ಕಾಸರಗೋಡು, ಜೂ 29 (DaijiworldNews/SM): ಗಲ್ಫ್ ಉದ್ಯೋಗಿ, ಸೀತಾಂಗೋಳಿ ಮುಗುವಿನ ಅಬೂಬಕ್ಕರ್ ಸಿದ್ದಿಕ್(32) ಎಂಬವರನ್ನು ಅಪಹರಿಸಿ ಕೊಲೆಗೈದ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇಬ್ಬರನ್ನು ತನಿಖಾ ತಂಡ ಬಂಧಿಸಿದೆ. ಮಂಜೇಶ್ವರ ಉದ್ಯಾವರದ ಅಬ್ದುಲ್ ಅಝೀಜ್ ( 37) ಮತ್ತು ಅಬ್ದುಲ್ ರಹೀಮ್(35) ಬಂಧಿತರು.
ಅಬ್ದುಲ್ ಅಝೀಜ್ ನು ಅಬೂಬಕ್ಕರ್ ಸಿದ್ದಿಕ್ ನನ್ನು ಕೊಲೆಗೈದ ಬಳಿಕ ಬಂದ್ಯೋಡಿನ ಖಾಸಗಿ ಆಸ್ಪತ್ರೆಯಲ್ಲಿ ತೊರೆದು ಪರಾರಿಯಾಗಿದ್ದ ಆರೋಪಿಯಾಗಿದ್ದು, ರಹೀಮ್ ನು ಆರೋಪಿಗಳು ಪರಾರಿಯಾಗಲು ನೆರವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಉಳಿದ ಆರೋಪಿಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿದ್ದು, ಇವರನ್ನು ಶೀಘ್ರ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ . ವೈಭವ್ ಸಕ್ಸೆನಾ ತಿಳಿಸಿದ್ದಾರೆ.
ಈ ನಡುವೆ ಪ್ರಮುಖ ರೂವಾರಿಗಳಾದ ರಯಿಸ್ ಮತ್ತು ಶಾಫಿ ವಿದೇಶಕ್ಕೆ ಪರಾರಿಯಾಗಿದ್ದಾರೆ ಎಂಬ ಮಾಹಿತಿ ಪೊಲೀಸರಿಗೆ ಲಭಿಸಿದೆ. ಕೃತ್ಯದಲ್ಲಿ 10 ಮಂದಿ ಶಾಮೀಲಾಗಿದ್ದು , ತಲೆ ಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ವಿಶೇಷ ತನಿಖಾ ತಂಡ ಕರ್ನಾಟಕ , ಗೋವಾ ಮೊದಲಾದೆಡೆಗೂ ತನಿಖೆ ವಿಸ್ತರಿಸಿದೆ. ಕೃತ್ಯಕ್ಕೆ ಕೊಟೇಶನ್ ಪಡೆದಿದ್ದ ಓರ್ವ ಆರೋಪಿಯ ಉಪ್ಪಳದಲ್ಲಿರುವ ಮನೆಯಿಂದ ನಾಲ್ಕೂವರೆ ಲಕ್ಷ ರೂ . ನಗದನ್ನು ತನಿಖಾ ತಂಡ ವಶಪಡಿಸಿಕೊಂಡಿದೆ. ಹಣಕಾಸಿನ ವ್ಯವಹಾರ ಕೃತ್ಯಕ್ಕೆ ಕಾರಣ ಎಂದು ತನಿಖೆಯಿಂದ ತಿಳಿದು ಬಂದಿದೆ. ಈ ನಡುವೆ ಅಪಹರಿಸಿ ಹಲ್ಲೆ ಹಾಗೂ ಕೊಲೆ ನಡೆಸಿದ್ದ ಪೈವಳಿಕೆಯ ನೂತಿಲ ದ ಮನೆ ಹಾಗೂ ಬೋಳಂಗಳ ದ ಸ್ಥಳದಿಂದ ಪೊಲೀಸರು ಮಾಹಿತಿ ಕಲೆ ಹಾಕಿದ್ದಾರೆ.
