ಬಂಟ್ವಾಳ,ಜೂ 28 (DaijiworldNews/SM): ಸಜಿಪನಡು ಗ್ರಾಮವನ್ನು ಕಸದ ಕೊಂಪೆಯನ್ನಾಗಿ ಮಾಡಲು ಬಂಟ್ವಾಳ ಪುರಸಭೆ ಮತ್ತು ಜಿಲ್ಲಾಡಳಿತ ಹೊರಟಿದೆಯೇ ಎನ್ನುವ ಪ್ರಶ್ನೆ ಕಾಡಲಾರಂಬಿಸಿದೆ. ಎರಡು ಶಾಸಕರ ಉಪಸ್ಥಿತಿಯಲ್ಲಿ ಎರಡು ಸಲ ಜಿಲ್ಲಾಧಿಕಾರಿ ಕಚೇರಿಯಲ್ಲಿ ಎರಡು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಆದ ತೀರ್ಮಾನಕ್ಕೆ ಬಂಟ್ವಾಳ ಪುರಸಭೆ ಸೊಪ್ಪು ಹಾಕಿಲ್ಲ.
ಕೇವಲ ಒಣಕಸ ಹಾಕಬೇಕೆಂಬ ಎರಡು ಜಿಲ್ಲಾಧಿಕಾರಿಗಳ ಆದೇಶವನ್ನು ನಿರ್ಲಕ್ಷ ಮಾಡಿ ಗಬ್ಬು ವಾಸನೆ ಬರುವ ರಾಶಿ ರಾಶಿ ತ್ಯಾಜ್ಯವನ್ನು ಬಂಟ್ವಾಳ ಪುರಸಭೆ ಸುರಿದಿದೆ. ಸಜೀಪ ಪರಿಸರದ ಜನತೆಯ ಆರೋಗ್ಯದ ಬಗ್ಗೆ ಜಿಲ್ಲಾಡಳಿತಕ್ಕೆ ಇಷ್ಟು ತಾತ್ಸಾರವೇಕೆ ಎನ್ನುವ ಪ್ರಶ್ನೆಯನ್ನು ಸಾರ್ವಜನಿಕರು ಮಾಡಲಾರಂಭಿಸಿದ್ದಾರೆ. ಜಿಲ್ಲಾಧಿಕಾರಿ ಕಚೇರಿ ಮುಂದೆ ಉಪವಾಸ ಸತ್ಯಾಗ್ರಹಕ್ಕೆ ಸಜೀಪ ಜನತೆ ತಯಾರಾಗಿದೆ.
ನೂರೈವತ್ತು ಮನೆ, ಸರ್ಕಾರಿ ಶಾಲೆ, ಅಂಗನವಾಡಿ, ದಲಿತ ಕಾಲೊನಿ ಇದ್ದರೂ ಲೆಕ್ಕಿಸದೆ ದಬ್ಬಾಳಿಕೆಯಲ್ಲಿ ಬಂಟ್ವಾಳ ಪುರಸಭೆ ಕಸ ಸುರಿದು ಹೋಗುತ್ತಿರುವುದು ಬೆಳಕಿಗೆ ಬಂದಿದೆ. ಜಿಲ್ಲಾಧಿಕಾರಿಯವರು ಪರಿಸರ ಇಲಾಖೆಯೊಂದಿಗೆ ಸ್ಥಳಕ್ಕೆ ಭೇಟಿ ನೀಡುವಂತೆ ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.