ಉಳ್ಳಾಲ, ಮಾ 18 (DaijiworldNews/MS): ಕೆಂಪು ಕಲ್ಲಿನ ಕೋರೆಯಿಂದ ನಮಗೆ ತರಗತಿ ಕೇಳಲು ಆಗುತ್ತಿಲ್ಲ, ಧೂಳಿನಿಂದ ಆರೋಗ್ಯ ಸಮಸ್ಯೆಯಾಗುತ್ತಿದೆ. ಈ ಬಗ್ಗೆ ದ.ಕ ಜಿಲ್ಲಾಧಿಕಾರಿ, ಶಹಶೀಲ್ದಾರ್ ಸೇರಿ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಲ್ಲಿನ ಕೋರೆಯ ವಿರುದ್ಧ ಮಂಗಳೂರು ನಗರ ಹೊರವಲಯದ ಇನೋಳಿಯಲ್ಲಿ ಬ್ಯಾರೀಸ್ ಇನ್ಸ್ಟಿಟ್ಯೂಟ್ನ ವಿದ್ಯಾರ್ಥಿ ಹಾಗೂ ಉಪನ್ಯಾಸಕರಿಂದ ಪ್ರತಿಭಟನೆ ನಡೆಯಿತು.
ಇಂದು ಕಾಲೇಜಿನಲ್ಲಿ ಪರೀಕ್ಷೆಯ ದಿನವಾದರೂ ಪರೀಕ್ಷೆ ಆರಂಭವಾಗುವ ಮೊದಲು ಬೆಳಗ್ಗೆ ಕಾಲೇಜಿನ ಗೇಟ್ ಬಳಿಯಿಂದ ಕೋರೆಯ ಬಳಿಗೆ ವಿದ್ಯಾರ್ಥಿಗಳು ಜಾಥಾ ನಡೆಸಲು ತಯಾರಿ ನಡೆಸುತ್ತಿರುವ ವೇಳೆ ಪ್ರತಿಭಟನಾ ಜಾಥಾಕ್ಕೆ ಕೋರೆ ಮಾಲೀಕರು ಹಾಗೂ ಕಾರ್ಮಿಕರು ಅಡ್ಡಿಪಡಿಸಿದರು. ಈ ವೇಳೆ ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಯಿತು. ಆಗ ಮಧ್ಯಪ್ರವೇಶಿಸಿದ ಪೊಲೀಸರು ಪರಿಸ್ಥಿತಿ ನಿಯಂತ್ರಿಸಿದರು. ಕೊನೆಗೆ ಕೋರೆ ಮಾಲೀಕರು ಹಾಗೂ ಕಾಲೇಜು ಆಡಳಿತ ಮಂದಿಯೊಂದಿಗೆ ಸಂಧಾನ ಸಭೆ ನಡೆಸುವ ಬಗ್ಗೆ ಮಾತುಕತೆ ನಡೆದಿದೆ.
ಕೋರೆಯ ವಿರುದ್ಧ ವಿದ್ಯಾರ್ಥಿಗಳಿಂದ ಆರೋಪಗಳ ಸುರಿಮಳೆ:
ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರು, ಕಾಲೇಜಿನ ಸುತ್ತಮುತ್ತಲಿರುವ ಕೆಂಪು ಕಲ್ಲಿನ ಕೋರೆಯಿಂದ ಉಂಟಾಗುವ ಶಬ್ದದಿಂದ ತರಗತಿ ಕೇಳಲು ಆಗುತ್ತಿಲ್ಲ. ಜೊತೆಗೆ ಪರೀಕ್ಷಾ ಸಮಯದಲ್ಲಿ ಅಭ್ಯಾಸ ನಡೆಸಲು ಆಗುತ್ತಿಲ್ಲ. ಇನ್ನು ಹಾಸ್ಟೆಲ್ನಲ್ಲಿರುವ ವಿದ್ಯಾರ್ಥಿಗಳಿಗೆ ಇದರಿಂದ ನಿದ್ರೆ ಮಾಡಲೂ ಆಗುತ್ತಿಲ್ಲ. ಕಾಲೇಜಿನ ಆವರಣದಲ್ಲಿ ವಿಪರೀತ ಧೂಳು ಇದೆ. ನಮ್ಮ ವಸ್ತು ಹಾಗೂ ಬಟ್ಟೆ ಬರೆಗಳು ಧೂಳಿನಿಂದ ಕೂಡಿದೆ. ಆದ್ದರಿಂದ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.ಈ ಬಗ್ಗೆ ಡಿಸಿ, ತಹಶಿಲ್ದಾರ್ಗೆ ಮನವಿ ನೀಡಿದರೂ ಪ್ರಯೋಜನವಿಲ್ಲ. ಕಲ್ಲಿನ ಕೋರೆಯು ಅನಧಿಕೃತವಾಗಿದ್ದು, ಈ ಬಗ್ಗೆ ಜಿಲ್ಲಾಧಿಕಾರಿ, ತಹಶಿಲ್ದಾರ್, ಗ್ರಾಮ ಪಂಚಾಯತ್ ಸೇರಿದಂತೆ ಹಲವರಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ ಎಂದು ಆರೋಪಿಸಿದರು.
ರಾಜಧನ ಕಟ್ಟಿಯೇ ಕೋರೆ ನಡೆಸುತ್ತಿದ್ದೇವೆಂದ ಕೋರೆ ಮಾಲೀಕರು:
ಪ್ರತಿಭಟನೆಯ ವೇಳೆ ಸ್ಥಳಕ್ಕೆ ಬಂದ ಕೋರೆ ಮಾಲೀಕರು ಮಾಧ್ಯಮಗಳೊಂದಿಗೆ ಮಾತನಾಡಿ, ನಾವು ರಾಜಧನ ಕಟ್ಟಿಯೇ ಕಲ್ಲಿನ ಕೋರೆ ನಡೆಸುತ್ತಿದ್ದೇವೆ. ಇದರಿಂದ ಹಲವು ಕುಟುಂಬಗಳು ದಿನದೂಡುತ್ತಿವೆ. ಇಲ್ಲಿ ಮಾತ್ರವಲ್ಲಿ ಎಲ್ಲಾ ಕಡೆಯೂ ಈ ಗಣಿಗಾರಿಕೆ ನಡೆಯುತ್ತಿದೆ. ಈ ಬಗ್ಗೆ ನಾವು ಕೋರ್ಟಿಗೆ ಹೋಗುತ್ತೇವೆ ಎಂದರು.