ಉಡುಪಿ, ಮೇ 16 (DaijiworldNews/HR): ಪರಿಶಿಷ್ಟ ಪಂಗಡಕ್ಕೆ ಶೇಕಡ 3 ಮೀಸಲಾತಿ ಪ್ರಮಾಣ ಶೇಕಡಾ 7ಕ್ಕೆ ಹೆಚ್ಚಿಸಲು ಸರಕಾರವನ್ನು ಒತ್ತಾಯಿಸಿ, ಮೇ 20ರಂದು ಸುಮಾರು 300 ಮಂದಿ ಪರಿಶಿಷ್ಟ ಪಂಗಡದ ಸಮುದಾಯ ಬಾಂಧವರು ಮಣಿಪಾಲ ಟೈಗರ್ ಸರ್ಕಲ್ನಿಂದ ಮೆರವಣಿಗೆಯಲ್ಲಿ ಸಾಗಿ ಜಿಲ್ಲಾಧಿಕಾರಿಗಳ ಮುಖಾಂತರ ಸರ್ಕಾರಕ್ಕೆ ಮನವಿ ಸಲ್ಲಿಸಲ್ಲಿದ್ದು, ಈ ಸಂಬಂಧ ಸರ್ಕಾರ ಸಕಾರಾತ್ಮಕ ತಿರ್ಮಾನ ತೆಗೆದುಕೊಳ್ಳದಿದ್ದಲ್ಲಿ ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿಗಳ ಕಛೇರಿ ಎದುರು ಅಮರಣಾಂತ ಸತ್ಯಾಗ್ರಹ ಮಾಡುವುದಾಗಿ ಕೊರಗ ಸಂಘಟನೆಯ ಮುಖಂಡರಾದ ಗಣೇಶ್ ಎಚ್ಚರಿಕೆ ನೀಡಿದರು.
ಇಂದು ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, "ಆದರೆ 1958ರಲ್ಲಿ 1,92,096 ರಷ್ಟಿದ್ದ ಜನಸಂಖ್ಯೆ ನಿಗದಿಯಾಗಿದ ಮೀಸಲಾತಿ ಶೇಕಡ 3ರ ಪ್ರಮಾಣ ಇಂದು ಪರಿಶಿಷ್ಟ ಪಂಗಡದ ಜನಸಂಖ್ಯೆ 42,48, 987 ರಷ್ಟು ಹೆಚ್ಚಿದ್ದರೂ ಕೂಡ ಮಿಸಲಾತಿಯ ಪ್ರಮಾಣ ಶೇಕಡ 3 ರಷ್ಟೇ ಇದೆ. ಆದ್ದರಿಂದ ಜನಸಂಖ್ಯೆಗನುಗುಣವಾಗಿ ಮೀಸಲಾತಿ ಪ್ರಮಾಣ ಶೇಕಡಾ 7.5 ರಷ್ಟು ಹೆಚ್ಚಿಸ ಬೇಕೆಂದು ಆಗ್ರಹಿಸಿದರು.
ಮೀಸಲಾತಿ ಪ್ರಮಾಣವನ್ನು ಕನಿಷ್ಠ ಶೇಕಡಾ 7.5 ಕ್ಕೆ ಏರಿಸುವಂತೆ ಸರ್ಕಾರವನ್ನು ಒತ್ತಾಯಿಸುವಲ್ಲಿ ಈಗಾಗಲೇ ರಾಜಧಾನಿಯಲ್ಲಿ ಹೋರಾಟ ಸಕ್ರಿಯವಾಗಿದ್ದು ಉಡುಪಿ ಜಿಲ್ಲೆಯಲ್ಲಿಯೂ ಕೂಡ ಈ ಬಗ್ಗೆ ಹೋರಾಟ ನಡೆಸುವರೇ ಪರಿಶಿಷ್ಟ ಪಂಗಡೆ ಮೀಸಲಾತಿ ಹೆಚ್ಚಳ ಕ್ರಿಯಾ ಸಮಿತಿಯನ್ನು ರಚಿಸಲಾಗಿದೆ.
ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳಿಗೆ ಹಾಗೂ ನಿರುದ್ಯೋಗಿಗಳಿಗೆ ಹಾಲಿ ಉದ್ಯೋಗಿಗಳಿಗೆ ಪ್ರಾತಿನಿಧ್ಯತೆ ಸಂಬಂಧವಾಗಿ ಇದುವರೆಗೂ ಆದ ಅನ್ಯಾಯ ಮುಂದಿನ ದಿನಗಳಲ್ಲಿ ಆಗಬಾರದು. ರಾಜಧಾನಿಯಲ್ಲಿ ಮೀಸಲಾತಿ ಪರಿಷ್ಕರಣೆಗಾಗಿ ನಡೆಯುತ್ತಿರುವ ಹೋರಾಟಕ್ಕೆ ಎಲ್ಲಾ ತಾಲೂಕು. ಜಿಲ್ಲೆಗಳಿಂದ ಬೆಂಬಲ ನೀಡಬೇಕು.
ಜಿಲ್ಲಾ ವ್ಯಾಪ್ತಿಯ 7 ತಾಲೂಕು ಕೇಂದ್ರಗಳಲ್ಲಿ - ಏಕಕಾಲಕ್ಕೆ ಮಾನ್ಯ ತಹಶೀಲ್ದಾರರ ಮುಖಾಂತರ ಮಾನ್ಯ ಮುಖ್ಯ ಮಂತ್ರಿಗಳಿಗೆ ಜಿಲ್ಲೆಯ ಮರಾಠಿ , ಕೊರಗ ಹಾಗೂ ಮಲೆಕುಡಿಯ ಸಮುದಾಯದ ಬಾಂಧವರು ಸೇರಿ ಮನವಿಯನ್ನು ಸಲ್ಲಿಸಲಾಗಿದೆ.
ಮುಂದಿನ 5 ಜನಗಣತಿಯಲ್ಲಿ ಭಾರಿ ಪ್ರಮಾಣದಲ್ಲಿ ಹೆಚ್ಚಾಗಿ 2011 ರಲ್ಲಿ ಅದು 42,48,987 ಆಗಿರುತ್ತದೆ. ಅಂದರೆ ಪರಿಶಿಷ್ಟ ಪಂಗಡದವರ ಜನಸಂಖ್ಯೆ 1961 ರ ಜನಗಣತಿಗೆ ಹೋಲಿಸಿದಲ್ಲಿ 22.11 ರಷ್ಟು ಹೆಚ್ಚಾಗಿರುತ್ತದೆ, ಹಾಗಾಗಿ ಮೀಸಲಾತಿ ಪ್ರಮಾಣ ಹೆಚ್ಚಿಸಬೇಕು ಎಂದು ಅವರು ಆಗ್ರಹಿಸಿದರು.
ಅನಂತ್ ನಾಯಕ್, ಮರಾಠಿ ಸಂಘದ ಅಧ್ಯಕ್ಷರು, ಶ್ರೀಧರ್ ಗೌಡ, ಜಯರಾಮ ನಾಯಕ್, ಬೋಜ ನಾಯಕ್, ಗೌರಿ ಉಪಸ್ಥಿತರಿದ್ದರು.