ಕುಂದಾಪುರ, ಮಾ 19(DaijiworldNews/MS): ಮಾ.18 ರಿಂದ 27 ರವರೆಗೆ ನಡೆಯಲಿರುವ ಕೊಲ್ಲೂರಿನ ಮೂಕಾಂಬಿಕಾ ದೇವಸ್ಥಾನದ ಜಾತ್ರಾ ಉತ್ಸವಕ್ಕಾಗಿ ಶುಕ್ರವಾರ ಬೆಳಿಗ್ಗೆ ದೇವಸ್ಥಾನದ ಅರ್ಚಕ ಹಾಗೂ ತಂತ್ರಿ ಕೆ.ರಾಮಚಂದ್ರ ಅಡಿಗ ಅವೆ ನೇತೃತ್ವದಲ್ಲಿ ಗಣಪತಿ ಪ್ರಾರ್ಥನೆ, ನಾಂದಿ ಪುಣ್ಯಾಹ, ಅಂಕುರಾವಾಸ ಸಿಂಹ ಯಾಗವನ್ನು ನಡೆಸಿ, 10 ಗಂಟೆಯ ವೃಷಭ ಲಗ್ನ ಮಹೂರ್ತದಲ್ಲಿ ಧ್ವಜ ಮರಕ್ಕೆ ಧ್ವಜಾರೋಹಣ ನೆರವೇರಿಸುವ ಮೂಲಕ ಚಾಲನೆ ನೀಡಲಾಯಿತು.
ಜಾತ್ರಾ ಮಹೋತ್ಸವದ ಆರಂಭದ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಲಾಯಿತು. ಸಂಜೆ ಯಾಗಶಾಲಾ ಪ್ರವೇಶ, ರಜ್ಜು ಬಂಧನ, ಮುಹೂರ್ತಬಲಿ, ಭೇರಿತಾಡನ, ಕೌತುಕ ಬಂಧನದ ಬಳಿಕ ರಾತ್ರಿ ನಗರೋತ್ಸವ ಕಾರ್ಯಕ್ರಮಗಳನ್ನು ನಡೆಸಲಾಯಿತು..ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆರಾಡಿ ಚಂದ್ರಶೇಖರ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಎಸ್.ಪಿ.ಬಿ.ಮಹೇಶ್, ಸಹಾಯಕ ಕಾರ್ಯನಿರ್ವಹಣಾಧಿಕಾರಿ ಗೋವಿಂದ ನಾಯಕ್, ವ್ಯವಸ್ಥಾಪನಾ ಸಮಿತಿ ಸದಸ್ಯರಾದ ಡಾ.ಅತುಲಕುಮಾರ ಶೆಟ್ಟಿ, ಜಯಾನಂದ ಹೋಬಳಿದಾರ, ಗಣೇಶ್ ಕಿಣಿ ಬೆಳ್ವೆ, ಗೋಪಾಲಕೃಷ್ಣ ನಾಡ, ಕೆ.ಪಿ.ಶೇಖರ, ರತ್ನಾ ರಮೇಶ್ ಕುಂದರ್, ಸಂಧ್ಯಾ ರಮೇಶ್, ಅರ್ಚಕರಾದ ನಾರ್ಸಿ ಗೋವಿಂದ ಅಡಿಗ, ಕೆ. ಎನ್. ಸುಬ್ರಹ್ಮಣ್ಯ ಅಡಿಗ, ಸುರೇಶ ಭಟ್, ಗಜಾನನ ಜೋಯಿಸ್ ಮತ್ತಿತರರು ಇದ್ದರು.
ಜಾತ್ರಾ ಉತ್ಸವಗಳು :
ಮಾ.19 ರಂದು ರಾತ್ರಿ ಮಯೂರಾರೋಹಣೋತ್ಸವ, ಮಾ.20 ರಂದು ರಾತ್ರಿ ಡೋಲಾರೋಹಣೋತ್ಸವ, ಮಾ.21 ರಂದು ರಾತ್ರಿ ಪುಷ್ಪಮಂಟಪಾರೋಹಣೋತ್ಸವ, ಮಾ.22 ರಂದು ರಾತ್ರಿ ವೃಷಭಾರೋಹಣೋತ್ಸವ, ಮಾ.23 ರಂದು ರಾತ್ರಿ ಗಜಾರೋಹಣೋತ್ಸವ, ಮಾ.24 ರಂದು ಬೆಳಿಗ್ಗೆ ಶಿಖರ ಪ್ರತಿಷ್ಠೆ, ಸಂಜೆ ಹಿರೇರಂಗಪೂಜೆ, ರಾತ್ರಿ ಸಿಂಹಾರೋಹಣೋತ್ಸವ ಜರುಗಲಿದೆ. ಮಾ.25 ರಂದು ಬೆಳಿಗ್ಗೆ ಮುಹೂರ್ತ ಬಲಿ, ಕ್ಷಿಪ್ರಬಲಿ, ರಥ ಬಲಿಯ ನಂತರ ಮಧ್ಯಾಹ್ನ ಮಿಥುನ ಲಗ್ನ ಮುಹೂರ್ತದಲ್ಲಿ ರಥಾರೋಹಣ ನಡೆಯಲಿದೆ. ಸಂಜೆ ಶ್ರೀಮನ್ಮಹಾರಥೋತ್ಸವ ಜರುಗಲಿದೆ. ಮಾ.26 ರಂದು ರಾತ್ರಿ ಓಕುಳಿ, ಅವಭೃತಸ್ನಾನಾದಿ ಕಾರ್ಯಕ್ರಮಗಳು ನಡೆಯಲಿದೆ. ಮಾ27 ರಂದು ಬೆಳಿಗ್ಗೆ ಅಶ್ವಾರೋಹಣೋತ್ಸವದ ಬಳಿಕ ಮಹಾಪುರ್ಣಾಹುತಿ, ಧ್ವಜಾವರೋಹಣ, ಪೂರ್ಣ ಕುಂಭಾಭಿಷೇಕ ಹಾಗೂ ಅಂಕುರ ಪ್ರಸಾದ ವಿತರಣೆಯಾಗಲಿದೆ.
ಜಾತ್ರಾ ಅವಧಿಯ ಆರು ದಿನಗಳ ಕಾಲ ಪ್ರತಿದಿನ ಸಂಜೆ 5ಕ್ಕೆ ಮಾಂಗಲ್ಯೋತ್ಸವ (ಕಟ್ಟೆ ಉತ್ಸವ) ನಡೆಯಲಿದೆ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷರಾದ ಚಂದ್ರಶೇಖರ ಶೆಟ್ಟಿ ಕೆರಾಡಿ ತಿಳಿಸಿದ್ದಾರೆ.
ಶಾಸಕರ ಭೇಟಿ :
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವಾರ್ಷಿಕ ಜಾತ್ರಾ ಮಹೋತ್ಸವದ ಆರಂಭದ ದಿನವಾದ ಇಂದು ಮುಂಜಾನೆ ದೇವಸ್ಥಾನಕ್ಕೆ ಭೇಟಿ ನೀಡಿದ ಬೈಂದೂರು ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಅವರು ಶ್ರೀದೇವಿಯ ದರ್ಶನ ಪಡೆದು, ಅರ್ಚಕರ ಮೂಲಕ ಪೂಜೆ ಸಲ್ಲಿಸಿದರು.