ಮಂಗಳೂರು, ಮೇ 18 (DaijiworldNews/SM): ರಾಜ್ಯ ಸರಕಾರ ಶಾಲಾ ಪಠ್ಯಪುಸ್ತಕದಿಂದಲೇ ನಾರಾಯಣ ಗುರುಗಳ ವಿಷಯ ಕೈ ಬಿಟ್ಟಿದೆ. ಅಂದರೆ, ಬಿಜೆಪಿ ಪರಿವಾರಕ್ಕೆ ನಾರಾಯಣ ಗುರುಗಳ ಬಗ್ಗೆ ಇರುವ ಅಗೌರವದ ಭಾವನೆ ಸ್ಪಷ್ಟವಾಗಿದೆ ಎಂದು ಮಾಜಿ ಶಾಸಕ ಜೆ.ಆರ್. ಲೋಬೊ ಆರೋಪಿಸಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಪ್ರತಿಬಾರಿಯೂ ಹೆಸರಿನ ವಿಷಯದಲ್ಲಿ ರಾಜಕೀಯ ಮಾಡುವ ಬಿಜೆಪಿಗರು ಸುಂದರರಾಮ್ ಶೆಟ್ಟಿ ಅವರ ಹೆಸರನ್ನು ರಸ್ತೆಗೆ ಇಡುವ ವಿಷಯದಲ್ಲಿ ಭಾರೀ ಗಲಾಟೆ ಮಾಡಿದ್ದರು. ನಂತರ ಸುಂದರರಾಮ್ ಶೆಟ್ಟಿಯವರು ಪ್ರಾರಂಭಿಸಿದ ವಿಜಯ ಬ್ಯಾಂಕನ್ನೇ ಬೇರೆ ಬ್ಯಾಂಕಿಗೆ ವಿಲೀನಗೊಳಿಸಿ, ವಿಜಯ ಬ್ಯಾಂಕ್ ರೂವಾರಿ ಸುಂದರರಾಮ್ ಶೆಟ್ಟಿಯವರನ್ನು ಅವಮಾನಿಸಿದರು.
ಇದೀಗ ನಾರಾಯಣ ಗುರುಗಳ ಹೆಸರನ್ನು ಸರ್ಕಲ್ ಗೆ ಇಡಲು ಉತ್ಸಾಹ ತೋರಿದ ಬಿಜೆಪಿ ಕಳೆದ ಗಣರಾಜ್ಯೋತ್ಸವದಲ್ಲಿ ನಾರಾಯಣ ಗುರುಗಳ ಸ್ಥಬ್ಧಚಿತ್ರ ಕೈಬಿಟ್ಟಿತ್ತು. ಮತ್ತು ಅದು ಸಂವಹನ ಕೊರತೆಯಿಂದ ಆದದ್ದು ಎಂದು ಹೇಳಿತ್ತು.
ಇದೀಗ ನಾರಾಯಣ ಗುರುಗಳ ಪಠ್ಯವನ್ನೇ ಅಳಿಸಿ ಹಾಕಿದೆ ಎಂದು ಜೆ.ಆರ್. ಲೋಬೊ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಇದರ ವಿರುದ್ಧ ಹೋರಾಟ ನಡೆಸಲಾಗುವುದೆಂದು ಅವರು ಎಚ್ಚರಿಸಿದ್ದಾರೆ.