ಮಂಗಳೂರು, ಮೇ 13 (DaijiworldNews/HR): ಪ್ರಸ್ತುತ ಕಾಸರಗೋಡು ಹಾಗೂ ಉಡುಪಿ ಜಿಲ್ಲೆಗಳಲ್ಲಿ ಡೆಂಗ್ಯೂ ಪ್ರಸರಣ ತೀವ್ರಗತಿಯಲ್ಲಿ ಹರಡುತ್ತಿದ್ದು, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಲ್ಲಲ್ಲಿ ಡೆಂಗ್ಯೂ ಪ್ರಕರಣಗಳು ಕಂಡು ಬರುತ್ತಿರುವುದರಿಂದ ಈಡಿಸ್ ಸೊಳ್ಳೆ ಉತ್ಪತ್ತಿ ತಾಣಗಳ ನಿಯಂತ್ರಣದ ಮೂಲಕ ಡೆಂಗ್ಯೂ ನಿಯಂತ್ರಿಸುವಲ್ಲಿ ಪ್ರತಿಯೊಬ್ಬರ ಸಹಕಾರ ಅತ್ಯಗತ್ಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹೇಳಿದ್ದಾರೆ.
ಈ ಕುರಿತು ಮಾಹಿತಿ ನೀಡಿರುವ ಅವರು, ಈಗಾಗಲೇ ಜಿಲ್ಲೆಯ ಕೆಲವೆಡೆ ಮಳೆಯಾಗುತ್ತಿದ್ದು, ಡೆಂಗ್ಯೂ ರೋಗವಾಹಕ ಉತ್ಪತ್ತಿಗೆ ಪೂರಕ ವಾತವರಣ ಸೃಷ್ಟಿಯಾಗುತ್ತಿರುವುದರಿಂದ ಈಡಿಸ್ ಸೊಳ್ಳೆ ಡೆಂಗ್ಯೂವಿನಿಂದ ಸಮಸ್ಯೆಯಾಗದಂತೆ ಪೂರ್ವಭಾವಿಯಾಗಿ ಸನ್ನದ್ದರಾಗಿ ಡೆಂಗ್ಯೂ ದಿನಾಚರಣೆಯನ್ನು ಪರಿಣಾಮಕಾರಿಯಾಗಿ ಆಚರಿಸುವ ಹಿನ್ನಲೆಯಲ್ಲಿ ಮೇ.16 ಬೆಳಿಗ್ಗೆ 10 ರಿಂದ 11ರ ವರೆಗೆ (ಒಂದು ಗಂಟೆ) ಎಲ್ಲಾ ಸಾರ್ವಜನಿಕರು ತಮ್ಮ ತಮ್ಮ ಮನೆಗಳು ಹಾಗೂ ಸುತ್ತ ಮುತ್ತಲ ಪ್ರದೇಶಗಳಲ್ಲಿ ಜಿಲ್ಲೆಯ ಎಲ್ಲಾ ಸರ್ಕಾರಿ ಕಚೇರಿಗಳು, ಖಾಸಗಿ ಸಂಸ್ಥೆಗಳ ಕಚೇರಿಗಳು, ಉದ್ಯಮಗಳು, ಬ್ಯಾಂಕ್ಗಳು, ಎಲ್ಲಾ ಶಿಕ್ಷಣ ಸಂಸ್ಥೆಗಳು, ಅಂಗನವಾಡಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ಸಿಬ್ಬಂದಿಗಳು ತಮ್ಮ ಕಚೇರಿಯ ಸುತ್ತ-ಮುತ್ತಲ ಪ್ರದೇಶಗಳ ಒಳಾಂಗಣಗಳಾದ ಹೂವಿನ ಕುಂಡ, ಅದರಡಿಯಲ್ಲಿರುವ ಪ್ಲೇಟ್, ಏರ್ ಕೂಲರ್ ಹಾಗೂ ಹೊರಾಂಗಣಗಳಾದ ಖಾಲಿ ಬಾಟಗಳು, ಸೀಯಾಳದ ಚಿಪ್ಪು, ಟಯರ್ಗಳು, ಅನುಪಯುಕ್ತ ಬಕೆಟ್, ಪಾತ್ರೆಗಳು, ಪ್ಲಾಸ್ಟಿಕ್ ಕಪ್ಗಳು, ತಾರಸಿ ಅಥವಾ ಕಿಟಕಿಯ ಸಜ್ಜಾಗಳಲ್ಲಿ, ನೀರಿನ ಸಂಗ್ರಹದ ಟ್ಯಾಂಕ್ಗಳಲ್ಲಿ ಸೊಳ್ಳೆ ಉತ್ಪತ್ತಿ ತಾಣಗಳನ್ನು ಗುರುತಿಸಿ ಸೊಳ್ಳೆ ಉತ್ಪತ್ತಿ ಕಂಡು ಬಂದಲ್ಲಿ ಅವುಗಳನ್ನು ನಾಶಪಡಿಸಬೇಕು, ಈ ಮೂಲಕ ಜಿಲ್ಲೆಯಲ್ಲಿ ಡೆಂಗ್ಯೂ, ಮಲೇರಿಯಾ ಮತ್ತು ಚಿಕನ್ಗೂನ್ಯಾ ಇತ್ಯಾದಿ ಸೊಳ್ಳೆಯ ಮೂಲಕ ಹರಡುದಂತೆ ಸಹಕರಿಸುವಂತೆ ಕೋರಲಾಗಿದೆ.
ಇನ್ನು ಸಾರ್ವಜನಿಕರು ಕನಿಷ್ಠ ವಾರಕ್ಕೊಮ್ಮೆಯಾದರೂ ತಮ್ಮ ಮನೆ/ಕಟ್ಟಡಗಳ ಸುತ್ತ-ಮುತ್ತ ಪರಿಶೀಲಿಸಿ ವಿವಿಧ ಪರಿಕರಗಳಲ್ಲಿ ನೀರು ನಿಂತಿದ್ದಲ್ಲಿ ಸೊಳ್ಳೆ ಉತ್ಪತ್ತಿಯಾಗದಂತೆ ಜಾಗೃತಿ ವಹಿಸುವುದು ಹಾಗೂ ಜ್ವರ ಪ್ರಕರಣಗಳು ಕಂಡು ಬಂದ ತಕ್ಷಣವೇ ಸ್ಥಳೀಯ ಆಸ್ಪತ್ರೆ ಅಥವಾ ವೈದ್ಯರನ್ನು ಸಂಪರ್ಕಿಸಿ ರಕ್ತ ಪರೀಕ್ಷೆ ಮಾಡಿಸಿಕೊಳುವಂತೆ ಜಿಲ್ಲಾಧಿಕಾರಿ ಡಾ. ರಾಜೇಂದ್ರ ಕೆ.ವಿ. ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.