ಮಂಗಳೂರು, ಮೇ 19 (DaijiworldNews/MS):ಗ್ರಾಮಗಳ ಅಭಿವೃದ್ಧಿಯಲ್ಲಿ ಗ್ರಾಮ ಪಂಚಾಯತ್ ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ಕುಮಾರ್ ಅವರು ಅಭಿಪ್ರಾಯಪಟ್ಟರು.
ಅವರು ನಗರದ ಜಿಲ್ಲಾ ಪಂಚಾಯತ್ ನೇತ್ರಾವತಿ ಸಭಾಂಗಣದಲ್ಲಿ ಮೇ.18ರ ಬುಧವಾರ ಮಂಗಳೂರು ಮತ್ತು ಮೂಡಬಿದ್ರೆ ತಾಲೂಕುಗಳ ಗ್ರಾಮ ಪಂಚಾಯತ್ನ ಅಧ್ಯಕ್ಷರು ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ, ಪಂಚಾಯತ್ ರಾಜ್ ವ್ಯವಸ್ಥೆ ಹಾಗೂ ಗ್ರಾಮಗಳ ಏಳಿಗೆಗೆ ಸರ್ಕಾರ ಜಾರಿಗೊಳಿಸಿರುವ ವಿವಿಧ ಯೋಜನೆಗಳ ಕುರಿತು ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಧಿಕಾರಿಗಳು ಹಾಗೂ ಸಿಬ್ಬಂದಿಗ್ರಾಮ ಪಂಚಾಯತ್ಗಳಲ್ಲಿ ಸೇವೆ ಮಾಡುವುದು ಭಾಗ್ಯ ಎಂಬ ಭಾವನೆಯೊಂದಿಗೆ ಕರ್ತವ್ಯ ನಿರ್ವಹಿಸಬೇಕು, ಗ್ರಾಮಗಳ ಅಭಿವೃದ್ಧಿಗೆ ಸಾಕಷ್ಟು ಯೋಜನೆಗಳನ್ನು ಅನುಷ್ಟಾನಕ್ಕೆ ತರಲಾಗಿದೆ, ಆ ಮೂಲಕ ಗ್ರಾಮಗಳ ಅಭಿವೃದ್ಧಿ ವಿಫುಲ ಅವಕಾಶಗಳಿದ್ದು, ಸಮರ್ಥವಾಗಿ ಬಳಸಿಕೊಳ್ಳಬೇಕು, ಗ್ರಾಮದಲ್ಲಿ ಎಲ್ಲಾ ಕುಟುಂಬಗಳಿಗೆ ವೈಯ್ಯಕ್ತಿಕ ಶೌಚಾಲಯ ಇರಬೇಕು, ಇಲ್ಲದಿದ್ದರೆ ಅಂತಹ ಮನೆಗಳಿಗೆ ಖುದ್ದು ಅಧ್ಯಕ್ಷರೇ ಭೇಟಿ ನೀಡಿ ಅವರಿಗೆ ಎದುರಾಗಿರುವ ಸಮಸ್ಯೆ ಬಗೆಹರಿಸಲು ಯತ್ನಿಸಬೇಕು, ಗ್ರಾಮಗಳಲ್ಲಿರುವ ವಸತಿ ರಹಿತರಿಗೆ ನಿವೇಶನ ಒದಗಿಸುವವಿವಿಧ ಯೋಜನೆಯಡಿ ಅರ್ಹರಿಗೆ ನಿವೇಶನ ಒದಗಿಸಿ ಕೊಡುವಂತೆ ಅವರು ತಿಳಿಸಿದರು.
ಮಂಜನಾಡಿ, ಕೋಣಾಜೆ, ಬಾಳೆಪುಣಿ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಈ ಬಾರಿ ಅಂತಹ ಸಮಸ್ಯೆ ತಲೆದೂರದಂತೆ ಅಗತ್ಯ ಕ್ರಮವಹಿಸುವಂತೆ ಸಂಬಂಧಿಸಿದವರಿಗೆ ಸೂಚಿಸಿದರು.ಈಗಾಗಲೇ ಜಿಲ್ಲಾ ಪಂಚಾಯತ್ನಲ್ಲಿ ಪುಸ್ತಕದ ಗೂಡು ನಿರ್ಮಿಸಿದ್ದು ಅದು 267 ಗ್ರಾಮ ಪಂಚಾಯತ್ ಹಾಗೂ ವಿವಿಧ ಕಡೆಗಳಲ್ಲಿ ಅನುಷ್ಟಾಠನಗೊಂಡಿರುವುದು ಉತ್ತಮ ಬೆಳವಣಿಗೆ ಎಂದವರು ಹೇಳಿದರು.ಸಭೆಯಲ್ಲಿ ಪಂಚಾಯತ್ ಅಭಿವೃಧ್ಧಿ ಅಧಿಕಾರಿಗಳು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಅಧಿಕಾರಿಗಳು, ಮಂಗಳೂರು ಮತ್ತು ಮೂಡಬಿದ್ರೆ ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸಂಬಂದಿಸಿದ ಅಧಿಕಾರಿಗಳು ಉಪಸ್ಥಿತರಿದ್ದರು.