ಮಂಗಳೂರು, ಜೂ 30 (DaijiworldNews/MS): ಚಿತ್ರ ನಟಿ ಅನುಷ್ಕಾ ಶೆಟ್ಟಿ ಸಹೋದರ, ಭೂಗತ ಪಾತಕಿ ಡಿ.ಮುತ್ತಪ್ಪ ರೈ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದ ಪುತ್ತೂರು ಮೂಲದ ಗುಣರಂಜನ್ ಶೆಟ್ಟಿ ಅವರು ಭೂಗತ ಪಾತಕಿಗಳಿಂದ ಜೀವ ಬೆದರಿಕೆ ಎದುರಿಸುತ್ತಿರುವ ಆರೋಪಕ್ಕೆ ಸಂಬಂಧಿಸಿ ಪ್ರಕರಣದ ವಿಚಾರಣೆಯೂ ಮಂಗಳೂರು ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಬುಧವಾರ ನಡೆಯಿತು.
ಪೊಲೀಸ್ ಆಯುಕ್ತರ ಕಚೇರಿಗೆ ಆಗಮಿಸಿದ್ದ ಗುಣರಂಜನ್ ಶೆಟ್ಟಿ ಅವರನ್ನು ಪೊಲೀಸ್ ಆಯುಕ್ತ ಎನ್.ಶಶಿಕುಮಾರ್ ಮತ್ತು ಸಿಸಿಬಿ ಇನ್ಸ್ಫೆಕ್ಟರ್ ಮಹೇಶ್ ಪ್ರಸಾದ್ ಅವರು ವಿಚಾರಣೆ ನಡೆಸಿದ್ದಾರೆ.
ಬಳಿಕ ಮಾಧ್ಯಮದೊಂದಿಗೆ ಮಾತನಾಡಿದ ಅವರು, ‘ನನ್ನ ಜೀವಕ್ಕೆ ಅಪಾಯ ಇರುವ ಬಗ್ಗೆ ನಂಬಲರ್ಹ ಮೂಲಗಳಿಂದ ಮಾಹಿತಿ ಸಿಕ್ಕಿತ್ತು. ಈ ಬಗ್ಗೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದೆ. ಈ ಪ್ರಕರಣವನ್ನು ಮಂಗಳೂರಿನ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಹಾಗಾಗಿ ಪೊಲೀಸ್ ಕಮಿಷನರ್ ಹಾಗೂ ಇತರ ಅಧಿಕಾರಿಗಳನ್ನು ಭೇಟಿಯಾಗಿದ್ದೆ. ಅವರು ತನಿಖೆಗೆ ಅಗತ್ಯವಿರುವ ಕೆಲವು ಮಾಹಿತಿಗಳನ್ನು ನನ್ನಿಂದ ಪಡೆದುಕೊಂಡರು. ಇದರ ಹಿಂದೆ ಯಾರು ಇದ್ದಾರೆ ಎಂಬ ಖಚಿತತೆಯೂ ಇಲ್ಲ. ಪೊಲೀಸರು ತನಿಖೆ ಆರಂಭಿಸಿದ್ದು ಸತ್ಯ ಹೊರಬರಲಿದೆ. ಮನ್ವಿತ್ ಬಗ್ಗೆಯೂ ದೂರು ಹೇಳಿಲ್ಲ, ಯಾಕೆಂದರೆ ಆತನ ಜತೆ ಯಾವುದೇ ವೈಮನಸ್ಸಿಲ್ಲ. ಈ ಪ್ರಕರಣದಲ್ಲಿ ಅವರ ಹೆಸರು ಏಕೆ ಪ್ರಸ್ತಾಪವಾಗಿದೆಯೋನನಗೆ ತಿಳಿದಿಲ್ಲ. ಈ ಬಗ್ಗೆ ಅವರೇ ಉತ್ತರ ಕೊಡಬೇಕು. ಈ ಪ್ರಕರಣದಲ್ಲಿ ಅವರ ಹೆಸರು ಥಳಕು ಹಾಕಿಕೊಂಡಿದ್ದು ನನಗೆ ಗೊತ್ತಾಗಿದ್ದು, ಮಾಧ್ಯಮದ ಮೂಲಕ ಎಂದು ಹೇಳಿದ್ದಾರೆ.
ಇನ್ನು ಈ ವಿಚಾರವಾಗಿ ಪ್ರತಿಕ್ರಿಯಿಸಿರುವ ಪೊಲೀಸ್ ಆಯುಕ್ತ ಶಶಿಕುಮಾರ್, ತನಿಖೆಗಾಗಿ ಮಾಹಿತಿ ಸಂಗ್ರಹಕ್ಕೆ ಕರೆಸಿಕೊಂಡಿದ್ದೇವೆ. ನಿಶ್ಚಿತವಾಗಿ ಯಾರು ಬೆದರಿಕೆ ಕರೆ ಹಾಕಿದ್ದಾರೆಂದು ಗುಣರಂಜನ್ ಶೆಟ್ಟಿಯೂ ಹೇಳಿಲ್ಲ. ಕೊಲೆ ಬೆದರಿಕೆ ಇರುವುದನ್ನು ಹೇಳಿದ್ದಾರೆ. ತನಿಖೆ ಮುಂದುವರಿಯಲಿದೆ ಎಂದು ಹೇಳಿದ್ದಾರೆ.