*ಆರ್.ಬಿ.ಜಗದೀಶ್
ಕಾರ್ಕಳ, ಮೇ 20 (DaijiworldNews/MS): ಮುಂಗಾರು ಪೂರ್ವದಲ್ಲಿ ಸುರಿದ ಭಾರೀ ಮಳೆಗೆ ಸ್ವರ್ಣ ನದಿ ತುಂಬಿ ಹರಿಯುತ್ತಿದೆ.ನೀರು ಶುದ್ಧೀಕರಣ ಘಟಕ ಇನ್ನೂ ದುರಸ್ತಿಯಾಗದ ಹಿನ್ನಲೆಯಲ್ಲಿ ರಾಮಸಮುದ್ರ ನೀರನ್ನೇ ಪುರಸಭಾ ವ್ಯಾಪ್ತಿಯ ಗ್ರಾಹಕರಿಗೆ ಸರಬರಾಜು ಮಾಡಲಾಗುತ್ತಿದೆ.
ಸ್ವರ್ಣ ನದಿಯ ಹಿನ್ನಲೆ...
ಪಶ್ಚಿಮಘಟ್ಟದ ತಪ್ಪಲು ತೀರಾ ಪ್ರದೇಶವಾಗಿರುವ ಮಾಳದ ಮಲ್ಲಾರುನಲ್ಲಿ ಉಗಮಗೊಳ್ಳುವ ಸ್ವರ್ಣ ನದಿಯೂ ಮುಳ್ಳೂರು, ಪಟ್ಟಣಹಿತ್ಲು, ಹೇರಂಜೆ,ಕಲ್ಯಾಣಿ,ಎಡಪ್ಪಾಡಿ, ಹೊಯ್ಗೆಹಿತ್ಲು, ಹೆಗ್ಡೆಮನೆ ಮತ್ತು ಕಡಂದಲಾಜೆ ಮೊದಲಾದೆಡೆಯ ತೊರೆಗಳು ಪಶ್ಚಿಮಾಭಿಮುಖವಾಗಿ ಹರಿಯುವ ಈ ತೊರೆಗಳೆಲ್ಲವೂ ಕಡಾರಿ(ಮಾಚೊಟ್ಟೆ) ಹೊಳೆಯನ್ನು ಸೇರಿ ಎಣ್ಣೆಹೊಳೆಯನ್ನು ಕೂಡಿಕೊಂಡು ಗ್ರಾಮದ ಹೊರಗಡೆ ಸ್ವರ್ಣ ಎಂಬ ನಾಮಾಂಕಿತದೊಂದಿಗೆ ಪರಿಚಯಿಸಿಕೊಂಡು ಉಡುಪಿಯ ಕಲ್ಯಾಣಪುರದಲ್ಲಿ ಸಮುದ್ರದೊಂದಿಗೆ ಲೀನವಾಗುತ್ತದೆ.
ಕಾರ್ಕಳ,ಉಡುಪಿಗೆ ಆಸರೆಯಾದ ಸ್ವರ್ಣ
ತೆಳ್ಳಾರಿನ ಮುಂಡ್ಲಿಯ ಬಲ್ಮೆಗುಂಡಿಯಲ್ಲಿ ಕಿರುಅಣೆಕಟ್ಟನ್ನು ನಿರ್ಮಿಸಿ ಕಾರ್ಕಳ ಪುರಸಭಾ ವ್ಯಾಪ್ತಿಗೆ ಕುಡಿಯುವ ನೀರನ್ನು ಸರಬರಾಜು ಮಾಡಲಾಗುತ್ತದೆ. ಹಿರಿಯಡ್ಕದ ಬಜೆಯಲ್ಲಿ ನಿರ್ಮಿಸಿರುವ ಕಿರು ಅಣೆಕಟ್ಟುನಲ್ಲಿ ಸಂಗ್ರಹವಾಗಿರುವ ನೀರನ್ನು ಉಡುಪಿ ನಗರ ಸಭಾ ವ್ಯಾಪ್ತಿಯಲ್ಲಿ ಸಮಗ್ರವಾಗಿ ಪೊರೈಕೆ ಮಾಡಲಾಗುತ್ತಿದೆ.
