ಮಂಗಳೂರು, ಜೂ 29 (DaijiworldNews/SM): ವಿದೇಶಿ ಮೂಲದ ಹಡಗೊಂದು ಉಳ್ಳಾಲದ ಬಟಪಾಡಿ ಸಮುದ್ರದಲ್ಲಿ ಜೂ.21ರಂದು ಮುಳುಗಡೆಯಾಗಿದ್ದು, ‘ಎಂವಿ ಪ್ರಿನ್ಸೆಸ್ ಮಿರಾಲ್’ ಎಂಬ ಹೆಸರಿನ ಹಡಗಿನ ತೆರವಿಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ. ತಿಳಿಸಿದ್ದಾರೆ.
ಕರಾವಳಿಯ ರಕ್ಷಣಾ ಪಡೆಗೆ ಸೇರಿದ ಮೂರು ವಿಶೇಷ ಹಡಗಲ್ಲದೆ ಡೋರ್ನಿಯರ್ ವಿಮಾನದ ಮೂಲಕವೂ ಕಣ್ಗಾವಲಿಡಲಾಗಿದೆ. ತೈಲ ಸೋರಿಕೆಯಾಗದಂತೆ ಕ್ರಮ ಕೈಗೊಳ್ಳಲಾಗಿದೆ. ಅಲ್ಲದೆ, ಸುರಕ್ಷತೆಗಳ ಬಗ್ಗೆ ಈಗಾಗಲೇ ಜಿಲ್ಲಾಡಳಿತದ ವತಿಯಿಂದ ಅಣಕು ಕಾರ್ಯಾಚರಣೆಗಳನ್ನು ನಡೆಸಲಾಗಿದ್ದು, ಅಗತ್ಯ ಪರಿಕರಗಳನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಿಕೊಳ್ಳಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.
ಹಡಗಿನ ಸುತ್ತ ಈಗಾಗಲೇ ಕಣ್ಗಾವಲಿಟ್ಟಿದೆ. ಮತ್ತೊಂದೆಡೆ ಈ ಭಾಗದಲ್ಲಿ ಮೀನುಗಾರಿಯನ್ನು ಕೂಡ ನಿಷೇಧಿಸಲಾಗಿದೆ. ಹಡಗಿನಿಂದ ಇಂಧನ ಹೊರ ತೆಗೆಯುವ ಬಗ್ಗೆ ಚಿಂತನೆ ನಡೆಸಲಾಗಿದೆ.