ಉಡುಪಿ, ಜೂ 29 (DaijiworldNews/HR): ಉಡುಪಿಯಲ್ಲಿ ಹೆಚ್ಚುತ್ತಿರುವ ವಾಹನ ದಟ್ಟಣೆಗೆ ಟ್ರಾಫಿಕ್ ಸಿಗ್ನಲ್ ಅಥವಾ ವಾಹನ ವೇಗ ನಿಯಂತ್ರಕಗಳನ್ನ ಹಾಕಬೇಕು ಎನ್ನುವುದು ಸಾರ್ವಜನಿಕರ ಒತ್ತಡವಾಗಿತ್ತು. ಅಂತೆಯೇ ಸ್ಮಾರ್ಟ್ ಸಿಟಿ ಉಡುಪಿ ಯೋಜನೆಯಡಿ, ಸ್ಮಾರ್ಟ್ ಸಿಟಿ ಕಂಪನಿಯ ಸಹಭಾಗಿತ್ವದಲ್ಲಿ, ಮಣಿಪಾಲದ ಟೈಗರ್ ಸರ್ಕಲ್ ವೃತ್ತವನ್ನು ಹೆದ್ದಾರಿ ವಿಸ್ತರಣೆಗಾಗಿ ತೆಗದು ಹಾಕಲಾಗಿ, ಪ್ರಯೋಗಿಕವಾಗಿ ಟ್ರಾಫಿಕ್ ಸಿಗ್ನಲ್ ಅಳವಡಿಸಲಾಗಿದೆ.
ಉಡುಪಿ ನಗರವನ್ನು ಸಂಪರ್ಕಿಸುವ ಮತ್ತೊಂದು ಮುಖ್ಯ ಪ್ರವೇಶ ದ್ವಾರ, ಅಂಬಾಗಿಲು ಅಲ್ಲದೆ ನೇರವಾಗಿ ರಾಷ್ತ್ರೀಯ ಹೆದ್ದಾರಿ 66 ಕ್ಕೆ ಸಂಪರ್ಕಿಸುತ್ತದೆ. ವಾಹನ ದಟ್ಟಣೆ ಇರುವಾಗ ಕೆಲವೊಮ್ಮೆ ವಾಹನ ಸುಗಮ ಸಂಚಾರಕ್ಕೆ ಸಮಸ್ಯೆ ಆಗುತ್ತದೆ. ಹಾಗಾಗಿ ಮಣಿಪಾಲದಲ್ಲಿ ಸ್ಥಾಪಿಸಲಾದ ಟ್ರಾಫಿಕ್ ಸಿಗ್ನಲ್ ನಂತೆ ನಗರಸಭಾ ವ್ಯಾಪ್ತಿಯೊಳಗೆ ಬರುವ ಇತರ 12 ಟ್ರಾಫಿಕ್ ಜಂಕ್ಷನ್ ಗಳಲ್ಲಿ ಸಿಗ್ನಲ್ ಕಂಬ ಹಾಕುವ ಯೋಜನೆ ಇದೆ. ಟೈಗರ್ ಸರ್ಕಲ್ ನಲ್ಲಿ ಸ್ಥಾಪಿಸಲಾದ ಸಿಗ್ನಲ್ ಬಳಿ ಸೂಕ್ತವಾದ ನಿರ್ವಹಣೆಯಿಲ್ಲದೆ ಇಲ್ಲಿ ನಡೆದುಕೊಂಡು ರಸ್ತೆ ದಾಟುವುದಕ್ಕಿಂತ ಓಡಿಕೊಂಡು ಹೋಗಿ ರಸ್ತೆ ದಾಟಬೇಕಾದ ಸ್ಥಿತಿ ಜನ ಎದುರಿಸುತ್ತಿದ್ದಾರೆ.
ಎರಡನೆಯ ಸಿಗ್ನಲ್ ಕಂಬ ಅಳವಡಿಕೆಗೆ ಅಂಬಾಗಿಲು ಜಂಕ್ಷನ್ ಪಕ್ಕ - ರಾಷ್ಟ್ರೀಯ ಹೆದ್ದಾರಿಗೆ ತಾಗಿ 5 ಅಡಿ ಆಳದ ಅಗಲವಾದ ಗುಂಡಿ ತೋಡಲಾಗಿದೆ. ಒಂದು ವಾರ ಕಳೆದರೂ ಯಾವುದೇ ಪ್ರಗತಿ ಕಾಣುತ್ತಿಲ್ಲ. ರಾಷ್ಟೀಯ ಹೆದ್ದಾರಿಯಲ್ಲಿ ಸಿಗ್ನಲ್ ಕಂಬ ಹಾಕುವ ಕೆಲಸವನ್ನು ನಿಲ್ಲಿಸಲು ರಾ. ಹೇ. ಪ್ರಾಧಿಕಾರ ಕೋರ್ಟ್ ಮೆಟ್ಟಿಲೇರಿ ತಡೆಯಾಜ್ಞೆ ತಂದಿದೆ. ಸ್ಮಾರ್ಟ್ ಸಿಟಿ ಕಾಮಗಾರಿ ಅರ್ಧಕ್ಕೆ ನಿಂತಿದೆ. ರಸ್ತೆ ಮಧ್ಯದಲ್ಲಿ ತೆರೆ ಗುಂಡಿಯೂ ಹಾಗೆಯೆ ಇದೆ. ನಗರಸಭೆಯ ಸದಸ್ಯರೇ ಇದನ್ನು ಸಾಮಾನ್ಯ ಸಭೆಯಲ್ಲಿ ವಿಷಯ ಪ್ರಸ್ತಾಪ ಮಾಡಿದರು.
