ಮಂಗಳೂರು, ಜೂ 30 (DaijiworldNews/DB): ಭಾರೀ ಮಳೆಯಿಂದಾಗಿ ವಿಮಾನಗಳ ಸಂಚಾರದಲ್ಲಿಯೂ ವ್ಯತ್ಯಯ ಉಂಟಾಗಿದ್ದು, ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಲವು ವಿಮಾನಗಳು ತಡವಾಗಿ ಆಗಮಿಸಿವೆ.
ಸಾಂದರ್ಭಿಕ ಚಿತ್ರ
ಬೆಂಗಳೂರುರಿನಿಂದ 6E 131 ವಿಮಾನವು ಪ್ರತಿಕೂಲ ವಾತಾವರಣದ ಹಿನ್ನೆಲೆಯಲ್ಲಿ ಮಾರ್ಗ ಬದಲಿಸಿದ್ದು, ಬಳಿಕ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಡವಾಗಿ ಬಂದಿಳಿದಿದೆ. ಹೈದರಾಬಾದ್ನಿಂದ ಬರಬೇಕಿದ್ದ ವಿಮಾನ ಸಂಖ್ಯೆ 6E 7163 (ಎಟಿಆರ್) ವಿಮಾನದ ಆಗಮನವೂ ವಿಳಂಬವಾಗಿದೆ. 6E 347 (ಬೆಂಗಳೂರು-ಐಎಕ್ಸ್ಇ) ವಿಮಾನವು ಏಳು ನಿಮಿಷ ತಡವಾಗಿ ಆಗಮಿಸಿದೆ. 6E 496 ಸಿಸಿಯು-ಬೆಂಗಳೂರು-ಐಎಕ್ಸ್ಇ ವಿಮಾನವು 16 ನಿಮಿಷ ತಡವಾಗಿ ಬೆಳಗ್ಗೆ 11.36ಕ್ಕೆ ಆಗಮಿಸಿ 50 ನಿಮಿಷ ತಡವಾಗಿ ನಿರ್ಗಮಿಸಿದೆ ಎಂದು ಮಂಗಳೂರು ವಿಮಾನ ನಿಲ್ದಾಣ ಪ್ರಾಧಿಕಾರವು ಮಾಹಿತಿ ನೀಡಿದೆ.
15 ಮನೆಗಳಿಗೆ ಹಾನಿ
ನಿರಂತರ ಮಳೆಯಿಂದಾಗಿ ಕಳೆದ 24 ಗಂಟೆ ಅವಧಿಯಲ್ಲಿ 15 ಮನೆಗಳಿಗೆ ಹಾನಿಯಾಗಿದೆ. ಈ ಪೈಕಿ ಮೂಲ್ಕಿಯಲ್ಲಿ ಒಂದು ಮನೆಗೆ ಸಂಪೂರ್ಣ ಹಾನಿಯಾಗಿದ್ದು, ಉಳಿದಂತೆ 14 ಮನೆಗಳಿಗೆ ಭಾಗಶಃ ಹಾನಿ ಉಂಟಾಗಿದೆ. ಮಂಗಳೂರು, ಬಂಟ್ವಾಳ, ಪುತ್ತೂರಿನಲ್ಲಿ ತಲಾ ಮೂರು, ಉಳ್ಳಾಲದಲ್ಲಿ ಐದು ಮನೆಗಳು ಭಾಗಶಃ ಹಾನಿಗೊಳಗಾಗಿವೆ.
ವಾಡಿಕೆ ಮಳೆ ಕೊರತೆ
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗುರುವಾರ ಬೆಳಗ್ಗೆಯಿಂದಲೇ ಧಾರಾಕಾರ ಮಳೆ ಸುರಿದಿದ್ದು, ಜಿಲ್ಲೆಯ ವಿವಿಧೆಡೆ ಕೃತಕ ನೆರೆ ಸೃಷ್ಟಿಯಾಗಿದೆ. ಆದಾಗ್ಯೂ ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ಬರಬೇಕಾದ ವಾಡಿಕೆ ಮಳೆಯ ಪ್ರಮಾಣ ಕಡಿಮೆಯಿದೆ. ಜೂನ್ ತಿಂಗಳಾರಂಭದಿಂದ ತಿಂಗಳಾಂತ್ಯದವರೆಗೆ 927.9 ಮಿಮೀ ವಾಡಿಕೆ ಮಳೆ ಸುರಿಯಬೇಕಿದ್ದು, ಕೇವಲ 537.2 ಮಿಮೀನಷ್ಟು ಮಳೆಯಾಗಿದೆ. -42ರಷ್ಟು ಮಳೆ ಕೊರತೆ ಈ ತಿಂಗಳಲ್ಲಿ ಆಗಿದೆ. ಇನ್ನು ಕಳೆದ 24 ಗಂಟೆ ಅವಧಿಯಲ್ಲಿ ಬಿದ್ದ ಮಳೆಯನ್ನು ಗಮನಿಸಿದರೆ 45.5 ವಾಡಿಕೆ ಮಳೆ ಬೀಳಬೇಕಿದ್ದು, 42.0 ಮಿಮೀ ಮಳೆ ಸುರಿದಿದೆ. -8ರಷ್ಟು ಮಳೆ ಕೊರತೆ ಎದುರಾಗಿದೆ.