ಕುಂದಾಪುರ, ಮೇ 19 (DaijiworldNews/HR): ಪತ್ನಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಕೊಲೆಗೈದ ವ್ಯಕ್ತಿಯೊಬ್ಬನನ್ನು ಮೇ 19 ಗುರುವಾರದಂದು ಪೊಲೀಸರು ಬಂಧಿಸಲಾಗಿದೆ.
ಬಂಧಿತನನ್ನು ಸುರೇಂದ್ರ ನಾಯ್ಕ ಎಂದು ಗುರುತಿಸಲಾಗಿದೆ.
ಸಿದ್ದಾಪುರದ ವಂಡಾರು ಗ್ರಾಮದ ಕಟ್ಟೆಕೋಡ್ಲು ಎಂಬಲ್ಲಿ ಮೇ 17ರಂದು ರಾತ್ರಿ ಪತ್ನಿ ಅನಿತಾಳನ್ನು ಕೊಲೆ ಮಾಡಿದ್ದ.
ಇನ್ನು ಸುರೇಂದ್ರ 15 ವರ್ಷಗಳ ಹಿಂದೆ ಮೃತ ಅನಿತಾಳನ್ನು ಮದುವೆಯಾಗಿದ್ದು, ದಂಪತಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ. ಆರೋಪಿಯು ಪ್ರತಿದಿನ ಹೆಂಡತಿ ಮತ್ತು ಮಕ್ಕಳಿಗೆ ಹೊಡೆಯುತ್ತಿದ್ದನು. ಮೇ 17ರ ರಾತ್ರಿಯೂ ಸುರೇಂದ್ರ ಪತ್ನಿಯ ಮೇಲೆ ಹಲ್ಲೆ ನಡೆಸಿ ಕೊಲೆ ಮಾಡಿ ಆಕೆಯ ಶವವನ್ನು ದನದ ಕೊಟ್ಟಿಗೆ ಬಳಿ ಎಸೆದು ಪರಾರಿಯಾಗಿದ್ದ.
ಈ ಸಂಬಂಧ ಮೃತ ಅನಿತಾ ಅವರ ಸಹೋದರಿ ಜಯಂತಿ ಅವರು ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದು, ಪೊಲೀಸರು ಆರೋಪಿಗಾಗಿ ಹುಡುಕಾಟ ನಡೆಸಿ ಆತನನ್ನು ಬಂಧಿಸಿದ್ದಾರೆ.