ಉಡುಪಿ, ಮೇ 19 (DaijiworldNews/SM): ಉಡುಪಿಯ ಬಾಲಕಿಯರ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ಗಾಯತ್ರಿ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಉಡುಪಿಯ ಐವರು ಟಾಪರ್ಗಳ ಪೈಕಿ ಒಬ್ಬರಾಗಿದ್ದಾರೆ. ಕಡು ಬಡತನದಲ್ಲಿ ಹುಟ್ಟಿ ಬೆಳೆದ ಈ ಬಾಲಕಿಯ ಸಾಧನೆಗೆ ಬಡತನವೆಂಬುವುದು ಅಡ್ಡಿಯಾಗಿಲ್ಲ. ಇದೇ ಕಾರಣದಿಂದಾಗಿ ಗಾಯತ್ರಿ ಇಂದು ರಾಜ್ಯದ ಗಮನ ಸೆಳೆದಿದ್ದಾಳೆ. ಎಸ್ ಎಸ್ ಎಲ್ ಸಿ ಅಂತಿಮ ಪರೀಕ್ಷೆಯಲ್ಲಿ ಪೂರ್ಣ ಅಂಕಗಳನ್ನು ಗಳಿಸಿ ಕೀರ್ತಿ ಪತಾಕೆ ಎತ್ತಿದ್ದಾಳೆ.
ಗಾಯತ್ರಿ ಉಡುಪಿಯ ಪ್ರಕಾಶ್ ಮತ್ತು ವಸಂತಿ ದೇವಾಡಿಗ ದಂಪತಿಯ ಪ್ರೀತಿಯ ಮಗಳು. ಆರ್ಥಿಕವಾಗಿ ಬಡತನದ ಹಿನ್ನೆಲೆಯಿಂದ ಬಂದವಳು. ಆದರೆ ಅದು ಅವಳ ಅಧ್ಯಯನದ ಮೇಲೆ ಪರಿಣಾಮ ಬೀರಲಿಲ್ಲ. ನಿರಂತರ ಪ್ರಯತ್ನ, ಸತತ ಪರಿಶ್ರಮದಿಂದಾಗಿ ತನ್ನ ಸಾಧನೆಯ ಮೆಟ್ಟಿಲೇರಲು ಗಾಯತ್ರಿಗೆ ಸಾಧ್ಯವಾಗಿದೆ.
ಅತ್ಯುನ್ನತ ಸಾಧನೆಯ ಬಳಿಕ ದೈಜಿವರ್ಲ್ಡ್ ಪ್ರತಿಕ್ರಿಯೆ ನೀಡಿದ ಗಾಯತ್ರಿ, ಹೃದ್ರೋಗ ತಜ್ಞೆಯಾಗುವ ಮೂಲಕ ಸಮಾಜ ಸೇವೆ ಮಾಡುವ ಕನಸನ್ನು ಹೊಂದಿದ್ದಾಳೆ ಎಂದು ತಿಳಿಸಿದ್ದಾಳೆ. ಪ್ರಕಾಶ್ ದೇವಾಡಿಗ, ಆಕೆಯ ತಂದೆ ವೃತ್ತಿಯಲ್ಲಿ ಮೇಸ್ತ್ರಿ (ಕೂಲಿ) ಮತ್ತು ತಾಯಿ ಬೀಡಿ ಕಟ್ಟುವ ಕಾಯಕವನ್ನು ಮಾಡುತ್ತಿದ್ದಾರೆ. ಗಾಯತ್ರಿಗೆ ಒಬ್ಬ ಅಣ್ಣ ಇದ್ದಾನೆ.
'ಎಸ್ಎಸ್ಎಲ್ಸಿ ಫಲಿತಾಂಶ ನೋಡಿ ನನಗೆ ತುಂಬಾ ಖುಷಿಯಾಗಿದೆ. ನಾನು ಪರೀಕ್ಷೆಯಲ್ಲಿ ಉತ್ತಮ ಅಂಕಗಳ ನಿರೀಕ್ಷೆಯಲ್ಲಿದ್ದೆ, ಅದರಂತೆ ನನಗೆ ಸಿಕ್ಕಿದೆ. ನನ್ನ ಪೋಷಕರು ಮತ್ತು ಶಿಕ್ಷಕರು ಸಾಕಷ್ಟು ಬೆಂಬಲ ನೀಡಿದ್ದಾರೆ ಎಂದು ಗಾಯತ್ರಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾಳೆ.