ಉಡುಪಿ, ಮೇ 15 (DaijiworldNews/HR): ಕಳೆದ 10-20 ವರ್ಷಗಳಲ್ಲಿ ಕರಾವಳಿಯಲ್ಲಿ ದ್ವೇ಼ಷದ ಬೀಜವನ್ನು ಬಿತ್ತಲಾಗಿದೆ. ಆದರೆ ಕರಾವಳಿ ಈ ದ್ವೇಷದ ಫಸಲನ್ನು ತೆಗೆಯಲು ಬಿಡುವುದಿಲ್ಲ. ಉಡುಪಿಯಿಂದಲೇ ದ್ವೇಷದ ಸಂದೇಶ ಹೊರಟಿತು ಇದೇ ಉಡುಪಿಯಿಂದ ನಾವು ಸಹಬಾಳ್ವೆಯ ಸಂದೇಶವನ್ನು ಪ್ರಚುರಪಡಿಸೋಣ ಎಂದು ಮಾನವ ಹಕ್ಕುಗಳ ಹೋರಾಟಗಾರರಾದ ಯೋಗೇಂದ್ರ ಯಾದವ್ ಹೇಳಿದರು.
ಉಡುಪಿಯಲ್ಲಿ ಸಹಬಾಳ್ವೇ ಸಂಘಟನೆಯ ವತಿಯಿಂದ ನಡೆದ ಸಾಮರಸ್ಯ ನಡಿಗೆ - ಸಹಬಾಳ್ವೆ ಸಮಾವೇಶದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡಿದರು. ಈ ದೇಶವನ್ನು ಒಡೆಯುವವರು ದೇಶದಲ್ಲಿ 2 ವರ್ಗದ ಜನರನ್ನು ಸೃಷ್ಟಿ ಮಾಡಲು ಬಯಸಿದ್ದಾರೆ. ಸರ್ವ ಧರ್ಮವನ್ನು ಸಮಾನ ರೀತಿಯಲ್ಲಿ ಕಾಣುವುದನ್ನು ಸ್ವಾತಂತ್ರ್ಯದ ಕಾಲದಿಂದಲೂ ಹೇಳಿಕೊಡಲಾಗಿದೆ. ಈ ದೇಶವನ್ನು ಒಗ್ಗೂಡಿಸುವವ ನಿಜವಾದ ದೇಶಪ್ರೇಮಿ ಎಂದರು.
ಕಾರ್ಯಕ್ರಮದ ಅಧ್ಯಕ್ಷ್ಯತೆಯನ್ನು ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್ ವಹಿಸಿದ್ದರು. ಈ ಸಂಧರ್ಭದಲ್ಲಿ ಮಾತನಾಡಿದ ಅವರು ಇಲ್ಲಿರುವುದು ಎರಡು ಧರ್ಮಗಳ ನಡುವಿನ ಸಮಸ್ಯೆ ಅಲ್ಲ, ಇಲ್ಲಿರುವುದು ಎರಡು ಮನಸ್ಥಿತಿಗಳ ನಡುವಿನ ಸಮಸ್ಯೆ. ಜಗಳ ಇರುವುದು ಭಾರತೀಯರಿಗೂ ಮತ್ತು ಭಾರತವನ್ನು ನಂಬದೇ ಇರುವವರ ನಡುವೆ. ಕಳೆದ 50 ವರ್ಷಗಳಿಂದ ಭಾರತೀಯತೆ ಎಂಬ ಆಚರಣೆಯನ್ನು ನಾವು ಮರೆತಿದ್ದೇವೆ. ಇದೊಂದು ಐತಿಹಾಸಿಕ ಸಮಾರಂಭ. ಉಡುಪಿಯನ್ನು ಈ ಜಗಳಗಳಲ್ಲಿ ಎಳೆದು ತಂದು ತಪ್ಪು ಮಾಡಿದ್ದಾರೆ, ಇಂದು ಉಡುಪಿ ಪ್ರತಿಕ್ರಿಯಿಸಿದೆ ಎಂದರು.
