ಉಡುಪಿ, ಮೇ 17 (DaijiworldNews/MS): ನಗರದ ಪ್ರಮುಖ ರಸ್ತೆಯಾದ ಕಿನ್ನಿಮುಲ್ಕಿ - ತಾಲ್ಲೂಕು ಆಫೀಸ್ ರಸ್ತೆಯ ಜೋಡುಕಟ್ಟೆ ಬಳಿ ಇರುವ ಸಿಗ್ನಲ್ ಲೈಟ್ ಕಂಬದ ಒಂದು ಪಾರ್ಶ್ವವು ತುಂಡಾಗಿ ನೇತಾಡುತಿದ್ದು ಸಾರ್ವಜನಿಕರಿಗೆ ಅಪಾಯಕಾರಿಯಾಗಿ ಪರಿಣಮಿಸಿದೆ.
ಉಡುಪಿ ನಗರಕ್ಕೆ ಪ್ರವೇಶ ಮಾಡುವ ಪ್ರಮುಖ ರಸ್ತೆ ಇದಾಗಿದ್ದು ಇಲ್ಲಿನ ಜೋಡುಕಟ್ಟೆ ಬಳಿ ಇರುವ ಸಿಗ್ನಲ್ ಲೈಟ್ ಕಳೆದ ಕೆಲವು ವರ್ಷಗಳಿಂದ ನಿರುಪಯುಕ್ತ ಸ್ಥಿತಿಯಲ್ಲಿದೆ. ನಿನ್ನೆ ರಾತ್ರಿ ಸುರಿದ ಭಾರಿ ಗಾಳಿ - ಮಳೆಗೆ ತುಕ್ಕು ಹಿಡಿದ ಕಂಬದ ಒಂದು ಪಾರ್ಶ್ವವು ಮುರಿದು ಬಿದ್ದು ನೇತಾಡುತ್ತಿದೆ.
ಇನ್ನು ಉಡುಪಿ ನಗರದ ಪ್ರಮುಖ ಭಾಗಗಳಲ್ಲಿ ಇಂತಹ ಹಲವಾರು ನಿರುಪಯುಕ್ತ ಸಿಗ್ನಲ್ ಲೈಟ್ ಕಂಬಗಳು ಇದ್ದು, ಕಳೆದ ಹಲವು ವರ್ಷಗಳಿಂದ ಉಡುಪಿ ನಗರದಲ್ಲಿ ಸಿಗ್ನಲ್ ಲೈಟ್ ಗಳ ಬಳಕೆಯನ್ಹು ಸ್ಥಗಿತಗೊಳಿಸಲಾಗಿದೆ. ಆದರೆ ಈ ಸಿಗ್ನಲ್ ಲೈಟ್ ಗಳನ್ನು ತೆರವುಗೊಳಿಸದೇ ಇರಿಸಲಾಗಿದ್ದು ಇವುಗಳು ಸಾರ್ವಜಮಿಕರಿಗೆ ಇದೀಗ ಅಪಾಯಕಾರಿಯಾಗಿ ಪರಿಣಮಿಸಿದೆ. ಈ ಹಿಂದೆ ಕೂಡಾ ನಗರದ ಕಲ್ಸಂಕ ಬಳಿ ಇರುವ ಸಿಗ್ನಲ್ ಲೈಟ್ ಕಂಬದಲ್ಲಿ ಕೂಡಾ ಇಂತಹದೇ ಘಟನೆ ನಡೆದಿದ್ದು ತದನಂತರ ಅಧಿಕಾರಿಗಳು ಅದನ್ನು ತೆರವುಗೊಳಿಸಿದ್ದರು.
ತುಕ್ಕು ಹಿಡಿದಿರುವ ಈ ಸಿಗ್ನಲ್ ಲೈಟ್ ಕಂಬಗಳನ್ನು ತಕ್ಷಣವೇ ತೆರವುಗೊಳಿಸಿ ಹೆಚ್ಚಿನ ಅಪಾಯವನ್ನು ತಪ್ಪಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.