ಉಡುಪಿ, ಮೇ 20 (DaijiworldNews/HR): ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ತೊರೆದಿದ್ದರೂ, ಒಬ್ಬ ಕಾರ್ಯಕರ್ತನೂ ಕಾಂಗ್ರೆಸ್ ಬಿಟ್ಟು ಹೋಗಿಲ್ಲ. ಪಕ್ಷ ಅವರಿಗೆ, ಅವರ ತಂದೆಗೆ ತಾಯಿಗೆ ಅವಕಾಶ ನೀಡಿದೆ. ಮುಂದೆ ಪ್ರಮೋದ್ ಆದಷ್ಟು ಬೇಗ ಬಿಜೆಪಿ ಸೇರಿ ತಪ್ಪು ಮಾಡಿದ್ದೀನೀ ಅಂತ ಪಶ್ಚತ್ತಾಪ ಪಡ್ತಾರೆ. ಹಿಂದೆ ಜೊತೆಜೊತೆಗೆ ಕೂತು ಕೊಳ್ತಾ ಇದ್ವಿ. ಈಗ ಕೆಳಗೆ ಕುಳಿತು ಕೊಳ್ಳುವ ಪರಿಸ್ಥಿತಿ ಬಂದಿದೆ. ಇದರಿಂದ ನನಗೆ ಬೇಜಾರಾಗಿದೆ. ಕಾಂಗ್ರೆಸ್ ಕಾರ್ಯಕರ್ತರು ಬಹಳ ಉತ್ಸಾಹದಲ್ಲಿದ್ದಾರೆ. ಕೆಲವು ಬಿಜೆಪಿ ನಾಯಕರು ಕೂಡ ಕಾಂಗ್ರೆಸ್ ಸೇರುವ ಉತ್ಸಾಹದಲ್ಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಟೀಕೆ ಮಾಡಿದ್ದಾರೆ.
ಉಡುಪಿಯ ಪ್ರವಾಸಿ ಮಂದಿರದಲ್ಲಿ ಪಕ್ಷ ಸಂಘಟನೆ ಬಗ್ಗೆ ಮಾತನಾಡಿದ ಅವರು, ಕರಾವಳಿ ಭಾಗಕ್ಕೆ ಪ್ರತ್ಯೇಕ ಪ್ರಣಾಳಿಕೆಯನ್ನು ಸಿದ್ಧ ಮಾಡುತ್ತೇವೆ. ಉದ್ಯೋಗ ಸೃಷ್ಟಿಗೆ ಕಾರ್ಯಕ್ರಮ ರೂಪಿಸುತ್ತಿದ್ದೇವೆ. ಜನ ಸೌದಿಗೆ, ಮುಂಬೈ, ದುಬೈ ವಲಸೆ ಹೋಗ್ತಾ ಇದ್ದಾರೆ. ಮಂಗಳೂರು ಉಡುಪಿಯ ಮಂದಿ ಬೇರೆಯವರಿಗೆ ಕೆಲಸ ಕೊಡುವವರು. ಉದ್ಯೋಗ ಸೃಷ್ಟಿ ಮಾಡುವ ಮಂದಿ. ಯಾರಿಗೂ ಕೈ ಚಾಚಲ್ಲ. ಆ ನಿಟ್ಟಿನಲ್ಲಿ ಕರಾವಳಿಯಿಂದ ಕಾರವರದವರೆಗೆ ಪ್ರತ್ಯೇಕ ಕಾರ್ಯಕ್ರಮ ಪ್ರಣಾಳಿಕೆಯಲ್ಲಿ ಬಿಡುಗಡೆ ಮಾಡುತ್ತೇವೆ ಎಂದರು.
ಪ್ರಮೋದ್ ಅವರಿಗೆ ಕಾಂಗ್ರೆಸ್ ಪಕ್ಷದಲ್ಲಿ ಉಸಿರುಗಟ್ಟಿಸುವ ಬಗ್ಗೆ ಕೇಳಿದಾಗ ಪ್ರತಿಕ್ರಿಯಿಸಿದ ಡಿಕೆಶಿ, "ಪಾಪ!! ಈಗ ಅವರು ಏನೋ ಖುಷಿಗೆ ಹೇಳ್ತ ಇದ್ದಾರೆ. ಈಗ ಬಿಜೆಪಿಯಲ್ಲಿ ಪ್ರೆಶ್ ಗಾಳಿ ಸಿಗ್ತಾ ಇದ್ಯಲ್ಲ, ತಗೊಳ್ಳಿ ಬಿಡಿ ಎಂದು ವ್ಯಂಗ್ಯವಾಡಿದರು.
