ಕಾರ್ಕಳ,ಮೇ 18 (DaijiworldNews/MS): ಸಾರ್ವಜನಿಕ ಪ್ರಯಾಣಿಕರ ಸದ್ದುದ್ದೇಶಕ್ಕಾಗಿ ನಿರ್ಮಿಸಿದ ನಲ್ಲೂರು ಗಾಂಧಿನಗರದ ತಂಗುದಾಣ ಸಿಮೆಂಟ್ ಮಿಶ್ರಣ ಕೇಂದ್ರವಾಗಿ ಮಾರ್ಪಡಾಗಿದೆ.
ಕರ್ನಾಟಕ ಗ್ರಾಮೀಣಾಬಿವೃದ್ಧಿ ಯೋಜನೆಯಡಿಯಲ್ಲಿ ಇದೇ ಪರಿಸರದ ರಸ್ತೆಯೊಂದರ ಕಾಂಕ್ರೀಟುಕರಣದ ಕಾಮಗಾರಿ ನಡೆಯುತ್ತಿದೆ. ಅದಕ್ಕಾಗಿ ಸ್ಥಳೀಯ ಬಸ್ ತಂಗುದಾಣವನ್ನು ಕಾಮಗಾರಿ ವಹಿಸಿಕೊಂಡಿರುವ ಗುತ್ತಿಗೆದಾರರು ದುರುಪಯೋಗ ಪಡಿಸಿಕೊಂಡಿರುವ ಆರೋಪ ಕೇಳಿಬರುತ್ತಿದೆ.
ಮಳೆ ಹಾಗೂ ಬಿಸಿಲಿನಿಂದ ರಕ್ಷಣೆ ಪಡೆಯುವ ಸದ್ದುದೇಶಕ್ಕಾಗಿ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ನಲ್ಲೂರು ಗ್ರಾಮ ಪಂಚಾಯತ್ ಬಸ್ ತಂಗುದಾಣವನ್ನು ನಿರ್ಮಿಸಿದೆ. ಇದರಿಂದ ಸರ್ವ ಋತುವಿನಲ್ಲಿ ಪ್ರಯಾಣಿಕರಿಗೆ ಅನುಕೂಲವಾಗುತ್ತಿತ್ತು.
ಕೆಲ ದಿನಗಳ ಹಿಂದಿನಿಂದ ತಂಗುದಾಣದಲ್ಲಿ ಸಿಮೆಂಟ್ ಗೋಣಿಚೀಲವನ್ನು ತಂಗುದಾಣದಲ್ಲಿ ತುಂಬಿಸಿ ಇಡಲಾಗಿದೆ. ಅದರ ಎದುರುಗಡೆಯಲ್ಲಿ ಭಾರೀ ಗಾತ್ರದ ಯಂತ್ರವನ್ನು ನಿಲ್ಲಿಸಿ ಬೇಕಾಬಿಟ್ಟಿಯಾಗಿ ಕಾಂಕ್ರೀಟ್ ಮಿಶ್ರಣದ ಕಾಮಗಾರಿ ನಡೆಸಲಾಗುತ್ತಿದೆ. ಇದರಿಂದ ಪ್ರಯಾಣಿಕರು ತೊಂದರೆ ಅನುಭವಿಸುತ್ತಿದ್ದಾರೆ.
ಬಜಗೋಳಿ-ಹೊಸ್ಮಾರು ಸಂಪರ್ಕಿಸುವ ರಾಜ್ಯ ಹೆದ್ದಾರಿಯನ್ನು ಕಬಳಿಸಿ, ರಸ್ತೆಯ ಮೇಲೆ ಕಾಂಕ್ರೀಟ್ ಮಿಶ್ರಣದ ವಾಹನವನ್ನು ನಿಲ್ಲಿಸಿರುವುದು ಇತರ ವಾಹನ ಸಂಚಾರಕ್ಕೂ ತೊಡಕಾಗುತ್ತಿದೆ. ತನ್ನ ಸ್ವಾರ್ಥಕ್ಕಾಗಿ ಸಾರ್ವಜನಿಕ ಸೊತ್ತನ್ನು ದುರುಪಯೋಗ ಪಡಿಸಿ ಹಾಳುಗೆಡವಿದ ಗುತ್ತಿಗೆದಾರನ ವಿರುದ್ಧ ಕ್ರಮಕ್ಕೆ ಸಾರ್ವಜನಿಕರು ಆಗ್ರಹಿಸಿದ್ದಾರೆ.