ಉಡುಪಿ, ಮಾ 18 (DaijiworldNews/MS): ಕಾಂಗ್ರೆಸನ್ನು ಮುಳುಗಿಸುವುದಕ್ಕೆ ಬೇರೆ ಯಾರು ಬೇಕಾಗಿಲ್ಲ, ಕಾಂಗ್ರೆಸ್ ನವರೇ ಸಾಕು , ರಾಜ್ಯದಲ್ಲಿ ಉಸಿರಾಡುತ್ತಿರುವ ಕಾಂಗ್ರೆಸ್ ನ್ನು ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಸೇರಿ ಉಸಿರು ಗಟ್ಟಿಸುತ್ತಿದ್ದಾರೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.
ಉಡುಪಿಯಲ್ಲಿ ಮಾ.18ರ ಶುಕ್ರವಾರ ಮಾತನಾಡಿದ ಅವರು , ನಿರಂತರ ಓಟ್ ಬ್ಯಾಂಕ್ ಮಾಡಿ, ಓಲೈಕೆ ರಾಜಕಾರಣದಿಂದ ಕಾಂಗ್ರೆಸ್ ದೇಶದಲ್ಲಿ ನಾಪತ್ತೆಯಾಗಿದೆ. ಒಂದು ಕಾಲದಲ್ಲಿ 40-50 ವರ್ಷಗಳ ಕಾಲ ಉತ್ತರಪ್ರದೇಶದಲ್ಲಿ ಅವರೇ ರಾಜರಂತೆ ಇದ್ದು, ಉತ್ತರ ಪ್ರದೇಶ ಗೆದ್ದರೆ ಇಡೀ ದೇಶ ಗೆದ್ದಿತು ಎಂಬ ಭಾವನೆ ಇತ್ತು . ಆದರೆ ಇಷ್ಟು ಹೀನಾಯವಾಗಿ ಸೋತು ಕೆಳ ಹಂತಕ್ಕೆ ಬಂದರೂ ಕಾಂಗ್ರೆಸ್ ಗೆ ಬುದ್ಧಿ ಕಲಿತಿಲ್ಲ.ಕರ್ನಾಟಕದಲ್ಲಿ ಕಾಂಗ್ರೆಸ್ ಏನೋ ಉಸಿರಾಡ್ತಿದೆ , ಆದರೆ ಸಿದ್ದರಾಮಯ್ಯ, ಡಿಕೆಶಿ ಯವರು ಕಾಂಗ್ರೆಸನ್ನು ಉಸಿರುಗಟ್ಟಿಸುತ್ತಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಒಂದು ಧರ್ಮವನ್ನು ಜಾತಿಯನ್ನು ಓಲೈಕೆ ಮಾಡುತ್ತಿದ್ದು ಇದೇ ದೇಶದಲ್ಲಿ ಆಗುತ್ತಿರುವ ಅನಾಹುತಕ್ಕೆ ಕಾರಣ. ಕಾಂಗ್ರೆಸ್ ತಪ್ಪು ಮಾಡಿದ ಪರಿಣಾಮ ಕೇರಳ, ಕಾಶ್ಮೀರದ ಪರಿಸ್ಥಿತಿಗೆ ಕಾರಣ. ಹೀಗಾಗಿ ಕರ್ನಾಟಕವನ್ನು ಇನ್ನೊಂದು ಕಾಶ್ಮೀರ ಮಾಡಲು ಒಪ್ಪುದಿಲ್ಲ ಜನಬಿಡುವುದಿಲ್ಲ. ಮುಂದೆ ಭವಿಷ್ಯದಲ್ಲಿ ಮತ್ತೊಮ್ಮೆ ಕಾಂಗ್ರೆಸ್ ಗೆ ತಕ್ಕ ಪಾಠವನ್ನು ಕಲಿಸಲಿದ್ದಾರೆ ಎಂದು ಹೇಳಿದರು.
ಹಿಜಾಬ್ ವಿವಾದಕ್ಕೆ ಪ್ರತಿಕ್ರಿಯಿಸಿದ ಶೋಭಾ ಕರಂದ್ಲಾಜೆ, ಸಿದ್ದರಾಮಯ್ಯನವರು ಸ್ವತಃ ವಕೀಲರಾದರು ಹೈಕೋರ್ಟ್ ತೀರ್ಪನ್ನು ವಿಧಾನಸಭೆಯಲ್ಲಿ ವಿರೋಧ ಮಾಡ್ತಾರೆ ಎಂದರೆ ಅವರ ಮಾನಸಿಕತೆ ಅರ್ಥ ಆಗುತ್ತೆ. ಈ ದೇಶದ ಸಂವಿಧಾನವನ್ನು ಪ್ರತಿಯೊಬ್ಬ ನಾಗರಿಕನು ಗೌರವಿಸಬೇಕು. ನೆಲದ ಕಾನೂನನ್ನು ಪ್ರತಿಯೊಬ್ಬ ಗೌರವಿಸಬೇಕು. ಕೆಲವರಿಗೆ ತಾವು ಸಂವಿಧಾನಕ್ಕಿಂತಲೂ ಮೇಲು ಅಂಥ ಅನಿಸಿದೆ. ಹೈಕೋರ್ಟ್ ತೀರ್ಪಿಗಿಂತ ದಾರ್ಷ್ಟ್ಯ ದುರಹಂಕಾರವನ್ನು ತೋರಿಸ್ತಾ ಇದ್ದಾರೆ. ಇದಕ್ಕೆ ಕಾನೂನಿನಂತೆ ಶಿಕ್ಷೆ ಆಗಬೇಕು. ಮಕ್ಕಳಿಗೆ ಬೇಕಾಗಿರುವುದು ಒಳ್ಳೆಯ ಶಿಕ್ಷಣ. ಆದರೆ ಶಿಕ್ಷಣಕ್ಕೆ ಉದ್ಯೋಗಕ್ಕೆ ಧರ್ಮ ಇಲ್ಲ. ಮಕ್ಕಳು ಓದಿ ಬುದ್ದಿವಂತರಾಗಿ, ಉದ್ಯೋಗ ಪಡೆಯಬೇಕು, ಉತ್ತಮ ಶಿಕ್ಷಣ ಪಡೆದು ಸ್ವಾವಲಂಭಿಯಾಗಬೇಕು. ಆದರೆ ಇಲ್ಲಿ ಬಡ ಹೆಣ್ಣು ಮಕ್ಕಳನ್ನು ಹಿಜಾಬ್ ಹೆಸರಲ್ಲಿ ಪ್ರಚೋದಿಸಿದ್ದಾರೆ. ಹಿಜಾಬ್ ಗೆ ಬಡವರು ಶ್ರೀಮಂತರ ಭೇದ ಇಲ್ಲ. ಆದರೆ ಶ್ರೀಮಂತರು ಹಿಜಾಬ್ ಇಲ್ಲದೆ ತಿರುಗುತ್ತಾರೆ. ಹಿಜಾಬ್ ಇಲ್ಲದೆ ಶಿಕ್ಷಣ ಬೇಕಿಲ್ಲ ಅನ್ನುವ ಈ ವಾದವನ್ನು ವ್ಯವಸ್ಥಿತವಾಗಿ ಸಂಘಟನೆ ಮಾಡುತ್ತಿದೆ. ಇದರ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಹಚ್ಚಬೇಕಿದೆ. ಹೀಗಾಗಿ ವಿದ್ಯಾರ್ಥಿನಿಯರು ದಯಮಾಡಿ ಶಾಲೆಗೆ ಬನ್ನಿ, ಶಾಲೆಯ ಪ್ರಾಂಶುಪಾಲರು ಆಡಳಿತ ಮಂಡಳಿ ನಿಮ್ಮ ರಕ್ಷಣೆಯನ್ನು ನೋಡಿಕೊಳ್ಳುತ್ತಾರೆ. ಯಾರಿಗೂ ಆತಂಕ ಇಲ್ಲ ಎಂದು ಕರೆ ನೀಡಿದರು
ಹಿಂದೂ - ಮುಸ್ಲಿಂ ಹೆಣ್ಣುಮಕ್ಕಳು ಸ್ವಾವಲಂಬಿ ಆಗಬೇಕು ಎನ್ನುವುದು ನಮ್ಮ ಆದ್ಯತೆ . ಹೆಣ್ಣು ಮಕ್ಕಳಿಗೆ ಯಾರ ಕನಿಕರ ಬೇಕಾಗಿಲ್ಲ ಒಳ್ಳೆಯ ಶಿಕ್ಷಣ ಮತ್ತು ಉದ್ಯೋಗ ಸಿಕ್ಕರೆ ಸಾಕು ಕೈಗೆ ದುಡ್ಡು ಬಂದರೆ ದ್ವನಿಯೂ ಬರುತ್ತೆ ಅಂತ ಆಗಾಗ ಹೇಳ್ತೇನೆ. ಇದು ಎಲ್ಲಾ ಧರ್ಮದವರಿಗೂ ಅನ್ವಯಿಸುತ್ತೆ. ಯಾರ್ಯಾರದೋ ಷಡ್ಯಂತ್ರಕ್ಕೆ ನೀವು ಬಲಿಯಾಗಬೇಡಿ. ಮುಂದೆ ನಿಮ್ಮ ಜೀವನದಲ್ಲಿ ಅವರ್ಯಾರು ಬರೋದಿಲ್ಲ ಎಂದು ಹೇಳಿದರು.
ರಷ್ಯಾ- ಉಕ್ರೈನ್ ಯುದ್ಧದಲ್ಲಿ ಮೃತಪಟ್ಟ ನವೀನ್ ದೇಹವನ್ನು ಭಾರತಕ್ಕೆ ತರಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಈಗಲೂ ಅಲ್ಲಿ ಯುದ್ಧ ನಡೆಯುತ್ತಿರುವುದರಿಂದ ಮೃತ ದೇಹ ತರಲು ಕಷ್ಟಕರವಾಗಿದೆ . ಪ್ರಧಾನ ಮಂತ್ರಿಯವರು ಮತ್ತು ವಿದೇಶಾಂಗ ಸಚಿವರು ಬಗ್ಗೆ ಕಾಳಜಿ ವ್ಯಕ್ತಪಡಿಸಿದ್ದಾರೆ ಎಂದು ಸಚಿವೆ ಶೋಭಾ ಕರಂದ್ಲಾಜೆ ಅಭಿಪ್ರಾಯ ವ್ಯಕ್ತ ಪಡಿಸಿದರು.