ಕಾರ್ಕಳ, ಮೇ 23 (DaijiworldNews/HR): ವಿಶ್ವದಲ್ಲಿಯೇ ಅತೀ ಹೆಚ್ಚು ಜನಸಂಖ್ಯೆ ಹೊಮದಿರುವ ದೇಶ ಭಾರತವಾಗಿದೆ. ದೇಶ ಪ್ರತಿಯೊಬ್ಬ ನಾಗರಿಕನಿಗೆ ಸರಕಾರದ ಉದ್ಯೋಗ ದೊರಕುವುದು ಗಗನಕುಸುಮವಾಗಿದೆ. ಪ್ರತಿಯೊಬ್ಬ ನಾಗರಿಕರನು ತನ್ನ ಸ್ವಾವಲಂಬಿ ಬದುಕಿಗೆ ಸ್ವ-ಉದ್ಯೋಗಗಳನ್ನು ಆಯ್ಕೆಮಾಡಿಕೊಳ್ಳುವುದು ಸೂಕ್ತವಾಗಿದೆ. ಅದಕೆ ಪೂರಕವಾಗಿ ವಿವಿಧ ಸಂಘ-ಸಂಸ್ಥೆಗಳಿಗೆ ರಾಜ್ಯ ಮತ್ತು ಕೇಂದ್ರ ಸರಕಾರವು ಪ್ರೋತ್ಸಾಹಧನ ನೀಡುತ್ತಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಅಂಗಾರ ಹೇಳಿದ್ದಾರೆ.
ಸೋಮವಾರದಂದು ಕಾರ್ಕಳ ನಗರದ ಮಂಜುನಾಥ ಪೈ ಸಭಾಂಗಣದಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನ ಇಲಾಖೆ ಇವರ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಮೃತ ಸ್ವ-ಸಹಾಯ ಕಿರು ಉದ್ದಿಮೆ ಯೋಜನೆಯಡಿ ಸ್ತ್ರೀಶಕ್ತಿ ಗುಂಪುಗಳಿಗೆ ಅಮೃತ ಬೀಜ ಧನ ಚೆಕ್ ವಿತರಣೆ ನೆರವೇರಿಸಿ ಮಾತನಾಡಿದ ಅವರು, ಉಡುಪಿ ಜಿಲ್ಲೆಯಲ್ಲಿ 140 ಸ್ವ ಸಹಾಯ ಗುಂಪುಗಳು ರಚನೆಗೊಂಡಿದ್ದು, ವಿವಿಧ ಉದ್ದಿಮೆಗಳನ್ನು ಆಯಾಯ ಗ್ರಾ.ಪಂ.ಗಳಲ್ಲಿ ನಡೆಸುತ್ತಿದೆ. ಪ್ರತೀ ಸ್ವಸಹಾಯ ಸಂಘಗಳಿಗೂ ಸಹಾಯಧನ ಒದಗಿಸುವ ಮೂಲಕ ಎಲ್ಲರನ್ನೂ ಸುದೃಢರನ್ನಾಗಿಸುವ ಪ್ರಯತ್ನ ಸರಕಾರಗಳು ಮಾಡುತ್ತಿವೆ. ಮೀನುಗಾರಿಕೆ ಇಲಾಖೆಯಲ್ಲೂ ಮೀನುಗಾರರಿಗೆ ಪ್ರೋತ್ಸಾಹಿಸುವ ಅನೇಕ ಯೋಜನೆಗಳನ್ನು ರಾಜ್ಯ ಸರಕಾರ ಹಮ್ಮಿಕೊಂಡಿದೆ ಎಂದರು.
