ಬಂಟ್ವಾಳ, ಮಾ.18 (DaijiworldNews/SM): ಯುವಕಾಂಗ್ರೇಸ್ ಪಾಣೆಮಂಗಳೂರು ಬ್ಲಾಕ್ ವತಿಯಿಂದ ಯುವಕರ ನಡೆ ಸಾಮರಸ್ಯದ ಕಡೆ ಗ್ರಾಮ ಚಲೋದ ಕಾರ್ಯಕ್ರಮದ ಸಮಾರೋಪ ಸಮಾರಂಭ ಮಾ.19ರಂದು 3 ಗಂಟೆಗೆ ಬಿ.ಸಿ.ರೋಡು ಪೂಂಜಾ ಮೈದಾನದಲ್ಲಿ ನಡೆಯಲಿದ್ದು, ಈ ಕಾರ್ಯಕ್ರಮದಲ್ಲಿ ಮಾಜಿ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರು ಭಾಗವಹಿಸಲಿದ್ದಾರೆ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಅವರು ಹೇಳಿದರು.
ಅವರು ಬಿ.ಸಿ.ರೋಡಿನ ಪಾಣೆಮಂಗಳೂರು ಬ್ಲಾಕ್ ಕಾಂಗ್ರೇಸ್ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು. ಆರಂಭದಲ್ಲಿ ಯುವಕಾಂಗ್ರೇಸ್ ವತಿಯಿಂದ ಬಿ.ಸಿ.ರೋಡು ಬ್ರಹ್ಮಶ್ರೀ ಗುರುನಾರಾಯಣ ವೃತ್ತದಿಂದ ಕೈಕಂಬದ ಪೂಂಜ ಮೈದಾನದವರೆಗೆ ಪಾದಯಾತ್ರೆ ನಡೆಯಲಿದೆ. ಮತೀಯ ಭಾವನೆಗಳಿಂದ ಸಮಾಜದಲ್ಲಿ ಸಮಸ್ಯೆಗಳು ಉಂಟುಮಾಡುತ್ತಿರುವ ಹಿನ್ನೆಲೆಯಲ್ಲಿ ಗಾಂಧೀಜಿಯವರ ಅಹಿಂಸೆಯ ತತ್ವದ ದಡಿಯಲ್ಲಿ ಕಾಂಗ್ರೇಸ್ ಅಹಿಂಸಾತ್ಮಕ ಚಳುವಳಿಯ ಮೂಲಕ ಸಮಾಜದಲ್ಲಿ ಶಾಂತಿಗಾಗಿ ಕಾರ್ಯಕ್ರಮ ಆಯೋಜಿಸುತ್ತಿದೆ.
ಕೊರೊನಾ ವೈರಸ್ ಪ್ರಾರಂಭವಾದಾಗ ಕಿಟ್ ವಿತರಣೆ ಪ್ರಾಮಾಣಿಕವಾಗಿ ಮಾಡಿದ್ದೇವೆ. ಹಸಿವಿನಿಂದ ಯಾರು ಬಳಲಬಾರದು ಎಂಬ ದೃಷ್ಟಿಯಿಂದ ಅನ್ನ ನೀಡಿದ್ದೇವೆ. ಆ ಬಳಿಕ ಇಂದಿರಾಗಾಂಧಿ ಅವರ ಹೆಸರಿನಲ್ಲಿ ಕ್ಷೇಮ ನಿಧಿ ಯೋಜನೆ ಮಾಡಿದ್ದೇವೆ. 58 ಬೂತ್ ಗಳಲ್ಲಿ ಕಾಂಗ್ರೇಸ್ ಪಕ್ಷ ಕಲ್ಪವೃಕ್ಷ, ಕಾಂಗ್ರೇಸ್ ನಡೆ ಗ್ರಾಮದ ಕಡೆ ಕಾರ್ಯಕ್ರಮ, ಹೀಗೆ ಬಡವರ ಸಬಲೀಕರಣ ಕಾರ್ಯಕ್ರಮವನ್ನು ಕಾಂಗ್ರೇಸ್ ಪಕ್ಷ ಮಾತ್ರ ನಿರಂತರವಾಗಿ ಮಾಡುತ್ತಾ ಬಂದಿದೆ ಎಂದರು.