ಕಾರ್ಯಕ್ರಮದಲ್ಲಿ ವಿವಿಧ ಧರ್ಮದ ಮುಖಂಡರುಗಳು, ಧಾರ್ಮಿಕ ಮತ್ತು ಸಾಮಾಜಿಕ ಚಿಂತಕರುಗಳು ಉಪಸ್ಥಿತರಿದ್ದು ಸೌಹಾರ್ದತೆಯ ಸಂದೇಶವನ್ನು ನೀಡಿದರು.
ಸಮಾವೇಶಕ್ಕೂ ಮುನ್ನ ಉಡುಪಿಯ ಅಜ್ಜರಕಾಡುವಿನಿಂದ ಹೊರಟು ಉಡುಪಿ ನಗರದ ಬೀದಿಗಳಲ್ಲಿ ಭವ್ಯವಾದ ಮೆರವಣಿಗೆಯು ನಡೆಯಿತು. ಕರ್ನಾಟಕ ರಾಜ್ಯದ ವಿವಿಧ ಊರುಗಳಿಂದ ಬಂದ ಸಾವಿರಾರು ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.
ಸಮಾವೇಶಕ್ಕೂ ಮುನ್ನ ನಗರದ ಹುತಾತ್ಮರ ಸ್ಮಾರಕದ ಎದುರು ಹೋರಾಟಗಾರರಾದ ಕೆ.ನೀಲಾ, ನಜ್ಮಾ ಚಿಕ್ಕನರೇರಳೆ, ಮಾವಳ್ಳಿ ಶಂಕರ್, ಚಾಮರಸ ಮಾಲಿ ಪಾಟೀಲ್, ಎಚ್.ಆರ್.ಬಸವರಾಜಪ್ಪ, ಸಬಿಹಾ ಫಾತಿಮಾ ಏಳು ಬಣ್ಣದ ಬಾವುಟಗಳನ್ನು ಎತ್ತಿ ಹಿಡಿಯುವ ಮೂಲಕ ಸಾಮರಸ್ಯ ನಡಿಗೆಗೆ ಚಾಲನೆ ನೀಡಿದರು.
ಸಾಮಾಜಿಕ ಹೋರಾಟಗಾರ ಶಶಿಕಾಂತ್ ಸೆಂಥಿಲ್, ಬಾಲ್ಕಿ ಹಿರೇಮಠ ಸಂಸ್ಥಾನದ ಗುರುಬಸವ ಪಟ್ಟದೇವರು, ಖಾಜಿ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಪುತ್ತೂರು ಮಲಂಕರ ಕ್ಯಾಥೊಲಿಕ್ ಚರ್ಚ್ನ ಬಿಷಪ್ ವರ್ಗೀಸ್ ಮಾರ್ ಮಕರಿಕೋಸ್, ಮೈಸೂರು ಬಸವ ಜ್ಞಾನ ಮಂದಿರದ ಡಾ.ಮಾತೆ ಬಸವಾಂಜಲಿ, ಬಸವಧರ್ಮ ಪೀಠದ ಬಸವ ಪ್ರಕಾಶ ಸ್ವಾಮೀಜಿ, ಲೋಕರತ್ನ ಬುದ್ಧವಿಹಾರದ ಭಂತೆ ಮಾತೆ ಮೈತ್ರಿ, ಮೌಲಾನ ಇಪ್ಪಿಕಾರ್ ಅಹ್ಮದ್ ಕಾಸ್ಮಿ, ಡಾ.ಎಂ.ಎಸ್.ಎಂ.ಅಬ್ದುಲ್ ರಶೀದ್ ಸಖಾಫಿ ಝೈನಿ ಕಾಮಿಲ್, ಮೌಲಾನ ಯು.ಕೆ.ಅಬ್ದುಲ್ ಅಝೀಜ್ ದಾರಿಮಿ, ಫಾದರ್ ಚೇತನ್ ಲೋಬೋ, ಗ್ಯಾನಿ ಬಲರಾಜ್ ಸಿಂಗ್ ಉಪಸ್ಥಿತರಿದ್ದರು.