ಉಡುಪಿ, ಜೂ 29 (DaijiworldNews/HR): ಯಾಂತ್ರೀಕೃತ ಭತ್ತ ಬೇಸಾಯ (ಯಂತ್ರಶ್ರೀ) ಮತ್ತು ಹಡಿಲು ಭೂಮಿ ಪುನಶ್ಚೇತನ ಯೋಜನೆಗಳಿಗೆ ಕಾರ್ಯಕ್ರಮ ಉದ್ಘಾಟನೆ ಡಾ.ಡಿ.ವೀರೇಂದ್ರ ಹೆಗ್ಡೆಯವರ ನೇತೃತ್ವದಲ್ಲಿ ಗ್ರಾಮಾಭಿವೃದ್ದಿ ಯೋಜನೆ ಮುಂಚೂಣಿಯಲ್ಲಿ ನಿಂತು ಮಾದರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಸರಕಾರೇತರ ಸಂಸ್ಥೆಯಾಗಿ ಗ್ರಾಮಾಭಿವೃದ್ದಿ ಯೋಜನೆ ಸಮರ್ಪಕ ಕಾರ್ಯಕ್ರಮಗಳ ಅನುಷ್ಠಾನಗಳ ಮೂಲಕ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜನರಿಗೆ ಮುಟ್ಟಿಸುವ ಕೆಲಸ ಮಾಡುತ್ತಿದೆ ಎಂದು ಕೇಂದ್ರ ಸರ್ಕಾರದ ಕೃಷಿ ಮತ್ತು ರೈತರ ಕಲ್ಯಾಣ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಬಾರಕೂರು ಕೂಡ್ಲಿ ಉಡುಪರ ಮನೆ ವಠಾರದಲ್ಲಿ ಜರಗಿದ ಶ್ರೀ ಕ್ಷೇ.ಧ.ಗ್ರಾ.ಯೋಜನೆ 2022-23ನೇ ಸಾಲಿನಲ್ಲಿ ರಾಜ್ಯದ 20000 ಹೆಕ್ಟೇರ್ ಪ್ರದೇಶದಲ್ಲಿ ಅನುಷ್ಠಾನಗೊಳ್ಳಲಿರುವ ಯಾಂತ್ರೀಕೃತ ಭತ್ತ ಬೇಸಾಯ (ಯಂತ್ರಶ್ರೀ) ಮತ್ತು ಹಡಿಲು ಭೂಮಿ ಪುನಶ್ಚೇತನ ಯೋಜನೆಗಳಿಗೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ರೈತರನ್ನು ಪ್ರೋತ್ಸಾಹಿಸಲು ಕೇಂದ್ರ ರಾಜ್ಯ ಸರ್ಕಾರಗಳು ಹಲವು ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಿವೆ. ರೈತರ ಉತ್ಪನ್ನಗಳಿಗೆ ಉತ್ತಮ ಧಾರಣೆ ನೀಡಲು, ಕೂಲಿಯಾಳುಗಳ ಸಮಸ್ಯೆ ನಿವಾರಿಸಲು ಬಾಡಿಗೆ ಸೇವಾಕೇಂದ್ರಗಳ ಮೂಲಕ ಯಂತ್ರೀಕೃತ ಕೃಷಿಗೆ ಉತ್ತೇಜಿಸುವ ಕೆಲಸ, ಸಣ್ಣ ರೈತರನ್ನು ಸಂಘಟಿತಗೊಳಿಸುವುದು, ಸೂಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸುವ ಕಾರ್ಯಗಳು ನೆಡೆಯುತ್ತಿವೆ. ಇವತ್ತು ಕೃಷಿ ಮೂಲಸೌಕರ್ಯ ವೃದ್ದಿಗೆ ಕೇಂದ್ರ ಸರ್ಕಾರ 10 ಲಕ್ಷ ಕೋಟಿ ರೂಪಾಯಿಗಳ ಮೀಸಲಿರಿಸಿದೆ ಎಂದರು.
ಕೃಷಿ ಉತ್ಪನ್ನಗಳ ಮೌಲ್ಯವೃರ್ಧನೆಯಾದರೆ ರೈತರ ಆಧಾಯ ದ್ವಿಗುಣವಾಗುತ್ತದೆ. ತೆಂಗಿನ ಕಾಯಿಯ ಹಾಲು ತಾಯಿಯ ಎದೆ ಹಾಲಿನಷ್ಟೇ ಶಕ್ತಿಶಾಲಿ ಎನ್ನುವುದನ್ನು ವಿದೇಶಗಳಲ್ಲಿ ಸಂಶೋಧನೆಗಳಿಂದ ದೃಢಪಟ್ಟಿವೆ. ಅದೇ ತೆಂಗಿನ ಕಾಯಿಯಿಂದ ವಿವಿಧ ಉತ್ಪನ್ನಗಳ ತಯಾರಿಸುವುದರ ಬಗ್ಗೆ ಪ್ರಯೋಗಗಳು ನಡೆಯಬೇಕು ಎಂದಿದ್ದಾರೆ.
