ಉಡುಪಿ, ಮೇ 18 (DaijiworldNews/MS): ರಾಜ್ಯದ ಕರಾವಳಿ ಭಾಗದಲ್ಲಿ ಸೋಮವಾರದಿಂದ ಮಳೆಗಾಲ ಧಾರಾಕಾರವಾಗಿ ಸುರಿಯಲು ಆರಂಭವಾಗಿದ್ದು, ಮುಂದಿನ ಐದು ದಿನಗಳ ಕಾಲ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಭಾರತೀಯ ಹವಾಮಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರವು ಮುನ್ಸೂಚನೆ ನೀಡಿದೆ.
ಈ ನಡುವೆ ಅವಧಿಗೂ ಮುನ್ನವೇ ಆಳ ಸಮುದ್ರದ ದೋಣಿಗಳು ಮಲ್ಪೆ ಬಂದರಿನಲ್ಲಿ ಲಂಗರು ಹಾಕಿವೆ. ಅಸಾನಿ ಚಂಡಮಾರುತದ ಅಬ್ಬರ ಮತ್ತು ಸಮುದ್ರದಲ್ಲಿ ಪ್ರಕ್ಷುಬ್ಧ ವಾತಾವರಣವಿರುವುದರಿಂದ ಕೆಲವು ದಿನಗಳ ಹಿಂದೆಯಷ್ಟೇ ಆಳಸಮುದ್ರ ಮೀನುಗಾರಿಕೆಗೆ ತೆರಳಿದ್ದ ಬೋಟುಗಳು ತಮ್ಮ ತಮ್ಮ ಬಂದರಿಗೆ ಬರಲಾರದೆ ಬೇರೆ ರಾಜ್ಯದ ಬಂದರಿನಲ್ಲಿ ಆಶ್ರಯ ಪಡೆದುಕೊಂಡಿವೆ.
ಭಾರತ ಸರ್ಕಾರದ ಮೀನುಗಾರಿಕಾ ಇಲಾಖೆ ಆಯುಕ್ತರು ಒಂದು ರಾಜ್ಯದ ಬೋಟುಗಳು ಇನ್ನೊಂದು ರಾಜ್ಯದಲ್ಲಿ ಸಿಲುಕಿಕೊಂಡಿದ್ದರೆ,, ಹತ್ತಿರದ ಬಂದರಿನಲ್ಲಿ ಉಳಿಯಲು ಸೂಕ್ತ ವ್ಯವಸ್ಥೆ ಕಲ್ಪಿಸಿ ಎಂದು ಸೂಚನೆ ನೀಡಿದೆ
ಮೇ 17 ರಿಂದ 19ರಂದು ಉಡುಪಿ ಜಿಲ್ಲೆಗೆ ಆರೆಂಜ್ ಅಲರ್ಟ್, ಮೇ 18ರಂದು ರೆಡ್ ಅಲರ್ಟ್ ಘೋಷಿಸಲಾಗಿದೆ. ಈ ಮೂರು ದಿನಗಳಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಯಿದ್ದು ಜಿಲ್ಲಾಡಳಿತ ಮುಂಜಾಗರೂಕತಾ ಕ್ರಮವಾಗಿ ಸೂಚನೆ ನೀಡಿದೆ.
ಕರ್ನಾಟಕ ಕರಾವಳಿಯಲ್ಲಿ ಪ್ರತಿ ಗಂಟೆಗೆ 40ರಿಂದ 50ಕಿ. ಮೀ. ವೇಗ ದಲ್ಲಿ ಗಾಳಿ ಬೀಸಲಿದ್ದು, ಮೀನು ಗಾರರು ಮುಂದಿನ 24 ಗಂಟೆಗಳ ಕಾಲ ಕಡಲಿಗಿಳಿಯದಂತೆ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ.
ಜಿಲ್ಲೆ, ತಾಲೂಕು ಮಟ್ಟದ ಅಧಿಕಾರಿಗಳು, ನಿಯೋಜಿತ ನೋಡೆಲ್ ಅಧಿಕಾರಿಗಳ, ಸ್ಥಳೀಯ ಸಂಸ್ಥೆಯ ವಿಪತ್ತು ನಿರ್ವಹಣಾ ಸಮಿತಿಯ ಸದಸ್ಯರು ಕಡ್ಡಾಯವಾಗಿ ಕೇಂದ್ರ ಸ್ಥಾನದಲ್ಲಿದ್ದು, ವಿಪತ್ತು ನಿಭಾಯಿಸಲು ತಯಾರಿ ಮಾಡಿಕೊಳ್ಳಬೇಕು. ನೆರೆ ಪೀಡಿತ ಪ್ರದೇಶದಲ್ಲಿ ವಾಸಿಸುವ ಸಾರ್ವಜನಿಕರು ಸುರಕ್ಷಿತ ಸ್ಥಳಗಳನ್ನು ತಲುಪುವಂತೆ ಜಿಲ್ಲಾಧಿಕಾರಿ ಕೂರ್ಮಾ ರಾವ್ ನಿರ್ದೇಶನ ನೀಡಿದ್ದಾರೆ.
