Karavali
ಮಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಮೋಡರ್ನ್ ಭಿಕ್ಷುಕರ ಕಾಟ !
- Fri, Mar 18 2022 09:33:06 PM
-
ಲೋಹಿತ್ ಕುಮಾರ್, ಕಲ್ಮಂಜ
ಮಂಗಳೂರು, ಮಾ. 18(DaijiworldNews/SM): ರಸ್ತೆಯಲ್ಲಿ ಭಿಕ್ಷುಕರ ಕಾಟ ತಡೆಯಲಾರದೆ ಅಯ್ಯೋ ಪಾಪ ಎನಿಸಿ ಹತ್ತೋ, ಇಪ್ಪತ್ತೋ ನೀಡಿ ಮನೆಗೆ ವಾಪಸ್ಸಾಗಿ ಸಾಮಾಜಿಕ ಜಾಲತಾಣವನ್ನು ತೆರೆದೆವು ಎಂದಾದರೆ ಅಲ್ಲಿಯೂ ಕೂಡಾ ಭಿಕ್ಷುಕರ ಕಾಟ ತಲೆನೋವಾಗುತ್ತಿದೆ. ಸಾಮಾಜಿಕ ಜಾಲತಾಣ ಬಹಳಷ್ಟು ಸಂದರ್ಭದಲ್ಲಿ ಒಂದೊಳ್ಳೆಯ ವೇದಿಕೆಯಾಗಿ ಪರಿಣಮಿಸಿದರೆ, ಕೆಲವರ ಬದುಕಿನಲ್ಲಿ ಅದೇ ಸಾಮಾಜಿಕ ಜಾಲತಾಣಗಳು ಕತ್ತಲೆಯಾಗಿ ಪರಿಣಮಿಸಿದೆ! ಎಲ್ಲೋ ಒಂದು ವರದಿಗಳನ್ನು ಆಲಿಸುತ್ತಿದ್ದ ನಾವುಗಳು ಇಂದು ಸಾಮಾಜಿಕ ಜಾಲತಾಣದ ಮೋಸದಾಟಕ್ಕೆ ಬಲಿಯಾದವರಲ್ಲಿ ನಮ್ಮೊಡನೆ ಬೆರೆಯುತ್ತಿದ್ದ ನಮ್ಮವರನ್ನೂ ಕಾಣುತ್ತಿದ್ದೇವೆ.
ತುಂಬಾ ಅನಿವಾರ್ಯವಾಗಿ 250 ರೂ. ನೀಡಿ... !
ಬ್ಲ್ಯಾಕ್ ಮೇಲ್ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹಣ ಸಂಪಾದಿಸುವವರನ್ನು ಕಂಡಿದ್ದೇವೆ. ಆದರೆ, ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಮಂದಿ ಭಿಕ್ಷುಕರೂ ಬಂದಿರುವುದನ್ನು ಕೆಲವೊಂದಿಷ್ಟು ಮಂದಿ ಗಮನಿಸಿರಬಹುದು ಮತ್ತು ಕೆಲವರು ಅಯ್ಯೋ ಪಾಪವೆಂದು ಹಣ ನೀಡಿರಲೂಬಹುದು. ಹೌದು, ಕೆಲ ದಿನಗಳ ಹಿಂದೆ ನಡೆದಂತಹ ಘಟನೆಯನ್ನು ನನ್ನ ಸ್ನೇಹಿತನೊಬ್ಬ ಹಂಚಿಕೊಂಡಿದ್ದು ಹೀಗೆ, ಫೇಸ್ ಬುಕ್ ಮೂಲಕ ಯುವತಿಯೋರ್ವಳ ಫ್ರೆಂಡ್ ರಿಕ್ವೆಸ್ಟ್ ಬಂದಾಗ ಆತ ಸ್ವೀಕರಿಸಿದ್ದಾನೆ. ಆ ಬಳಿಕ ಅತ್ತ ಕಡೆಯಿಂದ ಹಾಯ್ ಎನ್ನುವ ಸಂದೇಶ ಬಹಳ ಜಾಗರೂಕತೆಯಿಂದ ರಿಪ್ಲೈ ಮಾಡಿದ ಆತ ಚಾಟಿಂಗ್ ಮುಂದುವರಿಸುತ್ತಾನೆ. ಆಗ ಅತ್ತ ಕಡೆಯಿಂದ ಕನ್ನಡದಲ್ಲೇ, "ಪ್ಲೀಸ್ ನನಗೊಂದು ಹೆಲ್ಪ್ ಮಾಡ್ತೀರಾ?" ಏನು ಅಂತ ಕೇಳಿದ ತಕ್ಷಣ "ನನಗೆ ತುಂಬಾ ಅರ್ಜೆಂಟ್ ಆಗಿ 250 ರೂ. ಬೇಕು. ಪ್ಲೀಸ್ ಕೊಡ್ತೀರಾ ಮುಂದಿನ ತಿಂಗಳು ವಾಪಸ್ ಕೊಡ್ತೇನೆ" ಎನ್ನುವ ಮಾತುಗಳು. ಅಷ್ಟೇ ಅಲ್ಲದೆ ಅತ್ತ ಕಡೆಯಿಂದ ಹುಡುಗಿಯ ವಾಯ್ಸ್ ಮೆಸೇಜ್ ಬೇರೆ! ಆ ವಾಯ್ಸ್ ಕೇಳುವಾಗ ಎಂತವರ ಮನಸ್ಸು ಕೂಡಾ ಕರಗಬಹುದೇನೋ ಅಂತಹ ನಟನೆ..! ಸರಿ ಎಂದವನೇ ಈತ ನಂಬರ್ ಕೇಳಿದ್ದ. ಇದೇ ನಿನ್ನದೇ ನಂಬರಾ ಅಂತ ಕೇಳಿದರೆ, "ಇಲ್ಲ ನನ್ನ ಸ್ನೇಹಿತನದ್ದು". ನೀವು ಹಣ ಕಳುಹಿಸಿದ ಬಳಿಕ ನನ್ನ ಸಂಖ್ಯೆ ನೀಡುತ್ತೇನೆ ಎನ್ನುವ ಮಾತು.. ಸರಿ ಎಂದವನೇ ಹಣ ನೀಡಲೇ ಇಲ್ಲ...! ಪದೇ ಪದೇ ಹಣ ನೀಡುವಂತೆ ಭಿಕ್ಷೆ ಬೇಡಿದರೂ ಹಣ ನೀಡದೇ ಇದ್ದಾಗ ಬ್ಲಾಕ್ ! ಮರುದಿನ ಅದೇ ರೀತಿಯಲ್ಲಿ ಮತ್ತೊಂದು ಹೆಸರಿನ ಖಾತೆಯಿಂದ ಇದೇ ರೀತಿಯ ಭಿಕ್ಷಾಟನೆ..! ಹಣ ನೀಡಲು ನೀಡಿದ್ದ ಸಂಖ್ಯೆಗಳು ಬೇರೆ ಬೇರೆಯೇ ಆದರೆ ಕೇಳಿದ್ದು ಮಾತ್ರ ಅದೇ ೨೫೦ ರೂ. !! ಕಳುಹಿಸಿದ ಆಡಿಯೋ ಸಂದೇಶದ ಧ್ವನಿ ಮಾತ್ರ ಭಾಗಶ: ಒಂದೇ ತೆರನಾಗಿತ್ತು..! ಅವರು ನೀಡಿದ ಸಂಖ್ಯೆಗೆ ಎಷ್ಟು ಬಾರಿ ಕರೆ ಮಾಡಿದರೂ ಸಹ ಯಾವುದೇ ಪ್ರತಿಕ್ರಿಯೆ ಇಲ್ಲ..! ಬಹುಶ: ಕಡಿಮೆ ಮೊತ್ತವಲ್ಲವೇ ಹಾಗಾಗಿ ನೀಡಬಹುದು ಎನ್ನುವ ನಂಬಿಕೆ.. ಹತ್ತು ಮಂದಿಯ ಜೊತೆ ೨೫೦ ರೂ. ಕೇಳಿದರೆ ಮೊತ್ತ ೨೫೦೦ ಆಗುವುದು. ಆ ಸಂಖ್ಯೆ ನೂರರ ಗಡಿ ತಲುಪಿದರೆ ಆ ಭಿಕ್ಷುಕರು ಕುಳಿತಲ್ಲೇ ಸಂಪಾದಿಸಬಹುದಾದ ಮೊತ್ತ ನಮ್ಮ ತಿಂಗಳ ಮೊತ್ತಕ್ಕೂ ಅಧಿಕವಾದುದು..! ಅದು ಹುಡುಗಿಯೋ ಅಥವಾ ಹುಡುಗನೋ, ಆ ಹಣ ಯಾವುದಕ್ಕಾಗಿ ಉಪಯೋಗವಾಗುತ್ತೇ ? ಯಾರ ಕೈ ಸೇರುತ್ತೇ ? ಇದ್ಯಾವ ಮಾಹಿತಿ ಇಲ್ಲ.. ಹಾಗಾಗಿ, ಕಡಿಮೆ ಮೊತ್ತ ಕೇಳಿದ್ದು ಅಲ್ಲವೇ ಎಂದು ದಯವಿಟ್ಟು ಇಂತಹ ಭಿಕ್ಷುಕರಿಗೆ ಹಣ ನೀಡಲು ಹೋಗಬೇಡಿ...
ಯುವಕರನ್ನು ಸುಲಭವಾಗಿ ಅಡ್ಡೆಗೆ ತಳ್ಳುವ ಖದೀಮರು..!ಸಾಮಾಜಿಕ ಜಾಲತಾಣದಲ್ಲಿ ಕೆಲವು ತಿಂಗಳುಗಳ ಹಿಂದೆ ನಾವು ಗಮನಿಸಿದಾಗ ಬಹಳಷ್ಟು ಪ್ರಕರಣಗಳಲ್ಲಿ ಬೆತ್ತಲೆ ವೀಡಿಯೋ ಕಾಲ್ ಸದ್ದು ಮಾಡಿತ್ತು.. ಫೇಸ್ ಬುಕ್ ಅಥವಾ ಇನ್ಸ್ಟಾಗ್ರಾಮ್ ಖಾತೆಯನ್ನು ತೆರೆದಾಗ ಯಾರದ್ದೋ ಒಂದು ಫ್ರೆಂಡ್ ರಿಕ್ವೆಸ್ಟ್ ಬಂದಿರುತ್ತದೆ. ನಮಗೇನೂ ಸಮಸ್ಯೆಯಾಗದು ಎಂದುಕೊಂಡು ನಾವು ಅವರ ರಿಕ್ವೆಸ್ಟ್ ಸ್ವೀಕರಿಸಿ, ಸ್ನೇಹ ಬಳಗವನ್ನು ಹೆಚ್ಚಿಸಿಕೊಳ್ಳುತ್ತೇವೆ. ಹಾಗೆ ಬಂದಂತಹ ರಿಕ್ವೆಸ್ಟ್ ಸ್ವೀಕರಿಸಿದ ತಕ್ಷಣ ಆಕಡೆಯಿಂದ "ಹಾಯ್" ಎನ್ನುವ ಸಂದೇಶ.. ಯುವಕರು ಆ ಖಾತೆಯ ಚೆಂದುಳ್ಳಿ ಚೆಲುವೆಯ ಚೆಲುವಿಗೆ ಮಾರು ಹೋಗಿ ಸ್ನೇಹ ಸಂಪಾದಿಸಲು ಮುಂದಾಗುತ್ತಾರೆ. ತಮಗೆ ಬಾರದ ಭಾಷೆಯಲ್ಲೂ ಮಾತುಕತೆ ಆರಂಭಿಸುವ ಯುವಕರನ್ನು ಬಲೆಗೆ ಹಾಕಿಕೊಳ್ಳಲು ಮುಂದಾಗುವ ಯುವಕರನ್ನು ಮೊದಲ ಬಾರಿ ವೀಡಿಯೋ ಕರೆಗೆ ಆಹ್ವಾನಿಸುತ್ತಾರೆ..! ಮೊದಲ ಕರೆ ಅಸ್ಪಷ್ಟವಾಗಿದ್ದು, ಕರೆ ಅಲ್ಲಿಗೆ ನಿಂತು ಹೋಗುತ್ತದೆ. ಅಷ್ಟರಲ್ಲಿ ಅತ್ತ ಕಡೆಯಿಂದ ಸಂದೇಶ "ನಿನ್ನ ಖಾಸಗಿ ಅಂಗಗಳನ್ನು ತೋರಿಸು, ನಾನು ನಿನಗೆ ತೋರಿಸುವೆ" ಎಂದು ಆಂಗ್ಲ ಮತ್ತು ಹಿಂದಿ ಭಾಷಾ ಮಿಶ್ರಿತ ಬರಹ.. ವಯಸ್ಸಿನ ಕಾರಣವೋ ಅಥವಾ ದುರ್ಬುದ್ಧಿಯೋ ತಿಳಿಯದು. ಅತ್ತ ಕಡೆಯಿಂದ ಬಂದ ಸಂದೇಶವನ್ನು ನಂಬಿದ ಯುವಕರು ಎರಡನೇ ಬಾರಿಗೆ ಬಂದಂತಹ ಕರೆಯನ್ನು ಸ್ವೀಕರಿಸಿ ಬೆತ್ತಲೆಯಾಗಿ ವೀಡಿಯೋ ಚಾಟ್ ಮೂಲಕ ಕ್ಷಣಿಕ ಸುಖಕ್ಕೆ ಮಾರು ಹೋಗುತ್ತಾರೆ..! ವೀಡಿಯೋ ಚಾಟ್ ಮುಗಿದ ತಕ್ಷಣ ಅತ್ತ ಕಡೆಯಿಂದ ಸ್ಕ್ರೀನ್ ರೆಕಾರ್ಡೆಡ್ ವೀಡಿಯೋ, ತಕ್ಷಣವೇ ಇಂತಿಷ್ಟು ಹಣವನ್ನು ನೀಡು, ಇಲ್ಲದಿದ್ದರೆ ವೀಡಿಯೋ ವೈರಲ್ ಮಾಡುವ ಬೆದರಿಕೆ...! ಮಾನಕ್ಕೆ ಹೆದರಿ ಬೆವೆತು ಹೋದ ಕೆಲವೊಂದಿಷ್ಟು ಯುವಕರು ಹಣವನ್ನು ನೀಡಿದರೆ ಮತ್ತೆ ಕೆಲವರು ಬ್ಲಾಕ್ ಮಾಡಿ ಸುಮ್ಮನಾದರೂ ಮರುದಿನ ಅವರ ಸ್ನೇಹಿತರ ವಾಟ್ಸಾಪ್ ಅಥವಾ ಮೆಸೆಂಜರ್ ಗಳಿಗೆ ಸ್ಕ್ರೀನ್ ರೆಕಾರ್ಡೆಡ್ ವೀಡಿಯೋ ವೈರಲ್ ಆಗಿರುತ್ತದೆ. ಮುಂದುವರಿದು ಈ ಪ್ರಕರಣಗಳು ಪೊಲೀಸ್ ಠಾಣೆಯ ಮೆಟ್ಟಿಲೇರಿ ಜಾಗೃತಿ ಮೂಡಲಾರಂಭಿಸಿದಾಗ ವೀಡಿಯೋ ಕರೆಗಳ ಹಾವಳಿ ಕಮ್ಮಿಯಾಗುತ್ತಾ ಬರುತ್ತಿದೆ...
ಯುವತಿಯರ ವಿಚಾರದಲ್ಲಿ ಬೇರೆಯೇ ಕಥೆ !
