ಮಂಗಳೂರು,ಮೇ 21 (DaijiworldNews/MS): ಮುಂದಿನ ಹತ್ತು - ಹದಿನೈದು ದಿನಗಳಲ್ಲಿ ಮುಂಗಾರು ರಾಜ್ಯವನ್ನು ಪ್ರವೇಶಿಸುವ ಹಿನ್ನೆಲೆಯಲ್ಲಿ ಜಿಲ್ಲೆಯ ಅಧಿಕಾರಿಗಳು ಕೈಗೊಳ್ಳಬೇಕಾದ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ವಿ. ಪೊನ್ನು ರಾಜ್ ಅವರು ಸಂಬಂಧಿಸಿದವರಿಗೆ ನೀಡಿದರು.
ಅವರು ಮೇ.21ರ ಶನಿವಾರ ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಮುಂಗಾರು ಪೂರ್ವಸಿದ್ದತೆಗಳ ಕುರಿತು ಹಮ್ಮಿಕೊಳ್ಳಲಾಗಿದ್ದ ಸಭೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಈ ಬಾರಿ ಮುಂಗಾರು ಅವಧಿಗೆ ಮುನ್ನ ಪ್ರವೇಶಿಸುತ್ತಿದೆ, ಹೆಚ್ಚು ಮಳೆಯಾಗುವ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಯಾವುದೇ ಸನ್ನಿವೇಶ ಎದುರಿಸಲು ಅಧಿಕಾರಿಗಳು ಸನ್ನದ್ದರಾಗಬೇಕು, ಪ್ರವಾಹ ಸೇರಿದಂತೆ ಪ್ರಾಕೃತಿಕ ಹಾಗೂ ಮಾನವನಿಂದಾಗ ಬಹುದಾದ ಅವಘಡಗಳನ್ನು ಎದುರಿಸಲು ಈಗಲೇ ಸಿದ್ದತೆಗಳು ಪೂರ್ಣಗೊಳ್ಳಬೇಕು ಎಂದರು.
ಅಧಿಕಾರಿಗಳು ತಂಡದೊಪಾದಿಯಲ್ಲಿ ಕೆಲಸ ಮಾಡಬೇಕು. ಮಳೆಯಿಂದ ಹಾನಿಗೊಳಗಾದ ಎಲ್ಲಾ ತರಹದ ಮನೆಗಳು, ಆಸ್ತಿ ಪಾಸ್ತಿಯ ಹಾನಿಯನ್ನು ಸರ್ಕಾರ ನಿಗದಿ ಪಡಿಸಿರುವ ಆಪ್ ಮೂಲಕ ಮೊದಲು ಸಮೀಕ್ಷೆ ಮಾಡಿ, ಪ್ರಥಮ ಮಾಹಿತಿಯನ್ನು ಸಂಗ್ರಹಿಟ್ಟುಕೊಳ್ಳಬೇಕು, ಸಂಬಂಧಿಸಿದ ಅಧಿಕಾರಿಗಳು 24 ತಾಸಿನೊಳಗೆ ಪರಿಹಾರ ನೀಡಬೇಕು ಎಂದು ನಿರ್ದೇಶನ ನೀಡಿದರು.
ಲೋಕೋಪಯೋಗಿ ಇಲಾಖೆ, ಪಂಚಾಯತ್ ರಾಜ್ ಹಾಗೂ ಇಂಜಿನಿಯರಿಂಗ್ ಹಾಗೂ ಮೆಸ್ಕಾಂ ಇಲಾಖೆಯ ಸಿಬ್ಬಂದಿಗಳ ತಂಡವೊಂದು ಸಿದ್ದವಿರಬೇಕು, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದಿಂದ ಕೈಗೊಳ್ಳಲಾಗಿರುವ ಜಿಲ್ಲೆಯ ಹೆದ್ದಾರಿ ನಿರ್ಮಾಣದ ಸ್ಥಳಗಳಲ್ಲಿ ಬಸ್ ಗಳು ಸೇರಿದಂತೆ ಯಾವುದೇ ಪ್ರಯಾಣಿಕ ಹಾಗೂ ಗೂಡ್ಸ್ ವಾಹನಗಳು ಅಪಘಾತಕ್ಕೀಡಾಗಂತೆ ರಸ್ತೆ ಬದಿಗಳಲ್ಲಿ ನಾಮಫಲಕ ಹಾಗೂ ರಿಪ್ಲೆಕ್ಟರ್ ಗಳನ್ನು ಅಳವಡಿಸಬೇಕು, ಅಂತೆಯೇ ತಿರುವುಗಳಲ್ಲಿಯೂ ಈ ಕಾರ್ಯ ಮಾಡುವಂತೆ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಲಿಂಗೇಗೌಡ ಅವರಿಗೆ ಕಾರ್ಯದರ್ಶಿಯವರು ಸೂಚಿಸಿದರು.
ಜಿಲ್ಲೆಯಲ್ಲಿ ಮುಖ್ಯವಾಗಿ ಗುಡ್ಡ ಕುಸಿತ ಪ್ರಕರಣಗಳು ಸಂಭವಿಸುವ ಕಡೆಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅಲ್ಲಿನ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸುವ ಕೆಲಸವಾಗಬೇಕು, ನಗರ ಸ್ಥಳೀಯ ಸಂಸ್ಥೆಗಳು, ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಚರಂಡಿಗಳ ಹೂಳು ತೆಗೆಯಬೇಕು, ಜಲಾಶಯಗಳಲ್ಲಿ ಗೇಟ್ ಗಳು ಸೂಕ್ತ ವಾಗಿ ಕಾರ್ಯನಿರ್ವಹಿಸುತ್ತಿರುವ ಬಗ್ಗೆ ಖಾತ್ರಿ ಪಡಿಸಬೇಕು,ಕಾಳಜಿ ಕೇಂದ್ರಗಳನ್ನು ಸ್ಥಾಪಿಸಲು ಸೂಕ್ತ ಸ್ಥಳಗಳನ್ನು ಪತ್ತೆ ಮಾಡಬೇಕು, ವಿದ್ಯುತ್ ಕಂಬಗಳು ಬಿದ್ದಾಗ ಅದನ್ನು ತೆರವುಗೊಳಿಸುವ ಕಾರ್ಯವನ್ನು ಮೆಸ್ಕಾಂ ಚುರುಕಾಗಿ ಮಾಡಬೇಕು, ರಾಷ್ಟ್ರೀಯ ಹೆದ್ದಾರಿ ಹಾಗೂ ರಸ್ತೆಯಲ್ಲಿ ಬೀಳುವ ಮರಗಳನ್ನು ಕೂಡಲೇ ತೆರವುಗೊಳಿಸಲು ಅಗತ್ಯ ಪರಿಕರಗಳನ್ನು ಸನ್ನದ್ದ ಸ್ಥತಿಯಲ್ಲಿ ಇರಿಸುವಂತೆ ಅವರು ಸಂಬಂಧಿಸಿದ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಜಿಲ್ಲಾ ಪಂಚಾಯತ್ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್ ಮಾತನಾಡಿದರು.
ಎಸ್ಪಿ ಋಷಿಕೇಶ್ ಭಗವಾನ್ ಸೋನಾವಣೆ, ಸಹಾಯಕ ಆಯುಕ್ತ ಮದನ್ ಮೋಹನ್ ಹಾಗೂ ಸಂಬಂಧಿಸಿದ ಅಧಿಕಾರಿಗಳು ಸಭೆಯಲ್ಲಿದ್ದರು.