ಉಡುಪಿ, ಮೇ 17 (DaijiworldNews/SM): ನಗರದ ಪ್ರಮುಖ ರಸ್ತೆಯಾದ ಕಿನ್ನಿಮುಲ್ಕಿ-ತಾಲ್ಲೂಕು ಆಫೀಸ್ ರಸ್ತೆಯ ಜೋಡುಕಟ್ಟೆ ಬಳಿ ಸಾರ್ವಜನಿಕರಿಗೆ ಅಪಾಯ ಒಡ್ಡುವ ರೀತಿಯಲ್ಲಿ ಇದ್ದ ಸಿಗ್ನಲ್ ಲೈಟ್ ಕಂಬವನ್ನು ಇದೀಗ ತೆರವುಗೊಳಿಸಲಾಗಿದೆ.
ನಿನ್ನೆ ರಾತ್ರಿ ಸುರಿದ ಭೀಕರ ಗಾಳಿ ಮಳೆಗೆ ತುಕ್ಕು ಹಿಡಿದಿದ್ದ ಸಿಗ್ನಲ್ ಲೈಟ್ ಕಂಬದ ಒಂದು ಪಾರ್ಶ್ವವು ತುಂಡಾಗಿ ನೇತಾಡುತಿತ್ತು. ಈ ಕುರಿತು ದಾಯ್ಜಿವಲ್ಡ್ ಮಂಗಳವಾರ ಬೆಳಿಗ್ಗೆ ವರದಿಯನ್ನು ಪ್ರಕಟಿಸಿತ್ತು. ತಕ್ಷಣವೇ ಕಾರ್ಯಪ್ರವತ್ತರಾದ ಅಧಿಕಾರಿಗಳು ಅಪಾಯಕಾರಿ ಸ್ಥಿತಿಯಲ್ಲಿದ್ದ ಸಿಗ್ನಲ್ ಲೈಟ್ ಕಂಬವನ್ನು ಸ್ಥಳದಿಂದ ತೆರವುಗೊಳಿಸಿದ್ದಾರೆ.
ಉಡುಪಿ ನಗರದಲ್ಲಿ ಇಂತಹದೇ ಹಲವು ಸಿಗ್ನಲ್ ಲೈಟ್ ಕಂಬಗಳು ನಗರದ ವಿವಿಧ ಪ್ರಮುಖ ಸ್ಥಳಗಳಲ್ಲಿ ಇದ್ದು ಸರಿಯಾದ ನಿರ್ವಹಣೆ ಇಲ್ಲದೆ ತುಕ್ಕು ಹಿಡಿದು ನಿಂತಿವೆ. ಕೆಲವು ವರ್ಷಗಳ ಹಿಂದೆಯೇ ಇವುಗಳ ಸಿಗ್ನಲ್ ಲೈಟ್ ಗಳ ಕಾರ್ಯಾಚರಣೆಯನ್ನು ನಗರದಲ್ಲಿ ಸ್ಥಗಿತಗೊಳಿಸಿದ್ದರೂ ಕೂಡಾ ಸಿಗ್ನಲ್ ಲೈಟ್ ಕಂಬಗಳನ್ನು ತೆರವು ಮಾಡಿರಲಿಲ್ಲ. ಇವುಗಳು ಇದೀಗ ತುಕ್ಕು ಹಿಡಿದಿದ್ದು ರಸ್ತೆಯ ಬದಿಯಲ್ಲಿ, ಪಾದಾಚಾರಿ ಮಾರ್ಗಗಗಳಲ್ಲಿ ಸಂಚರಿಸುವಾಗ ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿವೆ. ಈ ಹಿಂದೆ ಕೂಡಾ ಕಲ್ಸಂಕ ಜಂಕ್ಷನ್ ಬಳಿ ಇರುವ ಸಿಗ್ನಲ್ ಲೈಟ್ ಕಂಬದ ಒಂದು ಪಾರ್ಶ್ವ ಮುರಿದು ಬಿದ್ದ ನಂತರ ಅದನ್ನು ತೆರವುಗೊಳಿಸಲಾಗಿತ್ತು. ನಗರದಲ್ಲಿ ನಿರುಪಯುಕ್ತ ಸ್ಥಿತಿಯಲ್ಲಿ ಇರುವ ಇನ್ನಿತರ ಇಂತಹ ಕಂಬಗಳನ್ನು ಕೂಡಾ ಸಂಬಂಧಪಟ್ಟ ಇಲಾಖೆಯವರು ಗಮನಹರಿಸಿ ತೆರವುಗೊಳಿಸಬೇಕಾದ ಅನಿವಾರ್ಯತೆ ಇದೆ.