ಮಳೆ ಬರುತ್ತಿರುವ ಈ ಸಮಯದಲ್ಲಿ ಆ ಹೊಂಡದ ಸುತ್ತ ಮಣ್ಣು ಕುಸಿಯುವ ಸಾಧ್ಯತೆ ಇದೆ. ಸದ್ಯ ಹೆದ್ದಾರಿಯಲ್ಲಿ ಚಲಿಸುವ ವಾಹನಗಳ ಗಮನಕ್ಕಾಗಿ ಸುತ್ತ ಕೋಲು ನೆಟ್ಟು-ಪ್ಲಾಸ್ಟಿಕ್ ಟೇಪ್ ಕಟ್ಟಲಾಗಿದೆ. ಇದು ತಕ್ಷಣದ ಮತ್ತು ಸುರಕ್ಷಿತ ಕ್ರಮವೇ? ಎಂದು ಅಧಿಕಾರಿಗಳೂ ಯೋಚಿಸಬೇಕು.
ಕಲ್ಸಂಕ ಜಂಕ್ಷನ್, ಹಳೆ ಡಯಾನ ವೃತ್ತ, ತ್ರಿವೇಣಿ ಜಂಕ್ಷನ್, ಜೋಡು ಕಟ್ಟೆ ಜಂಕ್ಷನ್, ಬನ್ನಂಜೆ ಜಂಕ್ಷನ್, ಎಂಜಿಎಂ ಜಂಕ್ಷನ್, ಶಿರಿಬೀಡು ಜಂಕ್ಷನ್, ಕರಾವಳಿ ಜಂಕ್ಷನ್, ಬಲಾಯಿಪಾದೆ ಜಂಕ್ಷನ್, ಅಂಬಲಪಾಡಿ ಜಂಕ್ಷನ್, ಅಂಬಾಗಿಲು ಜಂಕ್ಷನ್, ಸಂತೆಕಟ್ಟೆ ಜಂಕ್ಷನ್, ಸಿಂಡಿಕೇಟ್ ಜಂಕ್ಷನ್, ಮತ್ತು ಎಂಐಟಿ ಜಂಕ್ಷನ್ ಪಾಯಿಂಟ್ ಗಳನ್ನು ಟ್ರಾಫಿಕ್ ಪೊಲೀಸ್ ಕಂಪನಿಗೆ ತಿಳಿಸಿದ್ದು ಯಾವುದೇ ಲಿಖಿತ ಪತ್ರ ವ್ಯವಹಾರ ನಡೆದಿಲ್ಲ ಎನ್ನುತ್ತಾರೆ ಸಂಚಾರಿ ಇಲಾಖೆ ಅಧಿಕಾರಿ.
ಇನ್ನು ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ ಅನುಮತಿಯಿಲ್ಲದೆ ಸಿಗ್ನಲ್ ಕಂಬಕ್ಕೆ ಗುಂಡಿ ತೆಗೆಯಲು ಅನುಮತಿ ಪಡೆಯದ ಕಾರಣ ಸದ್ಯ ಕೆಲಸ ಸ್ಥಗಿತ ಗೊಳಿಸಲಾಗಿದೆ. ಅಲ್ಲದೆ ರಾಷ್ಟ್ರೀಯ ಹೆದ್ದಾರಿ ಮೇಲೆ ಸಿಗ್ನಲ್ ಕಂಬ ಹಾಕುವಂತೆಯೂ ಇಲ್ಲ ಎಂದು ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.
ಸ್ಮಾರ್ಟ್ ಸಿಟಿ ಯೋಜನೆ ಮಾಡುವಾಗ ನಗರಸಭೆ ಅನುಮೋದನೆ ಎಷ್ಟು ಮುಖ್ಯವೋ, ಸಾರ್ವಜನಿಕ ಹಿತಾಸಕ್ತಿ, ಜೀವರಕ್ಷಣೆ ಕೂಡ ಅಷ್ಟೇ ಮುಖ್ಯವಾಗುತ್ತದೆ. ಮುಂದಾಲೋಚನೆ ಇಲ್ಲದೆ, ನಿಯಮಗಳನ್ನು ಉಲ್ಲಂಘಿಸಿ ಕಾಮಗಾರಿ ನಡೆಯುತ್ತವೆ ಎನ್ನುವುದಕ್ಕೆ ಇಂತಹ ಕೆಲಸಗಳೇ ಸಾಕ್ಷಿ. ವಾಹನ ಸವಾರರು ಈಗಾಗಲೇ ಅಪಾಯ ಎದುರಿಸುತ್ತಿದ್ದು, ಏನಾದರೂ ಅವಘಡ ಸಂಭವಿಸುವ ಮೊದಲು ಸಂಬಂಧ ಪಟ್ಟ ಇಲಾಖೆ ಎಚ್ಚೆತ್ತು ಕೊಂಡು ಕ್ರಮ ತೆಗೆದು ಕೊಳ್ಳಬೇಕು.