ಬಂಟ್ವಾಳ,ಜೂ 29 (DaijiworldNews/SM): ಬಂಟ್ವಾಳ ಪುರಸಭೆಯು ಸಜೀಪನಡು ಕಂಚಿನಡ್ಕಪದವುನಲ್ಲಿರುವ ತನ್ನ ತ್ಯಾಜ್ಯ ವಿಲೇವಾರಿ ಘಟಕದಲ್ಲಿ ಅವೈಜ್ಞಾನಿಕ ರೀತಿಯಲ್ಲಿ ಕಸವನ್ನು ರಾಶಿ ಹಾಕಿ ಪರಿಸರ ಹಾನಿಯ ಜತೆಗೆ ಸ್ಥಳೀಯ ಜನತೆಗೆ ತೊಂದರೆ ನೀಡುತ್ತಿದೆ ಎಂಬ ದೂರಿನ ಹಿನ್ನೆಲೆಯಲ್ಲಿ ಮಂಗಳೂರು ಕ್ಷೇತ್ರದ ಶಾಸಕ, ವಿಧಾನಸಭಾ ವಿಪಕ್ಷ ಉಪನಾಯಕ ಯು.ಟಿ.ಖಾದರ್ ಅವರು 2ನೇ ದಿನ ಘಟಕಕ್ಕೆ ಭೇಟಿ ನೀಡಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ಅಧಿಕಾರಿಗಳ ನಿರ್ಲಕ್ಷ್ಯದಿಂದ ಈ ರೀತಿಯ ಅವ್ಯವಸ್ಥೆ ಉಂಟಾಗಿ ಗ್ರಾಮಸ್ಥರಿಗೆ ತೊಂದರೆಯಾಗಿದೆ. ಪುರಸಭೆಯವರು ತಮ್ಮ ತಪ್ಪನ್ನು ಒಪ್ಪಿಕೊಂಡಿದ್ದು, ಹೀಗಾಗಿ ಮುಂದೆ ಜು. 3ರೊಳಗೆ ಇಲ್ಲಿನ ಬೃಹತ್ ಹೊಂಡಗಳಲ್ಲಿ ತುಂಬಿರುವ ಕಲುಷಿತ ನೀರನ್ನು ಲಿಫ್ಟ್ ಮಾಡಿ ಶುಚಿಗೊಳಿಸಬೇಕು, ಹಸಿ ಕಸದ ಜತೆಗೆ ಅವೈಜ್ಞನಿಕವಾಗಿ ಸುರಿದ ಒಣ ಕಸವನ್ನೂ ಬೇರೆಡೆಗೆ ತೆಗೆದುಕೊಂಡು ಹೋಗಬೇಕು. ಅದರ ಬಳಿಕವೇ ಮತ್ತೆ ಒಣ ಕಸವನ್ನು ಹಾಕುವ ತೀರ್ಮಾನ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಪುರಸಭಾಧ್ಯಕ್ಷ ಮಹಮ್ಮದ್ ಶರೀಫ್, ಉಳ್ಳಾಲ ತಹಶೀಲ್ದಾರ್ ಗುರುಪ್ರಸಾದ್, ಪುರಸಭಾ ಮುಖ್ಯಾಧಿಕಾರಿ ಎಂ.ಆರ್.ಸ್ವಾಮಿ, ಪರಿಸರ ಎಂಜಿನಿಯರ್ ರಾಮಚಂದ್ರ, ಎಂಜಿನಿಯರ್ ಡೊಮಿನಿಕ್ ಡಿಮೆಲ್ಲೊ, ಪುರಸಭಾ ಸದಸ್ಯ ಅಬೂಬಕ್ಕರ್ ಸಿದ್ದೀಕ್, ಗ್ರಾಮಕರಣಿಕ ಜಗದೀಶ್ ಶೆಟ್ಟಿ, ಸಜೀಪನಡು ಗ್ರಾ.ಪಂ.ಮಾಜಿ ಅಧ್ಯಕ್ಷ ನಾಸೀರ್ ಸಜೀಪ, ಗ್ರಾ.ಪಂ.ಸದಸ್ಯ ಅಬೂಬಕ್ಕರ್ ಸಜೀಪ, ಇರಾ ಗ್ರಾ.ಪಂ.ಮಾಜಿ ಅಧ್ಯಕ್ಷ ಅಬ್ದುಲ್ ರಝಾಕ್ ಕುಕ್ಕಾಜೆ, ಗ್ರಾ.ಪಂ.ಸದಸ್ಯರು, ಸ್ಥಳೀಯರು, ಮೊದಲಾದವರು ಉಪಸ್ಥಿತರಿದ್ದರು.