ಮಂಗಳೂರು, ಮಾ 18 (DaijiworldNews/DB): ನಗರ ಪೊಲೀಸ್ ಇಲಾಖೆಯಲ್ಲಿನ ಅಪರಾಧ ಪತ್ತೆಯ ಕರ್ತವ್ಯಕ್ಕೆ ಹೊಸ ನೇಮಕವಾಗಿದೆ. ತರಬೇತಿ ಪೂರ್ಣಗೊಳಿಸಿದ 'ಬಬ್ಲಿ' ಕರ್ತವ್ಯಕ್ಕೆ ನೇಮಕಗೊಂಡ ಹೊಸ ಶ್ವಾನ.
ಮಂಗಳೂರು ಕಮೀಷನರೇಟ್ ಶ್ವಾನದಳದ ವಿಭಾಗದಲ್ಲಿ ಈಗಾಗಲೇ ಮೂರು ಶ್ವಾನಗಳಿದ್ದು, ಬಬ್ಲಿ ಸೇರ್ಪಡೆಯಿಂದಾಗಿ ಶ್ವಾನಗಳ ಸಂಖ್ಯೆ 4ಕ್ಕೆ ಏರಿಕೆಯಾಗಿದೆ. 'ಬಬ್ಲಿ' ಶ್ವಾನವು ಸುಮಾರು 1 ವರ್ಷ ವಯಸ್ಸಿನ ಶ್ವಾನವಾಗಿದ್ದು, ಬೆಂಗಳೂರು ಸಿಎಆರ್ ಅಡುಗೋಡಿ ಶ್ವಾನದಳ ತರಬೇತಿ ಕೇಂದ್ರದಲ್ಲಿ ಅಪರಾಧ ಪತ್ತೆ ತರಬೇತಿಯನ್ನು ಪೂರ್ಣಗೊಳಿಸಿದೆ. ಮಂಗಳೂರು ನಗರದಲ್ಲಿ ಸ್ಫೋಟಕ ಪತ್ತೆ ಕಾರ್ಯಕ್ಕೆ ಇದನ್ನು ನಿಯೋಜನೆ ಮಾಡಲಾಗಿದೆ. ಕುಶಾಲಪ್ಪ ಪೂಜಾರಿ ಮತ್ತು ರವಿ ಗೌಡ ಮಂಗಳೂರಿನಲ್ಲಿ ಇದರ ಹ್ಯಾಂಡ್ಲರ್ ಆಗಿ ಕಾರ್ಯ ನಿರ್ವಹಿಸಲಿದ್ದಾರೆ.
ಇನ್ನೆರಡು ಶ್ವಾನಗಳನ್ನು ಅಪರಾಧ ಹಾಗೂ ಮಾದಕ ವಸ್ತುಗಳ ಪತ್ತೆಗೆ ನಿಯೋಜನೆ ಮಾಡಲಾಗಿದೆ. ಮಂಗಳೂರಿನಲ್ಲಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವುದರಿಂದ ಶ್ವಾನದಳಕ್ಕೆ ಹೆಚ್ಚಿನ ಕೆಲಸಗಳಿರುತ್ತವೆ.
ಕಳೆದ ವರ್ಷ 'ರಾಣಿ' ಎಂಬ ಶ್ವಾನ ಸೇರ್ಪಡೆಗೊಂಡಿತ್ತು. ಇದು ಸಹ ಬೆಂಗಳೂರು ಶ್ವಾನದಳ ತರಬೇತಿ ಕೇಂದ್ರದಲ್ಲಿ ಸ್ಫೋಟಕ ಪತ್ತೆ ತರಬೇತಿ ಪಡೆದು ಮಂಗಳೂರು ನಗರಕ್ಕೆ ಕರ್ತವ್ಯ ನಿಯೋಜನೆಗೊಂಡಿತ್ತು. ಮನೋಜ್ ಶೆಟ್ಟಿ ಮತ್ತು ನಾಗೇಂದ್ರ ಇದರ ಹ್ಯಾಂಡ್ಲರ್ ಆಗಿರುತ್ತಾರೆ.
ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕೇಂದ್ರ ಕೈಗಾರಿಕಾ ಭದ್ರತಾ ಪಡೆಯ ಶ್ವಾನದಳದಲ್ಲಿ ಕಾರ್ಯ ನಿರ್ವಹಣೆ ಮಾಡುತ್ತಿದ್ದ 'ಲೀನಾ' ಎಂಬ ಶ್ವಾನ 2021ರ ನವೆಂಬರ್ನಲ್ಲಿ ಮೃತಪಟ್ಟಿತ್ತು.
ವಿಮಾನ ನಿಲ್ದಾಣದಲ್ಲಿ ಆದಿತ್ಯ ರಾವ್ ಬಾಂಬ್ ಇಟ್ಟಾಗ ಇದೇ ಲೀನಾ ಶ್ವಾನ ಅದನ್ನು ಪತ್ತೆ ಹಚ್ಚಿತ್ತು. ಬಳಿಕ ಅನಾರೋಗ್ಯಕ್ಕೆ ತುತ್ತಾಗಿದ್ದ ಲೀನಾಗೆ ಚಿಕಿತ್ಸೆ ನೀಡಲಾಗಿತ್ತಾದರೂ ಚಿಕಿತ್ಸೆ ಫಲಿಸದೆ ಮೃತಪಟ್ಟಿತ್ತು.