ಮಂಗಳೂರು, ಜೂ 28 (DaijiworldNews/SM): ಉಳ್ಳಾಲ ವಲಯದ ಬಟ್ಟಪ್ಪಾಡಿ ಹತ್ತಿರದ ಸಮುದ್ರದಲ್ಲಿ ಪ್ರಿನ್ಸೆಸ್ ಮಿರಾಲ್ ಹೆಸರಿನ ಸರಕು ಸಾಗಾಟದ ಹಡಗು ಮುಳುಗಡೆಯಾಗಿದ್ದು, ಹಡಗಿನ ಡರ್ಟಿ ವಾಟರ್ ಟ್ಯಾಂಕಿನಿಂದ ಸಣ್ಣ ಪ್ರಮಾಣದಲ್ಲಿ ತೈಲ ಸೋರಿಕೆಯಾಗುತ್ತಿದೆ. ಆದಕಾರಣ ಮುಂಜಾಗ್ರತಾ ಕ್ರಮವಾಗಿ ಉಳ್ಳಾಲ ವಲಯದ ಸುತ್ತಮುತ್ತಲಿನ ಸಮುದ್ರದಲ್ಲಿ ಮೀನುಗಾರಿಕೆ ನಿಷೇಧಿಸಲಾಗಿದೆ.
ಇದನ್ನು ಉಲ್ಲಂಘಿಸಿದ್ದಲ್ಲೀ ಸಂಬಂಧಿಸಿದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಮೀನುಗಾರಿಕೆ ಇಲಾಖೆಯ ಜಂಟಿ ನಿರ್ದೇಶಕರು ತಿಳಿಸಿದ್ದಾರೆ. ಬಟ್ಟಪ್ಪಾಡಿಯಲ್ಲಿ ವಿದೇಶಿ ಸರಕು ಸಾಗಾಟದ ಹಡಗು ತಾಂತ್ರಿಕ ಸಮಸ್ಯೆಯಿಂದಾಗಿ ಸಂಚಾರ ಸ್ಥಗಿತಗೊಳಿಸಿತ್ತು. ಅಲ್ಲದೆ, ಸಣ್ಣ ರಂದ್ರದ ಮೂಲಕ ಹಡಗಿನೊಳಗೆ ನೀರು ಪ್ರವೇಶಿಸಿತ್ತು. ತಕ್ಷಣ ಕೋರ್ಸ್ಟ್ ಗಾರ್ಡ್ ಸಿಬ್ಬಂದಿಗಳಿಗೆ ಈಮೇಲ್ ಮೂಲಕ ಮಾಹಿತಿ ರವಾನಿಸಲಾಗಿದ್ದು, ಹಡಗಿನಲ್ಲಿದ್ದವರನ್ನು ರಕ್ಷಿಸಲಾಗಿತ್ತು.
ಬಳಿಕ ಇಂಧನ ಹಾಗೂ ತೈಲವನ್ನು ತೆರವುಗೊಳಿಸುವ ಬಗ್ಗೆ ಚರ್ಚೆ ನಡೆಸಲಾಗಿತ್ತಾದರೂ ಅದು ಸಾಧ್ಯವಾಗಿರಲಿಲ್ಲ. ಇದೀಗ ತೈಲ ಸೋರಿಕೆಯ ಮಾಹಿತಿ ಲಭ್ಯವಾಗಿದ್ದು, ಇದು ಅಪಾಯಕ್ಕೆ ಅಹ್ವಾನವಾಗಿದೆ. ಈ ಹಿನ್ನೆಲೆಯಲ್ಲಿ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ.