ಉಡುಪಿ, ಮೇ 16 (DaijiworldNews/DB): ಧ್ವನಿವರ್ಧಕ ಬಳಕೆ ಕುರಿತಂತೆ ಸುಪ್ರೀಂ ಕೋರ್ಟ್ ಮಾರ್ಗದರ್ಶನ ಮಾಡಿದೆ. ಕೋರ್ಟ್ ನಿಯಮವನ್ನು ಎಲ್ಲರೂ ಪಾಲಿಸಬೇಕು ಎಂದು ಹಿಂದೂ ಸಮಾಜಕ್ಕೆ ಕರೆ ಕೊಡುತ್ತೇನೆ ಎಂದು ಪೇಜಾವರ ಮಠಾಧೀಶರಾದ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಯವರು ಹೇಳಿದ್ದಾರೆ.
ಉಡುಪಿಯಲ್ಲಿ ಸುದ್ದಿಗಾರರೊಂದಿಗೆ ಸೋಮವಾರ ಮಾತನಾಡಿದ ಅವರು, ವಿಶೇಷ ದಿನಗಳು, ವಿಶೇಷ ಆಚರಣೆಗಳ ಸಂದರ್ಭದಲ್ಲಿ ಸಂಬಂಧಿಸಿದ ಇಲಾಖೆಯಲ್ಲಿ ವಿಶೇಷ ಅನುಮತಿ ಪಡೆದು ಧ್ವನಿವರ್ಧಕ ಬಳಕೆ ಮಾಡೋಣ ಎಂದರು.
ಯಾವುದೋ ಕಾರಣಕ್ಕೆ ಯಾವುದೋ ಕಾಲದಲ್ಲಿ ಧರ್ಮ ಕೇಂದ್ರಗಳು ಮಸೀದಿಗಳಾಗಿ ಪರಿವರ್ತಿತವಾಗಿರುತ್ತದೆ. ಯಾವುದೋ ದೇವಾಲಯವನ್ನು ಖರೀದಿ ಮಾಡಿ ಮಸೀದಿಯಾಗಿ ಪರಿವರ್ತಿಸಿದ್ದರೆ ನಮ್ಮ ಆಕ್ಷೇಪ ಇಲ್ಲ. ಯಾವುದೇ ಪೂಜಾಸ್ಥಳ ಆಗಿದ್ದರೂ ಕೂಡ ಒಂದು ಸಮಾಜದವರು ಖರೀದಿಸಿ ಮಾರ್ಪಾಟು ಮಾಡಿದ್ದರೆ ಸಮಸ್ಯೆ ಇಲ್ಲ.
ಆಕ್ರಮಿಸಿಕೊಂಡು ಪರಿವರ್ತನೆ ಮಾಡಿದ್ದರೆ ಮರು ಪರಿವರ್ತನೆ ಆಗಬೇಕಾದದ್ದು ಅನಿವಾರ್ಯ. ಈಗ ಆಗುತ್ತಿರುವ ಇಂತಹ ಬೆಳವಣಿಗೆಯನ್ನು ನಾವು ಸ್ವಾಗತಿಸುತ್ತೇವೆ ಎಂದವರು ತಿಳಿಸಿದರು. ಈಗ ಇದೊಂದು ಕಾಲಘಟ್ಟ. ನ್ಯಾಯಾಲಯದ ತೀರ್ಪು ಎಲ್ಲರೂ ಪರಿಪಾಲಿಸಬೇಕು. ಹಿಂದೆ ಆಗಿ ಹೋದ ಬಗ್ಗೆ ಕೋರ್ಟ್ ತೀರ್ಮಾನ ಕೊಟ್ಟದ್ದಾದರೆ ಯಾರೂ ಇದನ್ನು ಹಿನ್ನಡೆ ಎಂದು ಭಾವಿಸಬಾರದು. ಹಿಂದೂಗಳ ಪೂಜಾ ಮಂದಿರವನ್ನು ಹಿಂದುಗಳಿಗೆ ಬಿಟ್ಟುಕೊಡಿ. ಮುಸಲ್ಮಾನರ ದರ್ಗಾ ಆಗಿದ್ದರು ಮುಸಲ್ಮಾನರಿಗೆ ಬಿಟ್ಟು ಕೊಡಬೇಕು. ಸುಪ್ರೀಂ ಕೋರ್ಟ್ ಮಾಡುವ ಮಾರ್ಗದರ್ಶನದಂತೆ ನಾವು ನಡೆಯುವುದು ಸೂಕ್ತ. ತಪ್ಪು ಆಗಿದ್ದರೆ ಅದು ತಪ್ಪೇ. ಯಾರು ಯಾವುದನ್ನು ಸಮರ್ಥನೆ ಮಾಡುವುದು ಸೂಕ್ತ ಅಲ್ಲ. ಸಂಘರ್ಷಕ್ಕೆ ಇಳಿಯದೆ ಸೌಹಾರ್ದದಿಂದ ಬಿಟ್ಟು ಕೊಡಬೇಕು. ಶಾಂತಿ, ನೆಮ್ಮದಿ ನೆಲೆಸಲು ಎಲ್ಲರೂ ಸಹಕರಿಸಬೇಕು ಎಂದವರು ಇದೇ ವೇಳೆ ಮನವಿ ಮಾಡಿದರು.