ಧರ್ಮಸ್ಥಳದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಐದಾರು ವರ್ಷಗಳ ಹಿಂದೆ ಭತ್ತದ ಬೆಳೆ ಲಾಭದಾಯವಲ್ಲ ಎನ್ನುವ ಹಂತಕ್ಕೆ ರೈತರು ತಲುಪಿದ್ದರು. ಆದರೆ ಯಾಂತ್ರೀಕೃತ ಬೇಸಾಯ ಪದ್ದತಿ ಅನುಷ್ಟಾನದ ಬಳಿಕ ಭತ್ತದ ಬೇಸಾಯವೂ ಭರವಸೆ ಮೂಡಿಸಿದೆ. ವ್ಯವಸ್ಥಿತವಾಗಿ, ಕ್ರಮಬದ್ದವಾಗಿ ಬೇಸಾಯ ಮಾಡಿದರೆ ಅದು ಲಾಭದಾಯಕವಾಗಿ ಪರಿಣಮಿಸುತ್ತದೆ. ಕೃಷಿಯಲ್ಲಿ ಆಸಕ್ತಿ, ಶ್ರದ್ದೆ, ಪರಿಶ್ರಮ, ಹೊಸ ಹೊಸ ಅವಕಾಶಗಳನ್ನು ಸದ್ಭಳಕೆ ಮಾಡಿಕೊಳ್ಳುವ ಜಾಣ್ಮೆಯನ್ನು ಕೃಷಿಕರು ಹೊಂದಬೇಕು ಎಂದರು.
ಇವತ್ತು ಇಲಾಖಾ ಮಟ್ಟದಲ್ಲಿ ಹಲವಾರು ಕಾರ್ಯಕ್ರಮಗಳಿವೆ. ಅದನ್ನು ಇಲಾಖೆಗಳಿಂದ ಅಧಿಕಾರಯುತವಾಗಿ ಕೇಳಬೇಕು. ಯಾಂತ್ರೀಕೃತ ಕೃಷಿ ಪದ್ದತಿ ಅಳವಡಿಸಿ ಹಡಿಲು ಭೂಮಿಯ ಅಭಿವೃದ್ದಿಗೆ ಮುಂದಾಗಬೇಕು. ಪ್ರತಿಯೊಂದು ಯಶಸ್ಸಿನ ಹಿನ್ನೆಲೆಯಲ್ಲಿ ದೇವರ ಆಶೀರ್ವಾದದೊಂದಿಗೆ ಮನುಷ್ಯ ಪ್ರಯತ್ನವೂ ಅತೀ ಅಗತ್ಯವಾಗಿದೆ. ಈ ಭಾಗದ ಜನರು ಶ್ರಮಜೀವಿಗಳು, ಭಗವದ್ಭಕ್ತರು. ಪರಿಶ್ರಮ ಪಡುತ್ತಾರೆ. ಸುಮಾರು 50 ವರ್ಷಗಳಷ್ಟು ಹಿಂದೆ ಈ ಭಾಗದಲ್ಲಿ ತೀವ್ರ ಬಡತನವಿತ್ತು. 90% ಮನೆಗಳಲ್ಲಿ ಶೌಚಾಲಯ ಇರಲಿಲ್ಲ. ಶಿಕ್ಷಣ ಸಂಸ್ಥೆಗಳು ಇರಲಿಲ್ಲ. ಆದರೆ ಈಗ ಕ್ರಾಂತಿಕಾರಕ ಬದಲಾವಣೆ ಈ ಭಾಗದಲ್ಲಿ ಆಗಿದೆ ಎಂದರು.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವರಾದ ಕೋಟ ಶ್ರೀನಿವಾಸ ಪೂಜಾರಿ ನರ್ಸರಿ ಟ್ರೇ ವಿತರಿಸಿದರು. ಉಡುಪಿ ವಿಧಾನಸಭಾ ಕ್ಷೇತ್ರದ ಸಾಸಕ ಕೆ.ರಘುಪತಿ ಭಟ್ ಯಂತ್ರಶ್ರೀ ಮಾಹಿತಿ ಪತ್ರ ಬಿಡುಗಡೆ ಮಾಡಿದರು. ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಬೈಂದೂರು ಭತ್ತ ಬೆಳೆಗಾರರ ಒಕ್ಕೂಟಕ್ಕೆ ಅನುದಾನ ಪತ್ರ ವಿತರಿಸಿದರು. ಉಡುಪಿ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕ ಡಾ.ಹೆಚ್.ಕೆಂಪೇಗೌಡ ಭತ್ತ ನರ್ಸರಿ ಮಾಡಿದ ರೈತರಿಗೆ ಸನ್ಮಾನ ನೆರವೇರಿಸಿದರು.
