ಉಡುಪಿ, ಮೇ 15 (DaijiworldNews/SM): ಮದರಸಾಗಳಲ್ಲಿ ರಾಷ್ಟ್ರಗೀತೆ ಹಾಡಬೇಕು ಎನ್ನುವುದು ಸ್ವಾಗತಾರ್ಹ. ಈ ಸವಾಲು ಕೆಲವು ವ್ಯಕ್ತಿಗಳಿಂದ ಬಂದಿದೆ. ರಾಷ್ಟ್ರಪ್ರೇಮ, ರಾಷ್ಟ್ರಗೀತೆ ಪ್ರೀತಿ ಮನದಾಳದಿಂದ ಬರಬೇಕು. ಸಮಾಜದಲ್ಲಿ ಒಡೆಕು ಮೂಡಿಸುವವರನ್ನು ಪಕ್ಕಕ್ಕಿಟ್ಟು, ಅವರಿಗೆ ಶಿಕ್ಷೆ ನೀಡಬೇಕು . ರಾಷ್ಟ್ರಗೀತೆ ಹಾಡಬೇಕೆಂಬ ಅಭಿಯಾನದ ಪ್ರಶ್ನೆ ಬರಲ್ಲ. ಯಾರೂ ಯಾರ ಮೇಲೆಯೂ ಹೇರೋಕೆ ಆಗಲ್ಲ. ಅಭಿಯಾನ ಮಾಡುತ್ತಿರುವವರಿಗೆ ರಾಷ್ಟ್ರಪ್ರೇಮದ ಗಂಭೀರತೆ ಇದೆಯೇ? ಸಿಂದಗಿಯಲ್ಲಿ ರಾಷ್ಟ್ರಧ್ವಜ ಹಾರಿಸಿದವರೆಲ್ಲ ನಮಗೆ ದೇಶಪ್ರೇಮದ ಪಾಠ ಮಾಡಲು ಹೊರಟಿದ್ದಾರೆ ಎಂದು , ರಾಜ್ಯ ವಕ್ಫ್ ಮಂಡಳಿ ಅಧ್ಯಕ್ಷ ಮೌಲಾನಾ ಎನ್.ಕೆ. ಮೊಹಮ್ಮದ್ ಶಫಿ, ಮುತಾಲಿಕ್ ರನ್ನು ಟೀಕಿಸಿದರು.
ಕೆಲವು ವ್ಯಕ್ತಿಗಳು ಹೇಳಿದ್ದಕ್ಕೆ ಯಾವ ಸರಕಾರ, ಯಾವ ಸಮುದಾಯವೂ ಮನ್ನಣೆ ಕೊಡುವುದಿಲ್ಲ. ಜನ್ಮ ಕೊಟ್ಟ ರಾಜ್ಯವನ್ನು ಪ್ರೀತಿಸಿ ಎಂದು ನಮ್ಮ ಧರ್ಮ ಹೇಳುತ್ತದೆ. ಇದರಲ್ಲಿ ಇಡೀ ಮುಸ್ಲಿಂ ಸಮುದಾಯ ಅಥವಾ ಇಡೀ ಹಿಂದೂ ಸಮಾಜ ಎಲ್ಲೂ ಭಾಗವಹಿಸಿಲ್ಲ. ಕಾನೂನು ಕೈಗೆತ್ತಿಕೊಂಡು ಧಮ್ಕಿ ಹಾಕುವುದು ಸರಿಯಲ್ಲ. ಕಾನೂನು ಇವರೇ ಕೈಗೆತ್ತಿಕೊಂಡರೆ, ಸರಕಾರ , ನ್ಯಾಯಲಯ ಕಾನೂನು ಇರುವುದು ಏತಕ್ಕೆ ಎಂದು ಶಫಿ ಪ್ರಶ್ನಿಸಿದರು.
ಈಗಾಗಲೇ ರಾಷ್ಟ್ರಗೀತೆ ಹಾಡಲಾಗುತ್ತಿದೆ. ವಕ್ಫ್ ಬೋರ್ಡ್ ಅಧೀನದಲ್ಲಿ 1990 ಮದ್ರಸಾಗಳಿವೆ. ಅಲ್ಲೆಲ್ಲಾ ರಾಷ್ಟ್ರಗೀತೆ ಹಾಡಲಾಗುತ್ತಿದೆ. ಆದರೆ ಸಾಮರಸ್ಯಕ್ಕೆ ಧಕ್ಕೆ ತರುವ ಉದ್ದೇಶ ಹೊಂದಿದವರು ಈ ಬಗ್ಗೆ ವಿವಾದ ಸೃಷ್ಟಿಸುತ್ತಿದ್ದಾರೆ.
ಸುಪ್ರೀಂಕೋರ್ಟ್ ಆದೇಶದಂತೆ ಅಜಾನ್ ವಿಷಯಕ್ಕೆ ಸಂಬಂಧಿಸಿ ರಾಜ್ಯ ಸರ್ಕಾರ ಮಾರ್ಗಸೂಚಿ ಜಾರಿ ಮಾಡಿದ್ದು, ಧ್ವನಿವರ್ಧಕಗಳ ಡಿಸೇಬಲ್ ಕಡಿಮೆ ಮಾಡಲಾಗಿದೆ. ಹಗಲು ಹೊತ್ತಿನಲ್ಲಿ ಅಜಾನ್ಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಬೆಳಗ್ಗಿನ ಜಾವ ಅಜಾನ್ ಹೇಗೆ ನಡೆಸುವುದು ಎಂಬ ಬಗ್ಗೆ ಚರ್ಚೆ ನಡೆಯುತ್ತಿದೆ. ಈ ವಿಷಯ ಶರಿಯತ್ಗೆ ಸಂಬಂಧಪಟ್ಟದ್ದಾಗಿರುವುದರಿಂದ ಸೋಮವಾರ ಮತ್ತು ಮಂಗಳವಾರ ಉಡುಪಿ, ದ.ಕ. ಜಿಲ್ಲೆಯ ಎಲ್ಲಾ ಉಲೆಮಾಗಳು ಕೂತು ಚರ್ಚೆ ನಡೆಸಿ ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದು .
ಭಾನುವಾರ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈಗಾಗಲೇ ವಕ್ಫ್ ಮಂಡಳಿ ರಾಜ್ಯ ಎಲ್ಲಾ ಮಸೀದಿಗಳಿಗೆ ಸುಪ್ರೀಂಕೋರ್ಟ್ ಆದೇಶ ಪ್ರಕಾರ ಮೈಕ್ ಶಬ್ದ ಯಾವ ಪ್ರದೇಶದಲ್ಲಿ ಎಷ್ಟು ಡಿಸೇಬಲ್ ಇರಬೇಕು ಎಂಬ ಬಗ್ಗೆ ಮಾಹಿತಿಯನ್ನು ಒಳಗೊಂಡ ಸುತ್ತೋಲೆ ಹೊರಡಿಸಿದೆ. ಕೋರ್ಟ್ ಆದೇಶ ಪಾಲಿಸುವುದು ಎಲ್ಲರ ಕರ್ತವ್ಯ ಎಂದರು.
ಬೆಂಗಳೂರಿನಲ್ಲಿ ಮಂಡಳಿ ವತಿಯಿಂದ 15 ಕೋಟಿ ರೂ. ವೆಚ್ಚದಲ್ಲಿ ಐಎಎಸ್ ಮತ್ತು ಐಪಿಎಸ್ ಟ್ರೈನಿಂಗ್ ಸೆಂಟರ್ ಫಾರಂಭವಾಗಲಿದ್ದು, ಜೂನ್ ಮೊದಲವಾರದಲ್ಲಿ ಶಿಲಾನ್ಯಾಸ ನಡೆಯಲಿದೆ. ವಕ್ಫ್ ಮಂಡಳಿ ಕೇಂದ್ರ ಕಚೇರಿ ದುರಸ್ತಿಗೆ ಸರ್ಕಾರ 2 ಕೋಟಿ ರೂ. ಅನುದಾನ ನೀಡಿದೆ. 10 ಜಿಲ್ಲೆಗಳಲ್ಲಿ 10 ಮಹಿಳಾ ಕಾಲೇಜು ಸ್ಥಾಪನೆಗೆ ಯೋಜನೆ ರೂಪಿಸಲಾಗಿದ್ದು, ಜಾಗ ಗುರುತಿಸಲಾಗಿದೆ. ವಕ್ಫ್ ಬೋರ್ಡ್ ಜಾಗ ಪ್ರಭಾವಿಗಳ ಪಾಲಾಗುತ್ತಿದೆ ಎಂಬ ಆರೋಪವಿದೆ. ಹೀಗಾಗಿ ರಾಜ್ಯ ಸರ್ಕಾರ ವಕ್ಫ್ ಆಸ್ತಿಗಳ ಡ್ರೋನ್ ಸರ್ವೆಗೆ 2.5 ಕೋಟಿ ರೂ. ಬಿಡುಗಡೆ ಮಾಡಿದೆ. ಈ ಜಾಗಳನ್ನು ಶೈಕ್ಷಣಿಕ ಉದ್ದೇಶಕ್ಕೆ ಬಳಸಿಕೊಳ್ಳಲು ಮಂಡಳಿ ತೀರ್ಮಾನ ಕೈಗೊಂಡಿದೆ ಎಂದರು.
ಶ್ರೀರಂಗಪಟ್ಟಣದ ಮಸೀದಿ ಅಧೀನದಲ್ಲಿ 45 ಎಕ್ರೆ ವಕ್ಫ್ ಜಾಗವಿದೆ. ಟಿಪ್ಪು ಸುಲ್ತಾನ್ ಅನೇಕ ಮಠಗಳಿಗೆ ದಾನ ದತ್ತಿ ನೀಡಿದಂತೆ ಮೈಸೂರು ಮಹಾರಾಜರು ಬಾಬಾ ಬುಡನ್ಗಿರಿ ದರ್ಗಾ ಹಾಗೂ ಸುತ್ತಲಿನ ಜಾಗವನ್ನು ವಕ್ಫ್ ನೀಡಿದ್ದಾರೆ. ಇವೆಲ್ಲಾ ಸೌಹಾರ್ದಕ್ಕೆ ನಿದರ್ಶನವಾಗಿದ್ದು, ಇತಿಹಾಸದ ಕಳಂಕಗಳ ಬಗ್ಗೆ ಚರ್ಚೆ ಮಾಡುವುದು ಅನಗತ್ಯ. ಮನಸ್ಸು ಕೆಡಿಸಿಕೊಂಡು ಹಿಂದೂ ಅಥವಾ ಮುಸ್ಲಿಮರಿಗೆ ಪ್ರಯೋಜನವಿಲ್ಲ. ಆದರೆ ಸರ್ಕಾರಕ್ಕೆ ಧಮ್ಕಿ ಹಾಕಿ ಸಾಮರಸ್ಯ ಕೆಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.