ಉಳ್ಳಾಲ, ಮೇ 16 (DaijiworldNews/DB): ಮಹಿಳೆಯೊಬ್ಬರ ಸಂಶಯಾಸ್ಪದ ಸಾವಿನ ಪ್ರಕರಣ ಸಂಬಂಧ ಆಕೆಯ ಪತಿಯನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ.
ಕೇರಳದ ಕೊಚ್ಚಿ ಜೋಸೆಫ್ ಅವರ ಪುತ್ರಿ ಶೈಮಾ (44) ಅವರು ಮೇ 11ರಂದು ಮೃತಪಟ್ಟಿದ್ದರು. ಈ ವೇಳೆ ಇದೊಂದು ಅನುಮಾನಾಸ್ಪದ ಸಾವು ಎಂಬುದಾಗಿ ಪೊಲೀಸರು ದಾಖಲಿಸಿಕೊಂಡಿದ್ದರು. ಬಳಿಕ ಆಸ್ಪತ್ರೆ ಮಹಜರು ಪರೀಕ್ಷಾ ವರದಿ ನೋಡಿದಾಗ ಈ ಪರೀಕ್ಷೆಯಲ್ಲಿ ತಲೆಗೆ ಬಲವಾದ ಗಾಯವಾಗಿರುವ ಕಾರಣ ಇದು ಕೊಲೆ ಪ್ರಕರಣ ಎಂಬುದು ಸಾಬೀತಾಗಿತ್ತು. ಈ ಹಿನ್ನೆಲೆಯಲ್ಲಿ ತತ್ಕ್ಷಣ ಆಕೆಯ ಪತಿಯನ್ನು ಪೊಲೀಸರು ವಿಚಾರಣೆ ನಡೆಸಿದಾಗ ಆತನೇ ಕೃತ್ಯ ಎಸಗಿರುವುದು ಗೊತ್ತಾಗಿದೆ. ಹೀಗಾಗಿ ಮೃತ ಮಹಿಳೆಯ ಪತಿ ಕುಂಪಲ ಚೇತನನಗರ ನಿವಾಸಿ ಜೋಸೆಫ್ ಫ್ರಾನ್ಸಿಸ್ (54) ಎಂಬಾತನನ್ನು ಬಂಧಿಸಲಾಗಿದೆ.
ಜೋಸೆಫ್ ಪೆಟ್ರೋಲ್ ಬಂಕ್ ನಿರ್ಮಾಣ ಗುತ್ತಿಗೆ ನಡೆಸುತ್ತಿದ್ದ. ಕೇರಳದಿಂದ ಐದು ದಿನಗಳ ಹಿಂದಷ್ಟೇ ಊರಿಗೆ ಆಗಮಿಸಿದ್ದ. ಕುಡಿತದ ವಿಚಾರದಲ್ಲಿ ದಂಪತಿ ನಡುವೆ ಗಲಾಟೆ ನಡೆದಿದ್ದು, ಈ ವೇಳೆ ಶೈಮಾಳಿಗೆ ಆತ ಹೊಡೆದಿದ್ದ. ತಲೆಗೆ ಬಲವಾದ ಬೆಟ್ಟು ಬಿದ್ದ ಕಾರಣ ಆಕೆ ಅಸುನೀಗಿದ್ದಾಳೆ. ಆದರೆ ಪೊಲೀಸರೆದುರು ಆಕೆ ವಿಷ ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಪಟ್ಟಿದ್ದಳು ಎಂದು ಸುಳ್ಳು ಹೇಳಿದ್ದಾನೆ. ಆಕೆಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಳು. ಪೊಲೀಸರು ಕೊಲೆ ಪ್ರಕರಣ ದಾಖಲಿಸಿ ಆರೋಪಿಯನ್ನು ಬಂಧಿಸಿದ್ದಾರೆ. ಇವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾರೆ.