ಕಾಸರಗೋಡು, ಮೇ 14 (DaijiworldNews/DB): ನಗರದ ಜುವೆಲ್ಲರಿ ಶಾಪ್ನಿಂದ ಒಂದೂವರೆ ಪವನ್ ಚಿನ್ನಾಭರಣ ಸಹಿತ ಪರಾರಿಯಾಗಿದ್ದ ಆರೋಪಿಯನ್ನು ಗಂಟೆಗಳೊಳಗೆ ಪೊಲೀಸರು ಬಂಧಿಸಿದ ಘಟನೆ ನಡೆದಿದೆ.
ಇಡುಕ್ಕಿ ತೊಡುಪುಯದ ಜೋಬಿ ಜೋರ್ಜ್ ( 40) ಬಂಧಿತ ಆರೋಪಿ. ಶುಕ್ರವಾರ ಮಧ್ಯಾಹ್ನ ಘಟನೆ ನಡೆದಿದೆ. ನಗರದ ತಾಲೂಕು ಕಚೇರಿಯ ಮುಂಭಾಗದ ಟಿ. ಎಚ್. ದಿನೇಶ್ ಅವರ ಮಾಲಕತ್ವದ ಚಂದ್ರಗಿರಿ ಜುವೆಲ್ಲರಿಯಲ್ಲಿ ಘಟನೆ ನಡೆದಿದೆ.
ಚಿನ್ನಾಭರಣ ಖರೀದಿ ಸೋಗಿನಲ್ಲಿ ಬಂದ ಜೋಬಿ ಚಿನ್ನದ ಸರ ಸಹಿತ ಸ್ಥಳ ಖಾಲಿ ಮಾಡಿದ್ದನು. ಮಾಲಕ ಪರಿಶೀಲಿಸಿದಾಗ ಒಂದೂವರೆ ಪವನ್ ಚಿನ್ನಾಭರಣ ನಾಪತ್ತೆಯಾಗಿರುವುದು ಕಂಡು ಬಂದಿತ್ತು .
ಸಿಸಿ ಟಿವಿ ಗಮನಿಸಿದಾಗ ಚಿನ್ನದ ಸರ ನಾಪತ್ತೆಯಾಗಿರುವುದು ಗೊತ್ತಾಗಿದೆ. ಕೂಡಲೇ ನಗರ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದರು. ಜುವೆಲ್ಲರಿಗೆ ಆಗಮಿಸಿದ ಪೊಲೀಸರು ದೃಶ್ಯ ಪರಿಶೀಲಿಸಿ ತನಿಖೆ ಆರಂಭಿಸಿದ್ದರು. ಇತರ ಚಿನ್ನಾಭರಣ ಮಳಿಗೆಗೂ ಮಾಹಿತಿ ನೀಡಲಾಯಿತು .
ಈ ನಡುವೆ ಈತ ಚಿನ್ನದ ಸರವನ್ನು ಕಾ ಞಂಗಾಡ್ನ ಜುವೆಲ್ಲರಿ ಯೊಂದರಲ್ಲಿ 54,500 ರೂ . ಗಳಿಗೆ ಮಾರಾಟ ಮಾಡಿರುವುದು ಕಂಡು ಬಂದಿದ್ದು , ಕಾರ್ಯಾಚರಣೆ ನಡೆಸಿದ ಪೊಲೀಸರು ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.