" ಪ್ರತಿ ಬಾರಿಯೂ ಮೇ ೩೧ ಕ್ಕೆ ಮೀನುಗಾರಿಕೆ ಚಟುವಟಿಕೆ ನಿಲ್ಲಬೇಕಿತ್ತು. ಅಗಸ್ಟ್ ೧೫ ನಂತರ ಪುನಃ ಮೀನುಗಾರಿಕೆ ಚಟುವಟಿಕೆ ಆರಂಭವಾಗುತ್ತಿತ್ತು. ಆದರೆ ಅಸಾನಿ ಚಂಡಮಾರುತದ ಪರಿಣಾಮವಾಗಿ ೧೫ ದಿನಗಳ ಮುಂಚೆಯೇ ದೋಣಿಗಳು ದಡಸೇರುವಂತೆ ಜಿಲ್ಲಾಡಳಿತ ಮುನ್ಸೂಚನೆ ನೀಡಿದೆ. ಈಗಾಗಲೇ ಮೀನುಗಾರಿಕೆ ಸಾಕಷ್ಟು ನಷ್ಟ ಅನುಭವಿಸಿದ್ದೇವೆ. ಈಗ ಅಸಾನಿ ಚಂಡಮಾರುತದಿಂದ ಮೀನುಗಾರಿಕೆಗೆ ಮತ್ತೊಂದು ಹೊಡೆತ ಬಿದ್ದಿದೆ. ಅಲ್ಲದೆ ವರ್ಷದಿಂದ ವರ್ಷಕ್ಕೆ ಮೀನು ಸಿಗುವುದು ಕಡಿಮೆ ಆಗುತ್ತಿದೆ. ಅಲ್ಲದೆ ಡಿಸೇಲ್ ಕೂಡ ಕೊಡಬಾರದು ಎಂದು ಜಿಲ್ಲಾಡಳಿತ ಆದೇಶ ನೀಡಿದೆ. ಡಿಸೇಲ್ ಬೆಲೆಯೂ ಹೆಚ್ಚಾಗಿದೆ. ಕೆಲಸಗಾರರಿಗೆ ವೇತನ ಕೊಡುವುದೂ ಕೂಡ ಕಷ್ಟಕರವಾಗಿದೆ. ಡಿಸೇಲ್ ಗೆ ಸಬ್ಸಿಡಿ ಸ್ವಲ್ಪ ಜಾಸ್ತಿ ಮಾಡಿದರೆ ನಮಗೂ ಅನುಕೂಲ ಆಗುತ್ತದೆ. ಒಟ್ಟಾರೆಯಾಗಿ ಮೀನುಗಾರಿಕೆ ಯನ್ನು ನಂಬಿರುವ ಮೀನುಗಾರರ ಜೀವನ ಸಂಕಷ್ಟದಲ್ಲಿದೆ, ಎಂದು ಸ್ಥಳೀಯ ಮೀನುಗಾರರಾದ ತುಕಾರಾಂ ಮೈಂದನ್ ತಮ್ಮ ಅಳಲು ಹೇಳಿಕೊಂಡಿದ್ದಾರೆ.
ಇನ್ನು ಸುಮಾರು ೫೦ ರಷ್ಟು ಬೋಟುಗಳು ಈಗಾಗಲೇ ದಡಕ್ಕೆ ಬಂದಿವೆ. ರಾಜ್ಯದಲ್ಲಿಯೇ ಮಲ್ಪೆ ಬಂದರು ಅತಿ ದೊಡ್ಡದು. ತಮಿಳು ನಾಡಿನ ೪ ಬೋಟುಗಳು ಮಲ್ಪೆ ಬಂದರಿನಲ್ಲಿ ಆಶ್ರಯ ಪಡೆದಿದ್ದು, ಮಲ್ಪೆ ಬಂದರಿನಲ್ಲಿ ರಿಜಿಸ್ಟರ್ ಆಗಿರುವ ಬೋಟುಗಳು ಕೂಡ ಬೇರೆ ರಾಜ್ಯದಲ್ಲಿ ಸುರಕ್ಷಿತವಾಗಿರುವಂತೆ ವ್ಯವಸ್ಥೆ ಕಲ್ಪಿಸಲು ಮನವಿ ಮಾಡಲಾಗಿದೆ. ಸುಮಾರು ಒಟ್ಟು ೨೦೦೦ ಬೋಟುಗಳು ಮಲ್ಪೆ ಬಂದರಿನಲ್ಲಿದ್ದು, 700 ಆಳಸಮುದ್ರದ ಬೋಟುಗಳು, ೧೦೦೦ ನಾಡದೋಣಿಗಳು, ೩೦೦ ಕ್ಕಿಂತ ಹೆಚ್ಚು ಸಣ್ಣ ಬೋಟುಗಳು, ಪರ್ಶಿಯನ್ ಬೋಟುಗಳು ಇಲ್ಲಿವೆ. ಕೆಲವು ಸ್ಥಳೀಯ ನಾಡದೋಣಿಗಳು ಮೀನುಗಾರಿಕೆಗೆ ತೆರಳುವುದು ಬಿಟ್ಟರೆ, ಇನ್ನೊಂದೆರಡು ದಿನದಲ್ಲಿ ಮೀನುಗಾರಿಕೆ ಚಟುವಟಿಕೆಗಳು ಸ್ಥಗಿತಗೊಳ್ಳುತ್ತವೆ. ಇನ್ನು ಬಂದರಿಗೆ ಬರಲಿರುವ ಬೋಟುಗಳ ಬಗ್ಗೆಯೂ ನಿಗಾ ವಹಿಸಿದ್ದೇವೆ ಎಂದು, ಮಲ್ಪೆ ಬಂದರು ಇಲಾಖೆ ಉಪನಿರ್ದೇಶಕರಾದ ಕುಮಾರಸ್ವಾಮಿಯವರು ದಾಯ್ಜಿವರ್ಲ್ಡ್ ಗೆ ತಿಳಿಸಿದ್ದಾರೆ.