ರಾಜ್ಯ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ವಿ.ಸುನಿಲ್ ಕುಮಾರ್ ಮಾತನಾಡಿ, ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಕಾರ್ಯಕ್ರಮದ ಸಂದರ್ಭ ವಿವಿಧ ಇಲಾಖೆಯಡಿ ಅಮೃತ ಎಂಬ ಹೆಸರಿನಲ್ಲಿ ಮುಖ್ಯಮಂತ್ರಿಗಳು ವಿಶೇಷ ಯೋಜನೆಗಳನ್ನು ಘೋಷಿಸಿದ್ದರು. ಅದರ ಪರಿಣಾಮವಾಗಿ ಅಮೃತ ಸ್ವಸಹಾಯ ಕಿರು ಉದ್ಯಮಕ್ಕೆ ಕಾರ್ಕಳ ತಾಲೂಕಿನ 88 ಸ್ವಸಹಾಯ ಸಂಘಗಳಿಗೆ ತಲಾ 1 ಲಕ್ಷದಂತೆ 88 ಲಕ್ಷ ರೂ. ಸಹಾಯಧನವನ್ನು ಬಿಡುಗಡೆಗೊಳಿಸಿದೆ. ರಾಜ್ಯದ ಎಲ್ಲಾ ತಾಲೂಕುಗಳಿಗೂ ಈ ಯೋಜನೆ ತಲುಪಲಿದ್ದು, ಮುಂದಿನ ದಿನಗಳಲ್ಲಿ ಉಳಿದ ಸ್ವಸಹಾಯ ಸಂಘಗಳಿಗೂ ಸಹಾಯಧನ ನೀಡುವ ಯೋಜನೆ ಸರಕಾರದ ಮುಂದಿದೆ ಎಂದಿದ್ದಾರೆ.
ಇನ್ನು ಹೈನುಗಾರಿಕೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಪ್ರತೀ ಲೀ.ಹಾಲಿಗೆ ಸಹಾಯಧನ ಜೊತೆಯಲ್ಲಿ ಹೈನು ಉದ್ಯಮದಲ್ಲಿ ಪ್ರಗತಿ ಸಾಧಿಸುವ ಉದ್ದೇಶದಿಂದ ಕ್ಷೀರ ಸಮೃದ್ಧಿ ಬ್ಯಾಂಕ್ ಸ್ಥಾಪನಗೊಳ್ಳಲಿದ್ದು, 500ಕೋಟಿ ರೂ. ಅನುದಾನವನ್ನು ಸರಕಾರ ಬಿಡುಗಡೆಗೊಳಿಸಿದೆ. ಇದರಿಂದ ಹೈನುಗಾರರರಿಗೆ ಪರೋಕ್ಷ ಸಹಾಯಧನ ಲಭ್ಯವಾಗಲಿದೆ ಎಂದರು. ಡೀಮ್ಡ್ ಅರಣ್ಯ ಸಮಸ್ಯೆಯನ್ನು ಸರಕಾರ ಪರಿಹರಿಸಿದ್ದು, ಮುಂದಿನ ದಿನಗಳಲ್ಲಿ ಬಾಕಿಯಿರುವ ಹಕ್ಕುಪತ್ರವನ್ನು ವಿತರಿಸುವ ಕಾರ್ಯಕ್ರಮ ನಡೆಯಲಿದೆ ಎಂದರು.
ಪುರಸಭೆ ಅಧ್ಯಕ್ಷೆ ಸುಮಾ, ತಹಸೀಲ್ದಾರ್ ಪ್ರಕಾಶ್ ಕುರ್ಡೇಕರ್,ಕಾರ್ಕಳ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಗುರುದತ್ ಎಂ.ಎನ್., ಹೆಬ್ರಿ ತಾ.ಪಂ.ಕಾರ್ಯನಿರ್ವಹಣಾಧಿಕಾರಿ ಶಶಿಧರ್,ಉಡುಪಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ವೀಣಾ ವಿವೇಕಾನಂದ್ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಎಸ್ಸೆಸ್ಸೆಲ್ಸಿಯಲ್ಲಿ ಅತ್ಯಧಿಕ ಅಂಕ ಗಳಿಸಿದ 11 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.