ಮುಂಡ್ಲಿಯಲ್ಲಿ ಅಣೆಕಟ್ಟು ನಿರ್ಮಾಣ
1994ರಲ್ಲಿ ಎರಡು ಕೋಟಿ ರೂಪಾಯಿ ವೆಚ್ಚದಲ್ಲಿ ದುರ್ಗಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಮುಂಡ್ಲಿಯ ಬಲ್ಮೆಯಲ್ಲಿ ಸ್ವರ್ಣ ನದಿಗೆ ಅಡ್ಡವಾಗಿ ಕಿಂಡಿಅಣೆಕಟ್ಟನ್ನು ನಿರ್ಮಿಸಲಾಗಿತ್ತು. ತದ ನಂತರ ಇದೇ ಪರಿಸರದಲ್ಲಿ ತಲೆಎತ್ತಿದ್ದ ಜಲವಿದ್ಯುತ್ ಘಟಕ ನಿರ್ಮಿಸಿರುವ ಸಂದರ್ಭದಲ್ಲಿ ಹೈಡ್ರೋಲಿಕ್ ಗೇಟ್ಗಳನ್ನು ಅಳವಡಿಸಲಾಗಿರುವುದರಿಂದ ಹಲವು ಸಮಸ್ಸೆಗೂ ಕಾರಣವಾಗಿತ್ತು.
ಕೃತಕ ನೆರೆಗೆ ಕಾರಣವಾಗುತ್ತಿರುವ ಹೈಡ್ರೋಲಿಕ್ ಗೇಟ್ಗಳು
ಕಳೆದ ಕೆಲ ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಮಳೆಯಿಂದಾಗಿ ಸ್ವರ್ಣ ನದಿಯಲ್ಲಿ ಮಳೆ ನೀರು ಉಕ್ಕಿ ಹರಿಯುತ್ತಿದೆ. ಮುಂಡ್ಲಿ ಅಣೆಕಟ್ಟಿಗೆ 3 ದೊಡ್ಡದು ಹಾಗೂ 6 ಸಣ್ಣದಾದ ಒಟ್ಟು 9 ಹೈಡ್ರೋಲಿಕ್ ಗೇಟ್ಗಳನ್ನು ಅಳವಡಿಸಲಾಗಿದೆ. ಅದರಲ್ಲಿ ಇದೀಗ ಸಣ್ಣದಾಗಿರುವ 2 ಹೈಡ್ರೋಲಿಕ್ ಗೇಟ್ಗಳನ್ನು ಮಾತ್ರ ಇದೀಗ ತೆರೆದು ತುಂಬಿರುವ ಮಳೆ ನೀರನ್ನು ಹೊರ ಬಿಡಲಾಗುತ್ತಿದೆ. ಇದು ಕೃತಕ ನೆರೆಗೆ ಕಾರಣವಾಗಿದೆ. ಪರಿಣಾಮವಾಗಿ ಪರಿಸರದಲ್ಲಿ ಫಲವತ್ತಾದ ಕೃಷಿ ಹಾನಿಯಾಗುತ್ತಿದೆ.
ತುಂಬುತ್ತಿರುವ ಹೂಳು
1994ರ ಅವಧಿಯಲ್ಲಿ ಕಿರುಅಣೆಕಟ್ಟು ನಿರ್ಮಾಣಗೊಂಡಾಗ ಮರದ ಹಲಗೆಗಳನ್ನು ಅಳವಡಿಸಲಾಗಿತ್ತು. ಮಳೆಗಾಲದಲ್ಲಿ ಕಿರುಅಣೆಕಟ್ಟಿಗೆ ಅಳವಡಿಸಲಾಗಿದ್ದ ಮರದ ಹಲಗೆಯನ್ನು ತೆರವುಗೊಳಿಸುತ್ತಿದ್ದ ಕಾರಣದಿಮದಾಗಿ ಅಲ್ಲಿ ಹೂಳು ತುಂಬಿಕೊಳ್ಳಲು ಅವಕಾಶ ಇರುತ್ತಿರಲಿಲ್ಲ. ಹೈಡ್ರೋಲಿಕ್ ಗೇಟ್ ಅವಳವಡಿಯ ಬಳಿಕ ಅಣೆಕಟ್ಟಿನಲ್ಲಿ ಹೂಳು ತುಂಬಿಕೊಂಡಿದೆ.