ಪಕ್ಷದಲ್ಲಿ ನಾನು ಇಲ್ಲದೆಯೂ ಕಾಂಗ್ರೆಸ್ ನಡೆಯುತ್ತೆ. ಪಕ್ಷ ಅಂದ ಮೇಲೆ ಕಷ್ಟ ಇರುತ್ತೆ. ಎಲ್ಲಾನು ತಡ್ಕೊಬೇಕು. ಯಾರಿಗೂ ಬಲವಂತ ಮಾಡಬೇಕಾಗಿಲ್ಲ. ನಮ್ಮ ಪಾರ್ಟಿಯಲ್ಲಿ ನಂಬಿಕೆ ಇರುವವರು ಬರ್ತಾರೆ ಹೋಗ್ತಾರೆ. ಸ್ವಲ್ಪ ದಿನದಲ್ಲೇ ಉಡುಪಿ ಈ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಪಕ್ಕ ಆಗುತ್ತದೆ. ಉಡುಪಿ ಜಿಲ್ಲಾ ಬ್ಲಾಕ್ ಅಧ್ಯಕ್ಷರು ಸಭೆಯನ್ನು ಮಾಡಿದ್ದೇವೆ ಮುಂದೆ ಪಕ್ಷದ ವರಿಷ್ಠರ ಜೊತೆಗೂಡಿ ಚರ್ಚಿಸಿ ನಿರ್ಧಾರ ಮಾಡುತ್ತೇವೆ ಎಂದರು.
ಉಡುಪಿಯನ್ನು ಹೊರತುಪಡಿಸಿ ಸದಸ್ಯತ್ವ ಅಭಿಯಾನ ನಡೆಯುತ್ತಿದೆ. ಮುಂದೆ ಇಲ್ಲಿಯೂ ಮತ್ತೆ ಅಭಿಯಾನ ಆರಂಭ ಆಗುತ್ತೆ. ಮಹಿಳೆಯರಿಗೆ, ಹೊರಗಿನವರಿಗೆ ಅವಕಾಶ ಕೊಡುವ ಬಗ್ಗೆ ಚಿಂತನೇ ನಡೆಯುತ್ತಿದೆ ಎಂದಿದ್ದಾರೆ.
ಇನ್ನು ಸೋಮಶೇಖರ್ ಮತ್ತು ಜಿ ಟಿ ದೇವೇಗೌಡರ ಬಗ್ಗೆ ಪ್ರಶ್ನಿಸಿದಾಗ, 'ಸೋಮಶೇಖರ್ ಪಕ್ಷ ಬಿಟ್ಟು ಹೋಗಿದ್ದಾರೆ. ಉತ್ಸಾಹ ಇಲ್ಲ. ಅದು ಜಿ ಟಿ ದೇವೇಗೌಡರಿಗೆ ನನ್ನ ನಡುವೆ ನಡಿಬೇಕಾದ್ದು. ಹಿಂದೆ ಏನು ಮಾತಾಡ್ತಾರೋ ಮುಂದೆ ಏನು ಮಾತಾಡ್ತಾರೋ ಕಾದು ನೋಡೋಣ. ಈಗ ಅವರು ಮನೆಯ ದುಃಖದಲ್ಲಿದ್ದಾರೆ. ಧೈರ್ಯ ತುಂಬುವ ಕೆಲಸ ಆಗಬೇಕು ಎಂದು ಹೇಳಿದ್ದಾರೆ.
ಪತ್ರಿಕಾಗೊಷ್ಠಿಯಲ್ಲಿ ಅಶೋಕ್ ಕುಮಾರ್ ಕೊಡವೂರುˌಯು .ಆರ್. ಸಭಾಸತಿˌ ಭಾಸ್ಕರ ರಾವ್ ಕಿದಿಯೂರುˌ ಕುಶಲ ಶೆಟ್ಟಿˌ ನರಸಿಂಹಮೂರ್ತಿ.ಬಿˌ ಅಣ್ಣಯ್ಯ ಸೇರಿಗಾರ್ˌಕೃಷ್ಣಮೂರ್ತಿ ಕಿನ್ನಿಮೂಲ್ಕಿˌಕಿಶನ್ ಹೆಗ್ಡೆ ಕೊಳ್ಕೆಬೈಲ್ˌ ರೋಶನ್ ಶೆಟ್ಟಿˌ ಉಪಸ್ಥಿತರಿದ್ದರು.