ಯಡ್ತಾಡಿ ಗ್ರಾಮ ಪಂಚಾಯತ್ ಅಧ್ಯಕ್ಷೆ ಸವಿತಾ ದೇವಾಡಿಗ, ರಾಜ್ಯೋತ್ಸವ ಕೃಷಿ ಪ್ರಶಸ್ತಿ ಪುರಸ್ಕ್ರತರಾದ ಬಿ.ಶಾಂತಾರಾಮ ಶೆಟ್ಟಿ, ಕೂಡ್ಲಿ ಶ್ರೀ ಜನಾರ್ದನ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಡಾ.ಕೆ.ವೆಂಕಟರಮಣ ಉಡುಪ, ಜನಜಾಗೃತಿ ವೇದಿಕೆ ಕುಂದಾಪುರ ಸ್ಥಾಪಕ ಅಧ್ಯಕ್ಷರಾದ ಬಿ.ಅಪ್ಪಣ್ಣ ಹೆಗ್ಡೆ, ಗೀತಾನಂದ ಫೌಂಡೇಶನ್ ಪ್ರವರ್ತಕರಾದ ಆನಂದ್ ಸಿ ಕುಂದರ್, ಉದ್ಯಮಿ ಶ್ರೀನಿವಾಸ ಶೆಟ್ಟಿಗಾರ್ ರಂಗನಕೆರೆ ಬಾರಕೂರು, ಧ,ಗ್ರಾ ಯೋಜನೆಯ ಸಂಪತ್ ಸಾಮ್ರಾಜ್ಯ ಮೊದಲಾದವರು ಉಪಸ್ಥಿತರಿದ್ದರು.
ಯಂತ್ರಶ್ರೀ ಭತ್ತ ಬೇಸಾಯದಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು.ಶ್ರೀ ಮೂಕಾಂಬಿಕಾ ಭತ್ತ ಬೆಳೆಗಾರರ ಒಕ್ಕೂಟಕ್ಕೆ ಧರ್ಮಸ್ಥಳದಿಂದ ರೂ.5 ಲಕ್ಷದ ಚೆಕ್ ವಿತರಿಸಲಾಯಿತು. ಸಸಿಮಡಿ ತಯಾರಿಯಲ್ಲಿ ಸಾಧನೆ ಮಾಡಿದ ಶ್ರೀನಿವಾಸ ಉಡುಪ ಕೂಡ್ಲಿ, ಜಯಲಕ್ಷ್ಮೀ ಬಿ ಹೆಗ್ಡೆ ಹಿರಿಯಡಕ, ಸುಜಿತ್ ಕುಮಾರ್ ಹೆಗ್ಡೆ ಕಾಳಾವರ, ಕೃಷ್ಣ ನಾಯ್ಕ್ ಬೆಳ್ವೆ ಅವರನ್ನು ಗೌರವಿಸಲಾಯಿತು.
ಶ್ರೀ ಕ್ಷೇ.ಧ.ಗ್ರಾ ಯೋಜನೆಯ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್.ಹೆಚ್.ಮಂಜುನಾಥ ಸ್ವಾಗತಿಸಿದರು. ಲತಾ ಮತ್ತು ಸಂಗಡಿಗರು ರೈತಗೀತೆ ಹಾಡಿದರು. ಬ್ರಹ್ಮಾವರ ತಾಲೂಕು ಯೋಜನಾಧಿಕಾರಿ ದಿನೇಶ ಶೇರೆಗಾರ್ ವಂದಿಸಿದರು.
ನವೀನ್ ಅಮೀನ್, ಕೃಷಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಮನೋಜ್ ಮಿನೇಜಸ್, ಉಡುಪಿ ಜಿಲ್ಲೆಯ ಹಿರಿಯ ನಿರ್ದೇಶಕ ಶಿವರಾಯ ಪ್ರಭು ಮೊದಲಾದವರು ಹಾಜರಿದ್ದರು.