ಕಾಸರಗೋಡು, ಜೂ 30 (DaijiworldNews/MS): ಮಂಜೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಶಾಲೆಯೊಂದರ ಆರನೇ ತರಗತಿ ವಿದ್ಯಾರ್ಥಿನಿಯೊಬ್ಬಳನ್ನು ಐದು ಮಂದಿಯ ತಂಡವೊಂದು ಅಪಹರಿಸಲು ಯತ್ನಿಸಿದ ಘಟನೆ ನಡೆದಿದೆ.
ವಿದ್ಯಾರ್ಥಿನಿಯು ಶಾಲೆ ಬಿಟ್ಟು ಆಟೋರಿಕ್ಷಾದಲ್ಲಿ ಮನೆಗೆ ತೆರಳಲು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಳು. ಆದರೆ, ಓಮ್ನಿಯಲ್ಲಿ ಕಾದು ನಿಂತಿದ್ದ ಗ್ಯಾಂಗ್ ಆಕೆಯನ್ನು ಬಲವಂತವಾಗಿ ವ್ಯಾನ್ನಲ್ಲಿ ಎಳೆದುಕೊಂಡು ಅಂಗಡಿ ಪದವು ರಸ್ತೆಯಲ್ಲಿ ಪರಾರಿಯಾಗಿದ್ದಾರೆ.
ಅದೃಷ್ಟವಶಾತ್ ಎದುರುಗಡೆಯಿಂದ ಟ್ರಕ್ ಬರುತ್ತಿದ್ದು, ವ್ಯಾನ್ ವೇಗ ತಗ್ಗಿದಾಗ ಬಾಲಕಿ ಬಾಗಿಲು ತೆರೆದ ವ್ಯಾನ್ನಿಂದ ಜಿಗಿದ್ದಾಳೆ.
ವಿದ್ಯಾರ್ಥಿನಿಯು ವ್ಯಾನ್ನಿಂದ ಹಾರಿ ಪರಾರಿಯಾದ ನಂತರ ಹೊಸಂಗಡಿಯಲ್ಲಿರುವ ತನ್ನ ಸಂಬಂಧಿಕರ ಮೂಲಕ ತನ್ನ ತಂದೆಗೆ ವಿಷಯ ತಿಳಿಸಿದ್ದಾಳೆ. ಕೂಡಲೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಮಂಜೇಶ್ವರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. ಇತ್ತೀಚೆಗೆ ಮಂಗಲ್ಪಾಡಿಯ ಬೇಕೂರಿನಲ್ಲಿ ವಿದ್ಯಾರ್ಥಿನಿಯೊಬ್ಬಳನ್ನು ಅಪಹರಿಸುವ ಪ್ರಯತ್ನ ನಡೆದಿತ್ತು. ಅಲ್ಲಿಯೂ ಬಾಲಕಿ ಅಪಹರಣಕಾರರಿಂದ ತಪ್ಪಿಸಿಕೊಂಡಿದ್ದಳು. ಪೊಲೀಸರು ವಿವಿಧ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.