ಅಬೂಬಕ್ಕರ್ ಸಿದ್ದಿಕ್ ನ ಸಾವಿಗೆ ತಲೆಗೆ ಬಿದ್ದ ಬಲವಾದ ಪೆಟ್ಟು ಕಾರಣವಾಗಿದ್ದು, ಎದೆ ಹಾಗೂ ಅವಯವಗಳಲ್ಲಿ ಗಾಯಗಳು ಕಂಡು ಬಂದಿ ರುವುದಾಗಿ ಮರಣೋತ್ತರ ಪರೀಕ್ಷೆಯಿಂದ ತಿಳಿದುಬಂದಿದೆ. ರವಿವಾರದಂದು ಘಟನೆ ನಡೆದಿತ್ತು. ಅಬೂಬಕ್ಕರ್ ಸಿದ್ದಿಕ್, ಸಹೋದರ ಅನ್ವರ್ ಮತ್ತು ಸಂಬಂಧಿಕ ಅನ್ಸಾರ್ ನನ್ನು ಅಪಹರಿಸಿದ ತಂಡವು ಪೈವಳಿಕೆ ನೂತಿ ಲದ ಮನೆ ಗೆ ಕರೆತಂದು ಥಳಿಸಿದ್ದು , ಮೃತಪಟ್ಟ ಸಿದ್ದಿಕ್ ನನ್ನು ಬಂದ್ಯೋಡಿನ ಖಾಸಗಿ ಆಸ್ಪತ್ರೆಗೆ ಕಾರಿನಲ್ಲಿ ತಂದು ತೊರೆದು ಪರಾರಿಯಾಗಿದ್ದರೆ , ಅನ್ವರ್ ಮತ್ತು ಅನ್ಸಾರ್ ನನ್ನು ಪೈವಳಿಕೆ ಬಳಿ ಬಿಟ್ಟು ಪರಾರಿಯಾಗಿದ್ದರು.
ಗಾಯಗೊಂಡಿದ್ದ ಇಬ್ಬರನ್ನು ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು . ಈ ಪೈಕಿ ಅನ್ವರ್ ಎರಡು ದಿನಗಳ ಬಳಿಕ ಆಸ್ಪತ್ರೆಯಿಂದ ಬಿಡುಗಡೆ ಗೊಂಡಿದ್ದು , ಅನ್ಸಾರ್ ನನ್ನು ಮಂಗಳೂರು ಆಸ್ಪತ್ರೆ ಯಲ್ಲಿ ಚಿಕಿತ್ಸೆ ನೀಡಿ ಕುಂಬಳೆಯ ಆಸ್ಪತ್ರೆಗೆ ಕರೆ ತಂದು ಚಿಕಿತ್ಸೆ ನೀಡಲಾಗುತ್ತಿದೆ. ಶುಕ್ರವಾರವೇ ಅನ್ವರ್ ಮತ್ತು ಅನ್ಸಾರ್ ನನ್ನು ತಂಡವು ಅಪಹರಿಸಿತ್ತು . ಇಬ್ಬರನ್ನು ತಂಡವು ದಿಗ್ಬಂಧನ ದಲ್ಲಿರಿಸಿ ಥಳಿಸಿತ್ತು . ಇಬ್ಬರನ್ನು ಬಿಡುಗಡೆಗೊಳಿಸಲು ಅಬೂಬಕ್ಕರ್ ಸಿದ್ದಿಕ್ ನನ್ನು ತಲಪಿಸುವಂತೆ ತಂಡವು ಒತ್ತಡ ಹೇರಿತ್ತು . ಇದರಂತೆ ದುಬಾಯಿ ಯಲ್ಲಿದ್ದ ಸಿದ್ದಿಕ್ ಮಂಗಳೂರು ವಿಮಾನ ನಿಲ್ದಾಣ ಮೂಲಕ ಊರಿಗೆ ಆಗಮಿಸುತ್ತಿ ದ್ದಾಗ ತಂಡವು ಅಪಹರಿಸಿ ಪೈವಳಿಕೆಯ ನೂತಿಲ ದ ಮನೆಗೆ ಕೊಂಡೊಯ್ದು ಥಳಿಸಿತ್ತು . ಥಳಿತದಿಂದ ಮೃತಪಟ್ಟ ಸಿದ್ದಿಕ್ ನನ್ನು ಬಂದ್ಯೋಡಿನ ಆಸ್ಪತ್ರೆಗೆ ತಲಪಿಸಿ ಇಬ್ಬರು ಪರಾರಿಯಾಗಿದ್ದರು.