ಉಡುಪಿ,ಮೇ 16 (DaijiworldNews/SM): ಚಲಿಸುತ್ತಿದ್ದ ಆಂಬ್ಯುಲೆನ್ಸ್ ನಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡ ಘಟನೆ ಇಲ್ಲಿನ ಕಲ್ಸಂಕ ಎಂಬಲ್ಲಿ ನಡೆದಿದ್ದು, ರೋಗಿಗಳಿಲ್ಲದ ಹಿನ್ನೆಲೆಯಲ್ಲಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಉಡುಪಿಯಿಂದ ಮಣಿಪಾಲ ಕಡೆಗೆ ಆ್ಯಂಬುಲೆನ್ಸ್ ಚಲಿಸುತ್ತಿತ್ತು. ಓಮ್ನಿ ಆ್ಯಂಬುಲೆನ್ಸ್ ನ ಡೈನಮೋ ಶಾರ್ಟ್ ಸರ್ಕೂಟ್ ನಿಂದಾಗಿ ಘಟನೆ ನಡೆದಿದೆ. ರೋಗಿಗಳು ಇಲ್ಲದ ಕಾರಣ ಭಾರಿ ದುರಂತವೊಂದು ತಪ್ಪಿದಂತಾಗಿದೆ.
ಸಾಮಾಜಿಕ ಕಾರ್ಯಕರ್ತ ಕೃಷ್ಣಮೂರ್ತಿ ಆಚಾರ್ಯ ಮತ್ತು ಸಾರ್ವಜನಿಕರು ಸಮಯ ಪ್ರಜ್ಞೆ ಮೆರೆದಿದ್ದು, ತಕ್ಷಣ ಅಗ್ನಿಶಾಮಕ ದಳದ ಸಿಬ್ಬಂದಿಗಳನ್ನು ಸ್ಥಳಕ್ಕೆ ಕರೆಸಿ ಬೆಂಕಿ ನಂದಿಸಲು ಯಶಸ್ವಿಯಾಗಿದ್ದಾರೆ. ಮತ್ತೊಂದೆಡೆ ಉಡುಪಿ ಸಂಚಾರಿ ಪೊಲೀಸರು ಟ್ರಾಫಿಕ್ ನಿಯಂತ್ರಿಸಲು ಸಹಕರಿಸಿದ್ದಾರೆ. ತಕ್ಷಣವೇ ಬೆಂಕಿ ನಂದಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿದ್ದಾರೆ.