ರಾಮಸಮುದ್ರದ ನೀರೆ ಗತಿ
ಮುಂಡ್ಲಿಯಿಂದ ರಾಮಸಮುದ್ರ ಟ್ಯಾಂಕ್ಗೆ ಸರಬರಾಜು ಆಗುತ್ತಿದ್ದ ನೀರನ್ನು ಸ್ಥಗಿತಗೊಳಿಸಲಾಗಿದೆ. ಮುಂಡ್ಲಿಯ ಹೂಳು ತುಂಬಿದ ಕಲುಷಿತ ನೀರು ನಳ್ಳಿಯ ಮೂಲಕ ಗ್ರಾಹಕರ ಮನೆ ಸೇರುತ್ತಿದ್ದ ಕುರಿತು ದಾಯ್ಜಿವಲ್ಡ್ ಸಚಿತ್ರ ವರದಿ ಪ್ರಕಟಿಸಿ ಜಿಲ್ಲಾಡಳಿತವನ್ನು ಎಚ್ಚರಿಸಿತ್ತು. ಆ ಬಳಿಕ ಮುಂಡ್ಲಿಯ ನೀರಿನ ಬದಲಾಗಿ ರಾಮಸಮುದ್ರದ ನೀರನ್ನು ಕಾರ್ಕಳ ಪುರಸಭಾ ವ್ಯಾಪ್ತಿಗೆ ಒದಗಿಸಲಾಗುತ್ತಿದೆ ಮಾಹಿತಿ ಲಭಿಸಿದೆ. ರಾಮಸಮುದ್ರದಲ್ಲಿರುವ ನೀರು ಶುದ್ಧೀಕರಣ ಘಟಕ ದುಸ್ಥಿತಿಯಲ್ಲಿದೆ. ಹೀಗಾಗಿ ಕಳೆದ ಕೆಲ ದಿನಗಳಿಂದ ಪುರಸಭಾ ವ್ಯಾಪ್ತಿಯ ಗ್ರಾಹಕರಿಗೆ ನೀಡಲಾಗುತ್ತಿರುವ ಕುಡಿಯುವ ನೀರನ್ನು(ರಾಮಸಮುದ್ರದ) ನೇರವಾಗಿ ಗ್ರಾಹಕರಿಗೆ ನೀಡುತ್ತಿರುವ ಅಂಶ ಬಯಲಾಗಿದೆ.
ದುರಸ್ಥಿ ಕಾರ್ಯ ನಡೆಸಲಾಗುತ್ತಿದೆ.
ಕೆಸರು ಮಿಶ್ರತ ನೀರು ಸರಬರಾಜು ಆಗುತ್ತಿದ್ದ ಕಾರಣದಿಂದಾಗಿ ಮುಂಡ್ಲಿಯಿಂದ ಬರುತ್ತಿದ್ದ ನೀರನ್ನು ತಡೆ ಹಿಡಿದು ದುರಸ್ಥಿ ಕಾರ್ಯ ನಡೆಸಲಾಗುತ್ತಿದೆ.ಅದೇ ರೀತಿಯಲ್ಲಿ ರಾಮಸಮುದ್ರದ ನೀರು ಶುದ್ಧೀಕರಣ ಘಟಕದ ದುರಸ್ಥಿ ಕಾರ್ಯವು ಪ್ರಗತಿಯಲ್ಲಿ ಇದ್ದು, ಇನ್ನು ಕೆಲವೇ ದಿನಗಳೊಳಗಾಗಿ ಪೂರ್ಣಗೊಳ್ಳಲಿದೆ.- ರೂಪಾ ಶೆಟ್ಟಿ , ಮುಖ್ಯಾಧಿಕಾರಿ ಕಾರ್ಕಳ ಪುರಸಭೆ