ಉಡುಪಿ, ಮಾ 18 (DaijiworldNews/HR): ಬನ್ನಂಜೆಯಲ್ಲಿ ಅತ್ಯಾಧುನಿಕ ವ್ಯವಸ್ಥೆಯುಳ್ಳ ಸುಸಜ್ಜಿತ ಕೆಎಸ್ಸಾರ್ಟಿಸಿ ಬಸ್ ತಂಗುದಾಣದ ಉದ್ಘಾಟನೆಗೆ ಇಡೀ ಉಡುಪಿಯ ಜನತೆ ಕಾತರದಿಂದ ಎದುರು ನೋಡುತ್ತಿದೆ. ಪ್ರಸ್ತುತ ಹಳೆಯ ಕೆಎಸ್ಸಾರ್ಟಿಸಿ ಬಸ್ ತಂಗುದಾಣ ಬಹಳ ಹಳೆಯದಾಗಿದ್ದು, ಒಂದು ರೀತಿಯಲ್ಲಿ ಕುಡುಕರ, ನಿರ್ಗತಿಕರ, ಭಿಕ್ಷುಕರ, ಕಾನೂನು-ಬಾಹಿರ ಚಟುವಟಿಕೆಗಳಿಗೆ ಆಶ್ರಯ ತಾಣವಾದಂತೆ ಕಾಣುತ್ತಿದೆ. ಅಲ್ಲದೆ ಸ್ವಚ್ಛತೆ ಇಲ್ಲದೆ ಗಬ್ಬು ನಾರುತ್ತದೆ.
ಅಷ್ಟೇ ಅಲ್ಲದೆ ಕೆಎಸ್ಸಾರ್ಟಿಸಿ ಬಸ್ ತಂಗುದಾಣದಲ್ಲಿ ಕೇವಲ ಸರಕಾರಿ ಬಸ್ಸು ಮಾತ್ರ ಅಲ್ಲದೆ ಖಾಸಗಿ ಬಸ್ಸುಗಳು ನಿಲ್ಲುವುದರಿದರಿಂದ ಬಸ್ ಸುಗಮವಾಗಿ ತಿರುವು ಪಡೆದುಕೊಳ್ಳಲು ಇಕ್ಕಟ್ಟಿನ ಪರಿಸ್ಥಿತಿ ಇದೆ. ಹಾಗಾಗಿ ಉಡುಪಿಗೆ ಇದ್ದ ಸುಸಜ್ಜಿತ ಕೆಎಸ್ಸಾರ್ಟಿಸಿ ಬಸ್ ತಂಗುದಾಣದ ಕೊರತೆ ಈಗ ನೀಗಿದಂತಾಗಿದೆ.
ಬಹಳಷ್ಟು ಕಾತರದಿಂದ ಎದುರು ನೋಡುತ್ತಿರುವ ಬನ್ನಂಜೆ ಬಳಿ ಇರುವ ತಂಗುದಾಣದ ಕಾಮಗಾರಿ ಪೂರ್ಣವಾಗಿದ್ದು ಉದ್ಘಾಟನೆಗೆ ಎದುರು ನೋಡುತ್ತಿದೆ.
ಶ್ರೀ ಕೃಷ್ಣಾಪುರ ಪರ್ಯಾಯಕ್ಕೆ ಸಿ ಎಂ ಉಡುಪಿಗೆ ಬರುವ ಲೆಕ್ಕಾಚಾರವಿತ್ತಾದರೂ ಕೋವಿಡ್ ನಿಯಮಗಳಿಗೆ ಹಿಂಜರಿದು ಮುಂದೆ ಅದನ್ನು ಕೈಬಿಡಲಾಗಿತ್ತು, ಎಂದು ಕೆಲವು ಮೂಲಗಳು ತಿಳಿಸಿವೆ.
