ ನೀರು ಅವರಿಸಿದೆ.