ಯುವತಿಯೊಬ್ಬಳ ಖಾತೆಗೆ ಬಂದ ಸಂದೇಶ ಅದು, ಯುವತಿಯದ್ದೇ ಆಗಿರುತ್ತದೆ. ಸ್ನೇಹ ಸಂಪಾದಿಸಿದ ಆಕೆ ಸಲುಗೆಯಿಂದ ಮಾತನಾಡಲು ಆರಂಭಿಸುತ್ತಾಳೆ. ಆ ಬಳಿಕ ಖಾಸಗಿ ಅಂಗಗಳನ್ನು ತೋರ್ಪಡಿಸಲು ಅತ್ತ ಕಡೆಯಿಂದ ಸಂದೇಶ ಬಂದಾಗ ಮುಜುಗರದಿಂದ ಕೆಲವೊಂದು ಯುವತಿಯರು ಹಿಂದೆ ಸರಿದರೆ, ಇನ್ನೊಂದಿಷ್ಟು ಮಂದಿ ಯುವತಿಯರು ಹುಡುಗಿಯೇ ಅಲ್ಲವೇ ಹಾಗಾಗಿ ಏನೂ ಆಗಲ್ಲ ಎಂಬ ಮೊಂಡುತನದಿಂದ ಖಾಸಗಿ ಅಂಗವನ್ನು ಶೇರ್ ಮಾಡಿಕೊಂಡರೆ ಮುಂದೆ ಸ್ಕ್ರೀನ್ ಶಾಟ್ ವೈರಲ್ ಮಾಡುವ ಬೆದರಿಕೆ ಒಂದೆಡೆಯಾದರೆ.. ಮತ್ತೊಂದಿಷ್ಟು ಮಂದಿ ಹುಡುಗಿಯರ ಫೊಟೋಗಳನ್ನು ಬೆತ್ತಲೆಗೊಳಿಸಿಯೋ ಅಥವಾ ಸೆಕ್ಸ್ ವೆಬ್ ಸೈಟ್ ಗಳ ಜೊತೆಯಲ್ಲಿ ಎಡಿಟ್ ಮಾಡಿ ಬ್ಲ್ಯಾಕ್ ಮೇಲ್ ಮಾಡಿ ಹಣ ಸಂಪಾದಿಸಲು ಮುಂದಾಗುತ್ತಿದ್ದಾರೆ ದುಷ್ಕರ್ಮಿಗಳು..! ಹುಡುಗಿಯೇ ಅಲ್ಲವೇ ಎಂಬ ಸಲುಗೆಯನ್ನು ನೀಡಿದರೆ ಅದೇ ಹುಡುಗಿ ಯುವತಿಯರ ಬಾಳಿನ ದೀಪವನ್ನೇ ಆರಿಸಲು ಮುಂದಾಗುತ್ತಿದ್ದಾಳೆ...
ಲೋನ್ ಆಪ್ ಎಂಬ ಬೆಂಕಿಯಲ್ಲಿ ಬೆಂದ ಯುವಕ-ಯುವತಿಯರು
ಜೀವನ ಅಂದರೆ ಹಾಗೆಯೇ ಕಷ್ಟ ಸುಖಗಳ ಸಮ್ಮಿಲನ. ಇಂದಿನ ಬೆಲೆಯೇರಿಕೆ ಮತ್ತು ಆಧುನಿಕ ಯುಗದಲ್ಲಿ ಬಡವ ಮತ್ತು ಮಧ್ಯಮ ವರ್ಗದವರಿಗೆ ನಿತ್ಯವೂ ಹಣದ ಚಿಂತೆ. ಕೆಲವೊಂದು ಸಂದರ್ಭದಲ್ಲಿ ಕ್ಲಿಷ್ಟಕರವಾದ ಸನ್ನಿವೇಶದಲ್ಲಿ ಹಣ ಬಹಳಷ್ಟು ಅನಿವಾರ್ಯವಾದ ಸಂದರ್ಭದಲ್ಲಿ ಸ್ನೇಹಿತರು ಅಥವಾ ಸಂಬಂಧಿಕರ ಜೊತೆಯಲ್ಲಿ ಸಾಲದ ಮೊರೆ ಹೋಗುತ್ತೇವೆ. ಆದರೆ, ನೀಡುವುದು ಸ್ವಲ್ಪ ವಿಳಂಬವಾದರೂ ಸ್ನೇಹ ಸಂಬಂಧವನ್ನು ಕಳೆದುಕೊಳ್ಳಬೇಕಾದ ದುಸ್ಥಿತಿ. ಬ್ಯಾಂಕ್ ನಿಂದ ಸಾಲ ಪಡೆಯೋಣವೆಂದರೆ ವಾರಗಟ್ಟಲೆ ನಡೆಯಬೇಕಾದ ಪರಿಸ್ಥಿತಿ. ಯಾವುದೋ ಫೈನಾನ್ಸ್ ಗಳಲ್ಲಿ ಪಡೆಯೋಣವೆಂದರೆ ಸಣ್ಣ ಮೊತ್ತಕ್ಕೆಲ್ಲಾ ಯಾಕೆ ಬೇಕು ಎನ್ನುವ ಮನಸ್ಥಿತಿ.. ಯುವ ಪೀಳಿಗೆಯ ಈ ವೈಫಲ್ಯಗಳನ್ನೇ ದುರುಪಯೋಗಪಡಿಸಿಕೊಳ್ಳಲು ಮುಂದಾದ ಕೆಲವೊಂದು ದುಷ್ಕರ್ಮಿಗಳು ನಕಲಿ ಲೋನ್ ಯಾಪ್ ಗಳನ್ನು ಸೃಷ್ಟಿಸಿ ಬಡವರ ಬದುಕನ್ನು ಕಿತ್ತುಕೊಳ್ಳಲು ಮುಂದಾದರು. ಅತ್ಯಂತ ಸುಲಭವಾಗಿ ಸಿಗುವ ಸಾಲದ ಆಕರ್ಷಣೆಗೆ ಒಳಗಾದ ಯುವ ಪೀಳಿಗೆ ತಮಗೆ ಬೇಕಾದಷ್ಟು ಹಣವನ್ನು ಲೋನ್ ಯಾಪ್ ಗಳ ಮೂಲಕ ಪಡೆಯುತ್ತಾರೆ. ಆದರೆ, ಸಾಲವನ್ನು ಮರುಪಾವತಿಸಿದ ಬಳಿಕವೂ ಕೂಡಾ ಲೋನ್ ಯಾಪ್ ಗಳ ಕಿರಿಕಿರಿ ತಪ್ಪದೇ ಅದೆಷ್ಟೋ ಮಂದಿ ತಮ್ಮ ಬದುಕನ್ನೇ ಆಹುತಿ ಮಾಡಿಕೊಳ್ಳುತ್ತಿದ್ದಾರೆ. ಹಣ ಪಾವತಿಸಿದ ಬಳಿಕವೂ ಕೂಡಾ ಅಧಿಕ ಹಣಕ್ಕಾಗಿ ಪೀಡಿಸುವ ಲೋನ್ ಯಾಪ್ ಗಳು ಅವರ ಸಂಪರ್ಕದಲ್ಲಿದ್ದ ಎಲ್ಲಾ ಸ್ನೇಹಿತರಿಗೂ ಕೂಡಾ ಅಸಭ್ಯ ಸಂದೇಶದ ಮೂಲಕ ಮಾನ ಹಾನಿಗೆ ಮುಂದಾಗುತ್ತಾರೆ. ಅಥವಾ ಫೊಟೋಗಳನ್ನು ನಕಲಿಗೊಳಿಸಿ ಜೀವದ ಜೊತೆಗೆ ಚೆಲ್ಲಾಟವಾಡುತ್ತಾರೆ. ಲೋನ್ ಯಾಪ್ ಗಳ ಈ ದುಷ್ಕೃತ್ಯಕ್ಕೆ ನಮ್ಮ ಕರಾವಳಿಯಲ್ಲೇ ಇಬ್ಬರು ಯುವಕರು ಬಲಿಯಾಗಿದ್ದನ್ನು ನಾವಿಲ್ಲಿ ನೆನಪಿಸಿಕೊಳ್ಳಬಹುದಾಗಿದೆ.. ಮಂಗಳೂರಿನ ಯುವತಿಯೊಬ್ಬಳದ್ದೂ ಕೂಡಾ ಇದೇ ವ್ಯಥೆಯಾಗಿತ್ತು. ಮನೆಯ ಸಂಕಷ್ಟಕ್ಕೆಂದು ಲೋನ್ ಯಾಪ್ ಮೂಲಕ ಸಾಲ ಪಡೆದ ಯುವತಿ ಸಕಾಲದಲ್ಲಿ ಅದನ್ನು ಮರು ಪಾವತಿಸಿದ್ದಳು. ಆದರೆ, ಮರುಕ್ಷಣದಿಂದಲೇ ಆಕೆಗೆ ಹೆಚ್ಚಿನ ಹಣಕ್ಕಾಗಿ ಬೇಡಿಕೆಯ ಒತ್ತಡ ಮತ್ತು ಬ್ಲ್ಯಾಕ್ ಮೇಲ್.. ಸ್ವಿಚ್ ಮಾಡಿಟ್ಟ ಬಳಿಕ ಆಕೆಯ ಸೋದರನಿಗೆ ಸಂದೇಶಗಳು. ಯುವತಿಯ ಮಾನ ಹರಾಜು ಹಾಕುವುದಾಗಿ ಬೆದರಿಕೆಯೊಡ್ಡುತ್ತಿದ್ದ ಆ ದುಷ್ಕರ್ಮಿಗಳು ಆಕೆಯ ಬಗೆಗೆ ತೀರಾ ಅಸಭ್ಯವಾದ ಸಂದೇಶಗಳನ್ನು ಹರಿಯತೊಡಗಿದರು. ಪೊಲೀಸ್ ಮೆಟ್ಟಿಲೇರಿರುವ ಆಕೆಗೆ ನ್ಯಾಯ ಮರೀಚಿಕೆಯಾದರೂ ಕೂಡಾ ಇಂತಹ ಘಟನೆಗಳು ಮರುಕಳಿಸದೇ ಇರಲಿ ಎಂಬ ಆಶಯ.
ಒಟ್ಟಿನಲ್ಲಿ, ಸಾಮಾಜಿಕ ಜಾಲತಾಣಗಳು ಎಷ್ಟು ಒಳ್ಳೆಯದೋ ಅದಕ್ಕಿಂತಲೂ ಕೆಟ್ಟಪರಿಣಾಮಗಳನ್ನೂ ಕೂಡಾ ನೀಡುತ್ತವೆ. ಅದೆಷ್ಟೋ ಮಂದಿ ಯುವಕ ಯುವತಿಯರ ಬಾಳಿನ ನಂದಾ ದೀಪವನ್ನೇ ಈ ಸಾಮಾಜಿಕ ಜಾಲತಾಣದ ಮೂಲಕ ದುಷ್ಕರ್ಮಿಗಳು ನಂದಿಸಿದ್ದಾರೆ. ಹಾಗಾಗಿ ದಯವಿಟ್ಟು ಯುವಕ ಯುವತಿಯರು ಜಾಗರೂಕರಾಗಿರಿ. ಯಾವುದೇ ವ್ಯಕ್ತಿ, ಸಂದೇಶಗಳನ್ನು ನಂಬುವ ಮುನ್ನ ನೂರು ಬಾರಿ ಯೋಚನೆ ಮಾಡಿ. ಒಳ್ಳೆಯವರಂತೆ ನಟಿಸಿ ನಿಮ್ಮಲ್ಲಿ ಸಲುಗೆ ಸಂಪಾದಿಸಿಕೊಂಡು ನಿಮ್ಮ ಬದುಕನ್ನೇ ನುಚ್ಚು ನೂರುವ ಮಾಡಿಕೊಳ್ಳುವ ಬದಲು, ಇರುವುದರಲ್ಲೇ ಸಂತುಷ್ಟಗೊಂಡು ನೆಮ್ಮದಿಯ ಜೀವನ ನಡೆಸಿರಿ.