ಲೋಕೋಪಯೋಗಿ ಇಲಾಖೆಯ 2.5 ಎಕರೆ ಜಾಗದಲ್ಲಿ ನಿರ್ಮಾಣಗೊಂಡ ಈ ಬಸ್ ತಂಗುದಾಣ ಕಟ್ಟಡದಲ್ಲಿ ನಾಲ್ಕು ಅಂತಸ್ತುಗಳಿದ್ದು, ಕೆಳ ಅಂತಸ್ತಿನಲ್ಲಿ ವಾಹನ ಪಾರ್ಕಿಂಗ್ ಮಾಡಲು ವ್ಯವಸ್ಥೆ ಇದೆ . ಇಲ್ಲಿ ಸುಮಾರು 64 ಕಾರುಗಳು ಸಹಿತ ಬೈಕ್ಗಳನ್ನು ಪಾರ್ಕಿಂಗ್ ಮಾಡಬಹುದಾಗಿದೆ. ಮೇಲಿನ ಅಂತಸ್ತಿನಲ್ಲಿ ಏಕಕಾಲದಲ್ಲಿ 18 ಬಸ್ಸುಗಳು ಬಂದು ಹೋಗಲು ವ್ಯವಸ್ಥೆ ಕಲ್ಪಿಸಲಾಗಿದೆ. 100 ರಷ್ಟು ಬಸ್ಸು ನಿಲ್ಲಿಸುವಷ್ಟು ಸ್ಥಳಾವಕಾಶ ಇಲ್ಲಿದೆ. ಇಷ್ಟೆ ಅಲ್ಲದೆ ಎರಡು ಎಸ್ಕಲೇಟರ್ ಹಾಗೂ ಲಿಫ್ಟ್ ವ್ಯವಸ್ಥೆ ಕೂಡ ಇದೆ.
ಉಳಿದ ಮಹಡಿಗಳಲ್ಲಿ ಕಚೇರಿ, ಸಹಿತ ವ್ಯಾಪಾರದ ಉದ್ದೇಶಕ್ಕೆ ಬಳಕೆಯಾಗಲಿದೆ ಎಂದು ಮೂಲಗಳು ತಿಳಿಸಿವೆ. ೨೦೧೮ ರಂದು ಕಾಮಗಾರಿ ಆರಂಭವಾಗಿತ್ತಾದರೂ ಕೋವಿಡ್ ಮತ್ತಿತರ ಕಾರಣದಿಂದ ಕಾಮಗಾರಿ ಆಮೆಗತಿಯಲ್ಲಿ ಸಾಗಿದರೂ ಈಗ ಉದ್ಘಾಟನೆ ಎದುರು ನೋಡುತ್ತಿದೆ. ಸದ್ಯ 271 ಬಸ್ಸುಗಳು ಉಡುಪಿ ನಿಲ್ದಾಣದಿಂದ ವಿವಿಧೆಡೆಗಳಿಗೆ ಸಂಚರಿಸುತ್ತಿದೆ.
ಸುಮಾರು 29.95 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿದ ಈ ತಂಗುದಾಣ, ಇದರ ವಿಶಾಲತೆಯನ್ನು ನೋಡುವಾಗ ಮಂಗಳೂರಿನ ಸರಕಾರಿ ಬಸ್ ನಿಲ್ದಾಣ ಬಿಟ್ಟರೆ ಕರಾವಳಿ ಜಿಲ್ಲೆಯ ಅತ್ಯಂತ ದೊಡ್ಡ ಬಸ್ ಇದಾಗಿದೆ.
ಇದು ಜಿಲ್ಲೆಯ ಜನತೆಯ ಬಹು ಬೇಡಿಕೆಯದಾಗಿದ್ದು, ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಇನ್ನು ಸಾರ್ವಜನಿಕರ ಉಪಯೋಗಕ್ಕೆ ಬಾರದಂತೆ ಉದ್ಘಾಟನೆ ಮಾಡದೇ ಹಾಗೆ ಬಿಟ್ಟಿರುವುದನ್ನು ಸಾರ್ವಜನಿಕರು ಇಲಾಖೆಯನ್ನ ಪ್ರಶ್ನಿಸುತ್ತಿದ್ದಾರೆ.