ಮಂಗಳೂರು, ಮೇ 18 (DaijiworldNews/MS): ಮಹಿಳೆಗೆ ಕಿರುಕುಳ ನೀಡುತ್ತಿದ್ದ ಮಾನಭಂಗ ಮತ್ತು ಹತ್ಯೆಗೆ ಯತ್ನಿಸಿದ ಯುವಕನೋರ್ವನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತನನ್ನು ಬಂಟ್ವಾಳ ಕಸಬದ ಮಂಡಾಡಿ ಹೌಸ್ ಶಿವರಾಜ್ ಕುಲಾಲ್ (28) ಎಂದು ಗುರುತಿಸಲಾಗಿದೆ.
ಪತಿಯೊಂದಿಗೆ ಮನಸ್ತಾಪ ಉಂಟಾಗಿ ಹಳೆಯಂಗಡಿ ಮೂಲದ 30 ವರ್ಷದ ಮಹಿಳೆ ನ್ಯಾಯಾಲಯದಲ್ಲಿ ವಿಚ್ಛೇದನಕ್ಕೆ ದಾವೆ ಹೂಡಿದ್ದರು. ಈ ನಡುವೆ 2 ವರ್ಷಗಳ ಹಿಂದೆ ಸಾಮಾಜಿಕ ಜಾಲತಾಣದ ಮುಖಾಂತರ ಶಿವರಾಜ್ ಕುಲಾಲ್ ಪರಿಚಯವಾಗಿ ಅವರಿಬ್ಬರು ಪ್ರೀತಿಸುತ್ತಿದ್ದರು. ಸುಮಾರು 6 ತಿಂಗಳುಗಳಿಂದ ಶಿವರಾಜ್ ಕುಲಾಲ್ ಮಹಿಳೆಗೆ ಮಾನಸಿಕ ಹಿಂಸೆ ನೀಡುವುದು ಮೈಗೆ ಕೈ ಹಾಕಿ ಮಾನ ಭಂಗ ಮಾಡಲು ಪ್ರಯತ್ನಿಸಿದ್ದರಿಂದ ಆತನಿಂದ ದೂರವಾಗಿದ್ದರು ಎನ್ನಲಾಗಿದೆ.
ಮಹಿಳೆ ಬಳ್ಳಾಲ್ ಬಾಗ್ ನ ಸಮೀಪದ ಕಂಪೆನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ಮೇ 17 ರಂದು ಸಂಜೆ ಮಹಿಳೆ ಕೆಲಸ ಮುಗಿಸಿ ತೆರಳುತ್ತಿರುವಾಗ ಲಿಫ್ಟ್ ನಲ್ಲಿ ಕೆಳಗಡೆ ಹೋಗುವ ಸಮಯದಲ್ಲಿ ಮಹಿಳೆಯನ್ನು ಬೈದು, ಹೊಡೆದು ಕುತ್ತಿಗೆಯನ್ನು ಹಿಡಿದು ಕೊಲೆ ಮಾಡಲು ಪ್ರಯತ್ನಿಸಿರುತ್ತಾನೆ ಎಂದು ಮಂಗಳೂರು ಮಹಿಳಾ ಠಾಣೆಯಲ್ಲಿ ನೀಡಿದ ದೂರಿನಲ್ಲಿ ದಾಖಲಾಗಿದೆ.